ಕಬ್ಬಿನ ಬಾಕಿ ಕೊಡದಿದ್ದರೆ ಯಾರೇ ಇದ್ದರೂ ಕಾನೂನು ಕ್ರಮ: ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ

Update: 2022-05-11 16:13 GMT

ಬೆಂಗಳೂರು, ಮೇ 11: ‘ಕಬ್ಬು ಬೆಳೆಗಾರರಿಗೆ ಪಾವತಿ ಬಾಕಿ ವಿಚಾರವಾಗಿ ಯಾವುದೇ ರಾಜಿ ಇಲ್ಲ. ಸಕ್ಕರೆ ಕಾರ್ಖಾನೆಗಳ ಮಾಲಕರು ರಾಜಕೀಯ ಪಕ್ಷಗಳಲ್ಲಿ ಇದ್ದರೂ ರೈತರಿಗೆ ಬಾಕಿ ಕೊಡದಿದ್ದರೆ ಅವರ ವಿರುದ್ಧವೂ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು' ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಸ್ಪಷ್ಟಪಡಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಸಕ್ಕರೆ ಕಾರ್ಖಾನೆ ಮಾಲಕರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರಿಗೆ ಕಬ್ಬಿನ ಬಾಕಿ ಕೊಡದಿದ್ದರೆ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಹಿಂದಿನ ವರ್ಷ ಮನವಿ ಮಾಡಿದ ಹಿನ್ನೆಲೆಯಲ್ಲಿ ರೈತರಿಗೆ ಬಾಕಿ ಹಣ ನೀಡಿದ್ದರು. ಈ ವರ್ಷ ಇನ್ನೂ ಕಬ್ಬು ಕಟಾವು ನಡೆಯುತ್ತಿದ್ದು, 19,626 ಕೋಟಿ ರೂ.ರೈತರಿಗೆ ಕೊಡಿಸಬೇಕಿದ್ದು, ಆ ಪೈಕಿ 18,224 ಕೋಟಿ ರೂ. ಈಗಾಗಲೇ ಪಾವತಿ ಮಾಡಲಾಗಿದೆ' ಎಂದು ವಿವರ ನೀಡಿದರು.

ಸರಕಾರ ಸೂಚನೆ ಕೊಟ್ಟ ನಂತರ 400 ಕೋಟಿ ಕೊಟ್ಟಿದ್ದಾರೆ. ಶೇ. 93 ರಷ್ಟು ಹಣ ನೀಡಿದ್ದಾರೆ. ಬಾಕಿ 7% ಹಣವನ್ನು ಈ ತಿಂಗಳ ಅಂತ್ಯದೊಳಗೆ ನೀಡುವಂತೆ ಸೂಚಿಸಿದ್ದೇವೆ. 1,435 ಕೋಟಿ ಬಾಕಿ ಉಳಿದಿದೆ. ಇಂದಿನ ಸಭೆಯಲ್ಲಿ 200 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದಾರೆ. ನಾವು ಮುಂಜಾಗ್ರತ ಕ್ರಮವಾಗಿ ಈಗಲೇ ಕ್ರಮ ವಹಿಸಿದ್ದರಿಂದ ರಾಜ್ಯದ ರೈತರು ಬೀದಿಗಿಳಿಯದಂತೆ ನೋಡಿಕೊಳ್ಳಲಾಗಿದೆ ಎಂದರು.

‘ಮೂರು-ನಾಲ್ಕು ಕಾರ್ಖಾನೆಗಳು ಶೇ.100ರಷ್ಟು ಹಣ ಸಂದಾಯ ಮಾಡಿವೆ. ರಾಜ್ಯದಲ್ಲಿ ಎಥೆನಾಲ್ ಉತ್ಪಾದನೆಯನ್ನು 32 ಸಕ್ಕರೆ ಕಾರ್ಖಾನೆಗಳು ಆರಂಭಿಸಿವೆ. ಕೇಂದ್ರದಿಂದ 68 ಘಟಕಗಳು ಅನುಮತಿ ಪಡೆದಿವೆ. ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಸರಕಾರವೇ ನಡೆಸಲು 50 ಕೋಟಿ ರೂ. ನೀಡಲಾಗಿದೆ. ಮೈಸೂರಿನ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಕಬ್ಬು ಬೆಳೆದ ರೈತರ ಕಬ್ಬು ಮಹಾರಾಷ್ಟ್ರಕ್ಕೆ ಹೋಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. 

‘ರಾಜಕೀಯ ಪಕ್ಷಗಳ ನಾಯಕರು ಮಾಲಕತ್ವದ ಸಕ್ಕರೆ ಕಾರ್ಖಾನೆಗಳಿವೆ. ಆದರೆ, ನಾವು ಯಾವುದೇ ಮುಲಾಜಿಲ್ಲದೆ ರೈತರಿಗೆ ಹಣ ಪಾವತಿ ಮಾಡಿಸಲು ಪ್ರಯತ್ನ ಮಾಡಲಾಗುತ್ತಿದೆ. ರೈತ ಸಂಘಟನೆಗಳು ಮಾಡುವ ಆರೋಪದ ಬಗ್ಗೆ ಮಾಹಿತಿ ನೀಡಿದರೆ ಸರಕಾರ ಸೂಕ್ತ ಮಾಹಿತಿ ಒದಗಿಸಲಾಗುವುದು. ಯಾವುದೇ ದಾಖಲೆ ಮುಚ್ಚಿಡುವ ಪ್ರಶ್ನೆ ಇಲ್ಲ' ಎಂದು ಅವರು ಸ್ಪಷ್ಪಡಿಸಿದ್ದರು.

‘ಹಿಂದಿನ ವರ್ಷಗಳದ್ದು 11.58 ಕೋಟಿ ರೂ.ಬಾಕಿ ಇದೆ. ಕಾರ್ಖಾನೆ ಮಾಲಕರು ಇಳುವರಿ ಆಧಾರದಲ್ಲಿ ರೈತರಿಗೆ ಹೆಚ್ಚಿನ ಹಣ ಕೊಡಿಸಲು ತಂಡ ರಚನೆ ಮಾಡಲಾಗಿದ್ದು ವರದಿ ಪಡೆಯಲಾಗಿದೆ ಎಂದ ಅವರು, ಸಚಿವ ಮುರುಗೇಶ್ ನಿರಾಣಿ ಅವರ ಕಾರ್ಖಾನೆಯಿಂದಲೂ ಕಬ್ಬು ಬೆಳೆಗಾರರಿಗೆ ಬಾಕಿ ಇದೆ. ಅವರ ಪುತ್ರ ಸಭೆಗೆ ಆಗಮಿಸಿದ್ದರು. 40 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ. ಮೈಶುಗರ್ ಕಾರ್ಖಾನೆಗೆ 528 ಕೋಟಿ ರೂ.ನೀಡಲಾಗಿದೆ. ಅದರಲ್ಲಿ ಅವ್ಯವಹಾರವಾಗಿದೆ ಎಂಬ ಆರೋಪ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News