ಸಿಎಂ ಅಭ್ಯರ್ಥಿ ವಿಚಾರ: ಶಾಸಕ ಝಮೀರ್ ಅಹ್ಮದ್ ಹೇಳಿಕೆ ವೈಯಕ್ತಿಕ; ಬಿ.ಕೆ.ಹರಿಪ್ರಸಾದ್

Update: 2022-05-11 17:23 GMT

ಬೆಂಗಳೂರು, ಮೇ 11: ‘ಸಿದ್ದರಾಮಯ್ಯ ಅವರೇ ಮುಂದಿನ ಬಾರಿಯೂ ಮುಖ್ಯಮಂತ್ರಿಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ' ಎಂಬ ಚಾಮರಾಜಪೇಟೆ ಕ್ಷೇತ್ರದ ಶಾಸಕ ಝಮೀರ್ ಅಹ್ಮದ್ ಖಾನ್ ಅವರ ಹೇಳಿಕೆ ಅವರ ವೈಯಕ್ತಿಕ ಎಂದು ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸ್ಪಷ್ಟಣೆ ನೀಡಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾಕ್ ಸ್ವಾತಂತ್ರ್ಯದ ಮೇಲೆ ನಾವು ನಂಬಿಕೆ ಇಟ್ಟಿದ್ದು, ನಮ್ಮ ಪಕ್ಷದಲ್ಲಿ ಗೆದ್ದಿರುವ ಶಾಸಕರು ಜಿಲ್ಲಾ ಉಸ್ತುವಾರಿಗಳಿಗೆ ಮುಖ್ಯಮಂತ್ರಿ ಅಭ್ಯರ್ಥಿಗಳ ಬಗ್ಗೆ ಶಿಫಾರಸ್ಸು ಮಾಡುತ್ತಾರೆ. ನಂತರ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ. ವೈಯಕ್ತಿಕ ಅಭಿಪ್ರಾಯ ಹೇಳಲು ನಮ್ಮ ಪಕ್ಷದಲ್ಲಿ ಅವಕಾಶವಿದೆ' ಎಂದು ಸ್ಪಷ್ಟಣೆ ನೀಡಿದರು.

‘ಸಿಎಂ ಅಭ್ಯರ್ಥಿ ಯಾರೆಂದು ಅಂತಿಮವಾಗಿ ತೀರ್ಮಾನ ಕೈಗೊಳ್ಳುವವರು ಹೈಕಮಾಂಡ್. ಈ ರೀತಿ ಹೇಳಿಕೆ ಕೊಟ್ಟರೆ ತೊಂದರೆ ಇಲ್ಲ. ಒಬ್ಬರು ಇಂತಹ ಹೇಳಿಕೆ ಕೊಟ್ಟರೆ ಎಲ್ಲ 80 ಜನ ಆ ಹೇಳಿಕೆ ಕೊಡಬೇಕು ಎಂದೇನಿಲ್ಲ. ಅವರು ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದ್ದಾರೆ ಅಷ್ಟೇ’ ಎಂದು ಹರಿಪ್ರಸಾದ್ ಸ್ಪಷ್ಟಣೆ ನೀಡಿದರು.

‘ರಾಜ್ಯದಲ್ಲಿ ಶೋಷಿತರು, ಹಿಂದುಳಿದವರಿಗೆ ಮೀಸಲಾತಿ ಕೊಡಲು ಪ್ರಾರಂಭಿಸಿದ್ದೇ ನಾವು. ದಲಿತರ ಮೇಲಿನ ದೌರ್ಜನ್ಯ ಪ್ರಕರಣ ಬಗೆಹರಿದಿಲ್ಲ. ಜತೆಗೆ ಸಂವಿಧಾನ ಬದ್ಧವಾಗಿ ಇವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಬುಡಮೇಲು ಮಾಡುವ ಪ್ರಯತ್ನ ನಡೆಯುತ್ತಿದೆ. ಈ ನಕಲಿ ಪ್ರಮಾಣ ಪತ್ರಗಳನ್ನು ಬಿಜೆಪಿಯ ಮೇಲಿಂದ ಕೆಳಗಿನವರೆಗೂ ಬಹುತೇಕ ಮಂದಿ ಹೊಂದಿದ್ದಾರೆ. ಹೀಗಾಗಿ ಒಬ್ಬ ದಕ್ಷ ಹಾಗೂ ದುರ್ಬಲ ವರ್ಗಕ್ಕೆ ಸೇರಿದ ಅಧಿಕಾರಿ ಕ್ರಮ ತೆಗೆದುಕೊಳ್ಳಲು ಹೋದಾಗ ಅವರನ್ನು ವರ್ಗಾವಣೆ ಮಾಡುವುದು ಸರಿಯಲ್ಲ' ಎಂದು ಆಕ್ಷೇಪಿಸಿದರು.

‘ಮೀಸಲಾತಿ ವಿಚಾರದಲ್ಲಿ ಸಾಮಾಜಿಕ ನ್ಯಾಯ ಸಮಿತಿಯಲ್ಲಿ ನಾನು 10 ವರ್ಷಗಳ ಕಾಲ ಸದಸ್ಯನಾಗಿದ್ದೆ. ನಾವು ಪರಿಶಿಷ್ಟರಿಗೆ ಶೇ.18ರಷ್ಟು ಮೀಸಲಾತಿ ನೀಡಬೇಕಾಗಿದ್ದು, ಇದುವರೆಗೂ ಕೇವಲ ಶೇ.11 ರಷ್ಟು ಮಾತ್ರ ನೀಡಿದ್ದೇವೆ. ಇನ್ನು ಹಿಂದುಳಿದವರಿಗೆ ಶೇ.27ರಷ್ಟು ಇದ್ದು, ಕೊಡಲು ಸಾಧ್ಯವಾಗಿರುವುದು ಶೇ.19ರಷ್ಟು ಮಾತ್ರ. ಹೀಗಾಗಿ ದುರ್ಬಲ ವರ್ಗದವರಿಗೆ ದೌರ್ಜನ್ಯವಾಗುತ್ತಿದ್ದು, ಅದನ್ನು ಸರಿಪಡಿಸಲು ಮುಂದಾದವರಿಗೂ ಅನ್ಯಾಯವಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಧ್ವನಿ ಎತ್ತಿದೆ’ ಎಂದು ಅವರು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News