ಪಿಎಸ್ಐ ಹಗರಣ: ಭ್ರಷ್ಟ ಸರಕಾರವನ್ನು ವಜಾಗೊಳಿಸುವಂತೆ ಕಲಬುರುಗಿಯಲ್ಲಿ ಸಿಎಫ್ಐ ಪ್ರತಿಭಟನೆ
ಕಲಬುರುಗಿ, ಮೇ 10: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಪಿಎಸ್ಐ 545 ಹುದ್ದೆಗಳ ನೇಮಕಾತಿಯಲ್ಲಿ ನಡೆದ ಭಾರೀ ಪ್ರಮಾಣದ ಹಗರಣದಲ್ಲಿ ಸಿ.ಐ.ಡಿ ನಡೆಸುತ್ತಿರುವ ತನಿಖೆಯಲ್ಲಿ ಪಾರದರ್ಶಕತೆಯ ಬಗ್ಗೆ ಸಂಶಯವಿದ್ದು, ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಮತ್ತು ಭ್ರಷ್ಟ ರಾಜ್ಯ ಬಿಜೆಪಿ ಸರಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ವತಿಯಿಂದ ಗುಲ್ಬರ್ಗದ ಜಗತ್ ಸರ್ಕಲ್ನಿಂದ ಡಿಸಿ ಕಚೇರಿಗೆ ಜಾಥ ನಡೆಸಿ ಪ್ರತಿಭಟಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಗಂಗಾವತಿ, ಭ್ರಷ್ಟಾಚಾರವನ್ನೇ ಉಸಿರಾಡುತ್ತಿರುವ ಬಿಜೆಪಿಯ ಹಗರಣದ ಸರಮಾಲೆಗಳ ಬಗ್ಗೆ ಪಾರದರ್ಶಕವಾಗಿ ನ್ಯಾಯಾಂಗ ತನಿಖೆಯಾದರೆ ಜೈಲುಗಳು ಬಿಜೆಪಿಯ ನಾಯಕರಿಂದಲೇ ತುಂಬಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಚಾಂದ್ ಸಲ್ಮಾನ್ ಮಾತನಾಡಿ, ಈಗಾಗಲೇ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿದಂತೆ ಬಿಜೆಪಿ, ಎಬಿವಿಪಿಯ ಹಲವಾರು ನಾಯಕರು ಬಂಧನಕ್ಕೊಳಪಟ್ಟಿದ್ದಾರೆ. ನೇಮಕಾತಿಯಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆ ಆದವರನ್ನು ಹುದ್ದೆ ನೀಡಿ ನ್ಯಾಯ ಪಾಲಿಸಬೇಕು ಎಂದು ಒತ್ತಾಯಿಸಿದರು.