ಕೊಡಗು: ಮತಾಂತರ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಕೇರಳ ಮೂಲದ ಕ್ರೈಸ್ತ ದಂಪತಿಗೆ ಜಾಮೀನು
Update: 2022-05-21 16:23 GMT
ಮಡಿಕೇರಿ: ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಳ್ಳಿ ಗ್ರಾಮದ ಮೂರು ಎಕರೆ ಪೈಸಾರಿ ಕಾಲೋನಿಯಲ್ಲಿ ಮತಾಂತರಕ್ಕೆ ಯತ್ನಿಸುತ್ತಿದ್ದ ಆರೋಪದಡಿ ಬಂಧಿಸಲ್ಪಟ್ಟಿದ್ದ ಕೇರಳ ಮೂಲದ ಕ್ರೈಸ್ತ ದಂಪತಿಗಳಿಗೆ ಜಾಮೀನು ದೊರೆತಿದೆ.
ಮೂರು ಏಕರೆ ಪೈಸಾರಿಯ ಪಣಿ ಎರವರ ಮುತ್ತ ಎಂಬವರ ಮನೆಗೆ ಮೇ 18 ರಂದು ಬಂದ ಕೇರಳದ ಮಾನಂದವಾಡಿಯ ವಿ.ಕುರಿಯಚ್ಚನ್ (62) ಹಾಗೂ ಆತನ ಪತ್ನಿ ಸಲೇನಮ್ಮ(57) ಬಲವಂತದ ಮತಾಂತರಕ್ಕೆ ಯತ್ನಿಸಿ, ಆಮಿಷವೊಡ್ಡಿರುವುದಾಗಿ ಆರೋಪಿಸಲಾಗಿತ್ತು.
ಮುತ್ತ ನೀಡಿದ ದೂರಿನನ್ವಯ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಬಂಧನಕೊಳಪಡಿಸಲಾಗಿತ್ತು. ನಂತರ ಅದೇ ದಿನ ವಿರಾಜಪೇಟೆ ಕೋರ್ಟ್ಗೆ ಹಾಜರು ಪಡಿಸಲಾಗಿತ್ತು. ಮೇ 19 ರಂದು ಆರೋಪಿಗಳಿಗೆ ಜಾಮೀನು ದೊರೆತ್ತಿದ್ದು, ಆರೋಪಿಗಳ ವಿರುದ್ಧ ಹಳೆಯ ಮತಾಂತರ ನಿಷೇಧ ಕಾಯ್ದೆಯನ್ವಯ ಪ್ರಕರಣ ದಾಖಲಿಕೊಳ್ಳಲಾಗಿತ್ತು ಎಂದು ಕುಟ್ಟ ಠಾಣಾಧಿಕಾರಿ ಮಹದೇವು ತಿಳಿಸಿದ್ದಾರೆ.