‘ಗೋಹತ್ಯೆ ನಿಷೇಧ ಕಾಯ್ದೆ' ಜಾರಿ; ಪಶುವೈದ್ಯರ ರಕ್ಷಣೆಗೆ ಆಗ್ರಹ

Update: 2022-05-22 15:07 GMT
ಸಾಂದರ್ಭಿಕ ಚಿತ್ರ

ಬೆಂಗಳೂರು ಮೇ 22: ಚನ್ನಪಟ್ಟಣದಲ್ಲಿ ಕರ್ತವ್ಯನಿರತ ಪಶುವೈದ್ಯಾಧಿಕಾರಿ ಡಾ.ಗಿರೀಶ್ ಮೇಲೆ ಹಲ್ಲೆಯನ್ನು ನಡೆಸಿರುವುದು ಖಂಡನೀಯ. ರಾಜ್ಯದಲ್ಲಿ ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ವೈದ್ಯರಂತೆ, ಪಶುವೈದ್ಯರನ್ನೂ ಕಾನೂನಿನ ಅಡಿಯಲ್ಲಿ ರಕ್ಷಣೆ ನೀಡುವಂತೆ ರಾಜ್ಯ ಪಶುವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಎಸ್.ಸಿ.ಸುರೇಶ್ ಆಗ್ರಹಿಸಿದ್ದಾರೆ. 

ಗೋಹತ್ಯೆ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಸಂದರ್ಭದಲ್ಲಿ ಅನೇಕ ಪಶುವೈದ್ಯರಿಗೆ ಜೀವಭಯವಿದ್ದು ಇತ್ತೀಚೆಗೆ ಹಲ್ಲೆಯೂ ನಡೆದಿದೆ. ಅದರಲ್ಲೂ ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆದಿರುವುದು ನಿಜವಾಗಿಯೂ ವಿಷಾದನೀಯ. ಇದನ್ನು ಕರ್ನಾಟಕ ಪಶುವೈದ್ಯಕೀಯ ಸಂಘವು ಉಗ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಕಾಯಿದೆಯನ್ನು ರೂಪಿಸುವಾಗ ಇಲಾಖೆಯ ಅಧಿಕಾರಿಗಳು ತಾಂತ್ರಿಕ ಮಾಹಿತಿಯನ್ನು ನೀಡಿರುವುದು ಮಾತ್ರ ಪಶುವೈದ್ಯರ ಕರ್ತವ್ಯವಾಗಿದೆ. ಉಳಿದಂತೆ ವಾಣಿಜ್ಯ ಮಳಿಗೆ, ಉದ್ಯಮವನ್ನು ತಡೆಯುವ, ಮುಚ್ಚಿಸುವ ಕರ್ತವ್ಯವು ಆರಕ್ಷಕ ಇಲಾಖೆಗೆ ಸೇರಿದ್ದಾದೆ. ಆದುದರಿಂದ ಗೋ ಹತ್ಯೆ ನಿಷೇಧ ಕಾಯಿದೆಯನ್ನು ಜಾರಿ ಮಾಡುವ ಸಂದರ್ಭದಲ್ಲಿ ಪಶುವೈದ್ಯರ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ನಮೂದಿಸಿ ವಿಶೇಷ ಕಾನೂನ್ನು ರೂಪಿಸಬೇಕು ಎಂದು ಸುರೇಶ್ ಒತ್ತಾಯಿಸಿದ್ದಾರೆ.

ಪಶುವೈದ್ಯರ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿರುವಂತೆ ಅಪರಾಧಿಗಳನ್ನು ಬಂಧಿಸಲು/ಶಿಕ್ಷಿಸಲು ಉಗ್ರ ಕಾನೂನು ರೂಪಿಸಬೇಕು ಅಥವಾ ವೈದ್ಯರ ರಕ್ಷಣೆಯ ಕಾನೂನಿನ ಅಡಿಯಲ್ಲಿ ಪಶುವೈದ್ಯರನ್ನು ಪರಿಗಣಿಸುವಂತೆ ಅವರು ಒತ್ತಾಯಿಸಿದ್ದಾರೆ.

ಡಾ.ಗಿರೀಶ್ ಮೇಲೆ ನಡೆದಿರುವ ಹಲ್ಲೆಯಲ್ಲಿ ಭಾಗಿಯಾಗಿರುವ ಎಲ್ಲ ದುಷ್ಕರ್ಮಿಗಳನ್ನು ಈ ಕೂಡಲೇ ಬಂಧಿಸಿ ಉಗ್ರಶಿಕ್ಷೆ ವಿಧಿಸಲು ಸಂಘವು ಆಗ್ರಹಿಸುತ್ತದೆ.  ಗೋಹತ್ಯೆ ನಿಷೇಧ ಕಾಯಿದೆಯನ್ನ ಜಾರಿಗೊಳಿಸುವ ಸಂಬಂಧ ಪಶುವೈದ್ಯರ ನಿಖರವಾದ ಜವಾಬ್ದಾರಿಗಳನ್ನು ಸರಕಾರ ರೂಪಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು. ಹಾಗೂ ಅಲ್ಲಿಯವರೆಗೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ಪಶುವೈದ್ಯರು ಪಾಲ್ಗೊಳ್ಳುವುದಿಲ್ಲವೆಂದು ಸಂಘ ತೀರ್ಮಾನಿಸಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಶಿವರಾಮ್ ಎ.ಡಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News