ಮೈಸೂರು: ತಾಳಿ ಕಟ್ಟುವ ವೇಳೆ ಮದುವೆಗೆ ನಿರಾಕರಿಸಿದ ವಧು!
ಮೈಸೂರು,ಮೇ.22: ಮದುವೆ ಮಂಟಪದಲ್ಲಿ ತಾಳಿ ಕಟ್ಟುವ ವೇಳೆಯಲ್ಲಿ ವಧು ನಿರಾಕರಿಸಿ ಕುಸಿದು ಬಿದ್ದಂತೆ ನಾಟಕವಾಡಿ ಪ್ರೀತಿಸಿದವನನ್ನೇ ಮದುವೆಯಾಗುವುದಾಗಿ ಹಠ ಹಿಡಿದ ಪ್ರಸಂಗವೊಂದು ನಡೆದಿದೆ.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಗ್ರಾಮವೊಂದರ ಯುವಕನೊಂದಿಗೆ ವಿವಾಹ ನಿಶ್ಚಯವಾಗಿ ನಗರದ ಕಲ್ಯಾಣ ಮಂಟಪವೊಂದರಲ್ಲಿ ಮದುವೆಯ ಎಲ್ಲಾ ಸಿದ್ದತೆಗಳನ್ನು ರವಿವಾರ ಕೈಗೊಳ್ಳಲಾಗಿತ್ತು. ಆದರೆ ವಧು ತನ್ನ ಪಕ್ಕದ ಮನೆಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಯುವಕ ಮದುವೆಯಾಗುವ ವರನಿಗೆ ದೂರವಾಣಿ ಕರೆ ಮಾಡಿ ನಾನು ಅವಳನ್ನು ಪ್ರೀತಿಸುತ್ತಿದ್ದು, ಅವಳನ್ನು ಮದುವೆಯಾಗಂದತೆ ಮನವಿ ಮಾಡಿದ್ದಾನೆ. ಈ ಸಂಬಂಧ ವರನ ಕಡೆಯವರು ವಧುವನ್ನು ವಿಚಾರಿಸಲಾಗಿ ಆಕೆ ಹಾಗೆನು ಇಲ್ಲ ಎಂದು ಮದುವೆಗೆ ಸಿದ್ಧಳಾಗಿದ್ದಾಳೆ ಎನ್ನಲಾಗಿದೆ.
ಆದರೆ ಕೊನೆ ಘಳಿಗೆಯ ತಾಳಿ ಕಟ್ಟುವ ವೇಳೆ ಕುಸಿದು ಬಿದ್ದಂತೆ ನಾಟಕವಾಡಿ ತಾನು ಪ್ರೀತಿಸುತ್ತಿದ್ದ ಯುವಕನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ಇದರಿಂದ ಆತಂಕಗೊಂಡ ವರನ ಮನೆಯವರು ಆಕೆ ಚೀಮಾರಿ ಹಾಕಿದ್ದಾರೆ ಎನ್ನಲಾಗಿದೆ. ಮೊದಲೇ ಈ ವಿಚಾರ ತಿಳಿಸಿದ್ದರೆ ನಾವು ಈ ಮದುವೆಯನ್ನೇ ಮಾಡಿಕೊಳ್ಳುತ್ತಿರಲಿಲ್ಲ. ನೆಂಟರು, ಸಂಬಂಧಿಕರು ಸ್ನೇಹಿತರು ಮತ್ತು ಗ್ರಾಮಸ್ಥರನ್ನೆಲ್ಲಾ ಕರೆದು ಕಡೆ ಗಳಿಗೆಯಲ್ಲಿ ಈ ರೀತಿ ಮಾಡಿದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದುವೆಯಾಗಲು ನಿರಾಕರಿಸಿದ ವಧುವಿನ ನಡೆಗೆ ಕೋಪಗೊಂಡ ವರನ ಕಡೆಯವರು ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಪೊಲೀಸರು ವಧುವನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.