ಕುಂ.ವೀರಭದ್ರಪ್ಪ ಅವರಿಗೆ ಜೀವ ಬೆದರಿಕೆ ಪತ್ರ ವಿಚಾರ: ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಆಕ್ರೋಶ

Update: 2022-05-14 16:51 GMT

ಮೈಸೂರು,ಮೇ.14: ಇತ್ತೀಚೆಗೆ “ಸಹಿಷ್ಣು ಹಿಂದು”ಎಂಬ ಹೆಸರಿನ ಪುಂಡನೊಬ್ಬ ಸುಮಾರು 61 ಪ್ರಮುಖ ರಾಜಕೀಯ ನಾಯಕರು, ಸಾಮಾಜಿಕ ಚಿಂತಕರು, ಧಾರ್ಮಿಕ ಮುಖಂಡರು ಮತ್ತು ಪ್ರಗತಿಪರ ಚಿಂತಕರನ್ನು ಕೊಲ್ಲುವುದಾಗಿ ಬೆದರಿಸಿ ವಿಚಾರವಾದಿ ಕುಂ.ವೀರಭದ್ರಪ್ಪ ಅವರಿಗೆ ಪತ್ರ ಬರೆದಿರುವುದು ಅವಿವೇಕದ ಪರಮಾವಧಿಯಾಗಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಶನಿವಾರ ಮಾಧ್ಯಮ ಹೇಳಿಕೆ ನೀಡಿರುವ ಅವರು,  ಶೋಷಿತ ಸಮುದಾಯಗಳ ಬೆವರು, ರಕ್ತ ಮತ್ತು ಶ್ರಮಗಳನ್ನು ಬಂಡವಾಳವಾಗಿಸಿಕೊಂಡು ಧರ್ಮ ಮತ್ತು ಸಂಪ್ರದಾಯಗಳ ಹೆಸರಿನಲ್ಲಿ ಬಹುಜನರನ್ನು ದಮನಿಸುವ ಸಂವಿಧಾನ ವಿರೋಧಿ ಶಕ್ತಿಗಳ ಹುನ್ನಾರಗಳನ್ನು ಸಾಂವಿಧಾನಿಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ಬಯಲುಗೊಳಿಸುತ್ತಿರುವ ಪ್ರಗತಿಪರ ಚಿಂತಕರು ಮತ್ತು ಶಕ್ತಿಗಳ ಬಾಯಿ ಮುಚ್ಚಿಸುವ ಕೆಲಸವನ್ನು ಕೂಡಲೇ ಹಿಂದುತ್ವವಾದಿಗಳು ನಿಲ್ಲಿಸಬೇಕು ಎಂದು ಆಗ್ರಹಿಸಿದರು. 

ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಪ್ರಾಯೋಜಿತ ಹಿಂದುತ್ವವಾದಿಗಳ ಅಬ್ಬರ, ಅಟ್ಟಹಾಸ, ದೌರ್ಜನ್ಯ ಮತ್ತು ಶೋಷಣಾ ಪ್ರವೃತ್ತಿಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಮೇಲೆ ಬಲಾಢ್ಯರು ಜಾತಿ ಬಲ, ಧನ ಬಲ ಮತ್ತು ಅಧಿಕಾರ ಬಲಗಳಿಂದ ನಿರಂತರ ದೌರ್ಜನ್ಯ ನಡೆಯುತ್ತಿರುವುದನ್ನು ಸರ್ಕಾರ ನಿರ್ಲಕ್ಷಿಸಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಹೇಳಿದರು.

