ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ: 11 ಪ್ರಕರಣಗಳಿಗೆ ಹೈಕೋರ್ಟ್ ತಡೆಯಾಜ್ಞೆ

Update: 2022-05-18 12:01 GMT

ಹುಬ್ಬಳ್ಳಿ, ಮೇ 18: ಹಳೇ ಹುಬ್ಬಳ್ಳಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿಕೊಂಡಿದ್ದ 12 ಪ್ರಕರಣಗಳ ಪೈಕಿ 11 ಪ್ರಕರಣಗಳಿಗೆ ಹೈಕೋರ್ಟ್, ಮಧ್ಯಂತರ ತಡೆಯಾಜ್ಞೆ ನೀಡಿದೆ. 

ಹಳೇ ಹುಬ್ಬಳ್ಳಿಯಲ್ಲಿ ಎ.16ರಂದು ನಡೆದ ಗಲಭೆಗೆ ಸಂಬಂಧಿಸಿ, ಹಳೆಯ ಹುಬ್ಬಳ್ಳಿಯ ಪೊಲೀಸ್ ಠಾಣೆ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಗಲಾಟೆ ಮಾಡಿದ್ದ ಆರೋಪದಲ್ಲಿ 157 ಜನರ ವಿರುದ್ಧ 12 ಪ್ರಕರಣ ದಾಖಲಾಗಿವೆ.

ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ದೂರುಗಳನ್ನು ದಾಖಲಿಸಿಕೊಂಡಿರುವುದು ಸರಿಯಲ್ಲ. ಹೀಗಾಗಿ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣಗಳು ಅನುರ್ಜಿತಗೊಳಿಸಬೇಕು ಎಂದು ಮಹಮ್ಮದ್ ಆರೀಫ್ ನಾಗರಾಳ ಸೇರಿದಂತೆ ಇತರ 157 ಜನರು ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ವಕೀಲರ ವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಪೊಲೀಸರು ದಾಖಲಿಸಿಕೊಂಡಿದ್ದ 12 ಪ್ರಕರಣಗಳ ಪೈಕಿ, 11 ಪ್ರಕರಣಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿ, ವಿಚಾರಣೆಯನ್ನು ಜೂ.7ಕ್ಕೆ ಮುಂದೂಡಿದೆ. ಅರ್ಜಿದಾರರ ಪರವಾಗಿ ವಕೀಲರಾದ ವಿಶ್ವನಾಥ ಬೀಚಗತ್ತಿ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News