ಸಿದ್ದರಾಮಯ್ಯ ಬಿಟ್ಟರೆ ಕಾಂಗ್ರೆಸ್‍ನಲ್ಲಿರೋ ಎಲ್ಲರೂ ಗೂಂಡಾಗಳೇ: ಶಾಸಕ ಯತ್ನಾಳ್

Update: 2022-05-09 14:52 GMT

ಕಲಬುರಗಿ, ಮೇ 9: ಅಝಾನ್ ವಿರುದ್ಧ ಅಭಿಯಾನ ನಡೆಸುತ್ತಿರುವವರ ವಿರುದ್ಧ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಆತ ಈ ದೇಶದ ಆಂತರಿಕ ಭಯೋತ್ಪಾದಕನಾಗಿದ್ದಾನೆ, ಸಿದ್ದರಾಮಯ್ಯ ಬಿಟ್ಟರೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಗೂಂಡಾಗಳೇ ಇದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸೋಮವಾರ ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್, ಒಂದು ಕಾಲದಲ್ಲಿ ಬೆಂಗಳೂರಿನ ಗೂಂಡಾ ಆಗಿದ್ದವನು. ಗೂಂಡಾಗಳ ಕೈಯಲ್ಲಿ ಕಾಂಗ್ರೆಸ್ ಕೊಟ್ಟು ಸೋನಿಯಾಗಾಂಧಿ ನಿದ್ರೆಗೆ ಜಾರಿದ್ದಾರೆ. ಸಿದ್ದರಾಮಯ್ಯ ಬಿಟ್ಟರೆ ಆ ಪಕ್ಷದಲ್ಲಿ ಎಲ್ಲರೂ ಗೂಂಡಾಗಳೇ ಇದ್ದಾರೆ ಎಂದು ಹೇಳಿದರು.

ಆರಗ ಜ್ಞಾನೇಂದ್ರ ವಿರುದ್ಧ ಯತ್ನಾಳ್ ಕಿಡಿ: ಈ ಮೊದಲೂ ನಾನು ಹೇಳಿದ್ದೆ, ಆರಗ ಜ್ಞಾನೇಂದ್ರ ಅವರೇ ನಿಮಗಿದು ನೀಗೋದಿಲ್ಲ ಎಂದು. ಸಿಎಂ ಅವರೇ, ಆರಗ ಅವರಿಗೆ ಕಂದಾಯ ಇಲ್ಲವೇ ಅರಣ್ಯ ಇಲಾಖೆ ಇಲ್ಲವೇ ಬೇರೆ ಯಾವುದಾದರೂ ನೀಡಿ, ಗೃಹ ಮಂತ್ರಿ ಸ್ಥಾನ ಯಾರಾದರೂ ಗಟ್ಟಿ ಇದ್ದವರಿಗೆ ಕೊಡಿ ಎಂದು ಸಲಹೆ ಕೊಟ್ಟಿದ್ದೆ ಎಂದಿದ್ದಾರೆ.

ಕೆಜಿ ಹಳ್ಳಿಯಿಂದಲೇ ಇದು ಶುರುವಾಗಿದೆ. ಅಲ್ಲಿ ಕಠಿಣ ಕ್ರಮ ಆಗಲಿಲ್ಲ, ಈಗ ನ್ಯಾಯಕ್ಕಾಗಿ ಹೋರಾಟ ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಶ್ರೀರಾಮಸೇನೆ ಕಾರ್ಯಕರ್ತರ ಬಂಧನಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಮಂಗಳವಾರ ದಿಲ್ಲಿಗೆ ಹೋಗುತ್ತಿದ್ದಾರೆ. ಹೈಕಮಾಂಡ್ ಅವರಿಗೆ ಬುದ್ಧಿವಾದ ಹೇಳಿ ಕಳಿಸಬೇಕು ಎಂದು ಹೈಕಮಾಂಡ್‍ಗೆ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News