×
Ad

ವಿಜಯೇಂದ್ರಗೆ ಪರಿಷತ್ ಸದಸ್ಯ ಸ್ಥಾನ ನೀಡುವುದು ಕುಟುಂಬ ರಾಜಕಾರಣ ಅಲ್ಲವೇ: ಕಾಂಗ್ರೆಸ್ ಪ್ರಶ್ನೆ

Update: 2022-05-14 20:01 IST

ಬೆಂಗಳೂರು, ಮೇ 14: ‘ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮಂತ್ರಿಗಿರಿ ಹಾಗೂ ಪರಿಷತ್ ಸದಸ್ಯ ಸ್ಥಾನ ನೀಡಲು ಮುಂದಾಗಿರುವ ಬಿಜೆಪಿಯವರು ಉತ್ತರಿಸಲಿ. ಇದು ಕುಟುಂಬ ರಾಜಕಾರಣ ಅಲ್ಲವೇ?' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ವಿಜಯೇಂದ್ರರಿಗೆ ಸಿಗುತ್ತಿರುವ ಈ ಮನ್ನಣೆ ಬಿಎಸ್‍ವೈ ಪುತ್ರ ಎನ್ನುವ ಒಂದೇ ಕಾರಣಕ್ಕೆ ಅಲ್ಲವೇ? ‘ವಂಶವಾದ'ವನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿರುವುದು ಬಿಜೆಪಿಯೇ ಅಲ್ಲವೇ?' ಎಂದು ಪ್ರಶ್ನಿಸಿದೆ.

ಸೀಡ್‍ಲೆಸ್ ಕಡಲೆಬೀಜ: ಗೃಹಸಚಿವರ ತವರೂರಿನಲ್ಲಿಯೇ ಮಹಿಳೆಯ ಅತ್ಯಾಚಾರ. ಬಾಗಲಕೋಟೆಯಲ್ಲಿ ಮಹಿಳಾ ವಕೀಲೆಯ ಮೇಲೆ ಹಾಡಹಗಲೇ ಸಾರ್ವಜನಿಕವಾಗಿ ಭೀಕರ ಹಲ್ಲೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಂಬುದು ‘ಸೀಡ್‍ಲೆಸ್ ಕಡಲೆಬೀಜ'ದಂತಾಗಿದೆ! ‘ನಾನೀಗ ಎಕ್ಸ್‍ಪರ್ಟ್' ಎನ್ನುವ ಗೃಹಸಚಿವರಿಗೆ ಜನರ ರಕ್ಷಣೆಗಿಂತ ಪಿಎಸ್ಸೈ ನೇಮಕಾತಿ ಅಕ್ರಮ ಆರೋಪಿಗಳ ರಕ್ಷಣೆಯೇ ಮುಖ್ಯವಾಗಿದೆ' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

‘ಅಮಾಯಕರ ಆಸ್ತಿ ಕಬಳಿಕೆ ಮಾಡಿ ಬಂಗಲೆ ನಿರ್ಮಿಸುವ ಆಸೆ ಯಾಕೆ ರೇಣುಕಾಚಾರ್ಯರೇ? ಆಸ್ತಿ ವಿವಾದ ಕೋರ್ಟ್‍ನಲ್ಲಿ ಇರುವಾಗಲೇ ಅಲ್ಲಿ ನಿಮ್ಮ ‘ಪಂಚ ಕಮಲ' ಅರಳಿಸಲು ಹೊರಟಿದ್ದು ಏಕೆ? ಹೊನ್ನಾಳಿ ಹೋರಿಗೆ ಮೂಗುದಾರ ಹಾಕಲು ಸಾಧ್ಯವಿಲ್ಲವೇ?' ಎಂದು ಕಾಂಗ್ರೆಸ್ ಖಾರವಾಗಿ ಬಿಜೆಪಿಯನ್ನು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News