 ಹಿಂದುತ್ವವಾದಿಗಳು ಬಂಧುತ್ವ, ಭ್ರಾತೃತ್ವ, ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಬಹುತ್ವ, ಧರ್ಮ ನಿರಪೇಕ್ಷತೆ ಮೊದಲಾದ ಸಾಂವಿಧಾನಿಕ ಮೌಲ್ಯಗಳನ್ನು ನಾಶಪಡಿಸಿ ಭಾರತದಲ್ಲಿ ಬುಲ್ಡೋಜರ್ ಪ್ರಭುತ್ವ ಸ್ಥಾಪಿಸಲು ಹೊರಟಿರುವುದು ತರವಲ್ಲ. ಶಿಕ್ಷಣದ ಕೇಸರೀಕರಣ, ಆರ್ಥಿಕ ಉದಾರೀಕರಣ, ಸಾಮಾಜಿಕ ದಬ್ಬಾಳಿಕೆ, ರಾಜಕೀಯ ಭ್ರಷ್ಟಾಚಾರ ಮೊದಲಾದವುಗಳಿಂದಾಗಿ ಭಾರತದ ಪ್ರಜಾಸತ್ತೆಗೆ ಬಹುದೊಡ್ಡ ಅಪಾಯ ಎದುರಾಗಿದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಜನಸಮುದಾಯಗಳನ್ನು ದೇವರು ಮತ್ತು ಮಂದಿರಗಳ ಹೆಸರಿನಲ್ಲಿ ದಾರಿ ತಪ್ಪಿಸಿ ಅಧಿಕಾರಕ್ಕೆ ಬಂದ ಎನ್‍ಡಿಎ ಸರ್ಕಾರದ ವಾರಸುದಾರರು ರಾಷ್ಟ್ರೀಯ ವಿದ್ವಂಸಕರ ಕೂಟದಲ್ಲಿ ವಿಜೃಂಭಿಸುತ್ತಿರುವುದರಿಂದ ಬಹುಸಂಖ್ಯಾತ ಹಿಂದುಳಿದವರು ಜೀವ ಕೈ ಹಿಡಿದುಕೊಂಡು ಬದುಕುತ್ತಿರುವ ಅಸಹನೀಯ ಸ್ಥಿತಿ ನಿರ್ಮಾಣವಾಗಿದೆ. “ತಾವು ತಿನ್ನುವುದಿಲ್ಲ ತಿನ್ನುವುದಕ್ಕೂ ಬಿಡುವುದಿಲ್ಲ” ಎಂಬ ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದವರು ಇಂದು ಭಾರತದಲ್ಲಿ ಬಹುದೊಡ್ಡ ಮೇದಪ್ಪ ಗಳಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಅಟ್ಟಹಾಸದಿಂದ ವರ್ತಿಸಿ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಅರಾಜಕತೆ ಸೃಷ್ಟಿಸಿದ್ದಾರೆ. 

ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವನ್ನು ಹಿಂದುತ್ವ ಪ್ರಯೋಗಶಾಲೆಯನ್ನಾಗಿ ಪರಿವರ್ತಿಸಿ ಜನಾಂಗೀಯ ದ್ವೇಷ ಹೆಚ್ಚಿಸುವ ಕಾರ್ಯದಲ್ಲಿ ನಮ್ಮನ್ನು ಆಳುವವರು ನಿರತರಾಗಿದ್ದಾರೆ. ಹುಟ್ಟಿನಿಂದ ಸಾಯುವತನಕ ಅಪ್ಪಟ ಭಾರತೀಯರಾಗಿರುವ ಅಲ್ಪಸಂಖ್ಯಾತ ಸಮುದಾಯಗಳನ್ನು ಅತಂತ್ರರನ್ನಾಗಿಸುವ ಹಿಂದುತ್ವವಾದಿಗಳ ಹುನ್ನಾರವನ್ನು ಬಹುಸಂಖ್ಯಾತ ಹಿಂದುಳಿದ ಸಮುದಾಯಗಳು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹಿಂದುಳಿದವರ ಅಜ್ಞಾನವನ್ನೇ ಬಂಡವಾಳವಾಗಿಸಿಕೊಂಡು ಕೋಮುಭಾವನೆಗಳನ್ನು ಕೆರಳಿಸಿ ಮತ್ತೊಮ್ಮೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಹಿಂದುತ್ವವಾದಿಗಳು ಕಾರ್ಯನಿರತರಾಗಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News