×
Ad

ಕಣ ಕಣದಲ್ಲೂ ದ್ವೇಷ ತುಂಬಿಕೊಂಡವರು ನಿಮ್ಮ ಮಕ್ಕಳ ಭವಿಷ್ಯ ನಿರ್ಧರಿಸಬೇಕೇ: ಪ್ರಕಾಶ್ ರಾಥೋಡ್ ಪ್ರಶ್ನೆ

Update: 2022-05-23 17:25 IST

ಬೆಂಗಳೂರು, ಮೇ 23: ‘ನಿರ್ಲಜ್ಜತನವನ್ನು ಸಂಸ್ಕಾರ ಮಾಡಿಕೊಂಡವರು ಪಠ್ಯ ಪುಸ್ತಕ ಸಮಿತಿಗೆ ಬರುವಂತಾಗಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬೌದ್ಧಿಕ ದಾರಿದ್ರ್ಯ. ಇದು ಕನ್ನಡ ಸಂಸ್ಕೃತಿಗೆ ಎಸಗಿದ ಅಪಚಾರ. ಬಸವ-ಕುವೆಂಪು ಅವರ ವಿಚಾರಧಾರೆ ಬಗ್ಗೆ ಒಳಗೊಳಗೇ ಉರಿ ಎಷ್ಟಿದೆ ಎನ್ನುವ ವಿಕೃತಿ ಹೊರಗೆ ಬಂದಿದೆ. ಈ ವಿಕೃತಿ ಜತೆ ಬಿಜೆಪಿ ಮಿಲನ ಮಾಡಿಕೊಂಡಿದೆ' ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಟೀಕಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಪೋಷಕರೇ, ಇಂತಹ ಪಠ್ಯವನ್ನು ನಿಮ್ಮ ಮಕ್ಕಳು ಓದಬೇಕೇ? ತೀರ್ಮಾನಿಸಿ. ಪಠ್ಯಪುಸ್ತಕ ಪರಿಷ್ಕರಣೆ ಕುರಿತು ತಜ್ಞರೇನು ಹೇಳುತ್ತಾರೆ? ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನು ಕಟುಕ ಮನಸ್ಥಿತಿಯ ವಿಕೃತರಿಗೆ ಒಪ್ಪಿಸಲು ಸಿದ್ಧರಿದ್ದಾರಾ? ಕಣ ಕಣದಲ್ಲೂ ದ್ವೇಷ ತುಂಬಿಕೊಂಡವರು ನಿಮ್ಮ ಮಕ್ಕಳ ಭವಿಷ್ಯ ನಿರ್ಧರಿಸಬೇಕೇ? ಹೇಳಿ' ಎಂದು ಪ್ರಶ್ನಿಸಿದ್ದಾರೆ.

‘ಭಾರತದ ಸ್ವಾತಂತ್ರ್ಯ ವೀರರ ಬಗ್ಗೆ ಗೌರವ ಇಲ್ಲದವರ ಮೇಲೆ, ಕನ್ನಡ ನೆಲ-ಜಲ-ಸಂಸ್ಕೃತಿ-ಭಾಷೆ -ನಾಡಗೀತೆ ಬಗ್ಗೆ ಗೌರವ ಇಲ್ಲದವರ ಮೇಲೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಕ್ಕೆ ಗೌರವ ಜಾಸ್ತಿ. ಏಕೆಂದರೆ ನೀವು ಬ್ರಿಟಿಷರ ಪರವಾಗಿದ್ದವರು. ಈಗ ದೇಶದ ಆಸ್ತಿ ಮಾರುತ್ತಿರುವವರು. ನಾಚಿಕೆ ಆಗಬೇಕು ನಿಮ್ಮ ಯೋಗ್ಯತೆಗೆ. ನಿರ್ಲಜ್ಜತನದ ನಿಮ್ಮ ಸಂಸ್ಕಾರಕ್ಕೆ' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

‘ದೇಶಕ್ಕಾಗಿ ಹೋರಾಡಿದವರಿಗೆ ದೇಶದ ಬಗ್ಗೆ ಪ್ರೀತಿ ಇರುತ್ತದೆ. ನಾಡು ಕಟ್ಟಿದವರಿಗೆ ನಾಡಿನ ಬಗ್ಗೆ ಪ್ರೀತಿ ಇರುತ್ತದೆ. ಬ್ರಿಟಿಷರ ಚಮಚಾಗಳಾಗಿದ್ದವರಿಗೆ ದೇಶದ ಬಗ್ಗೆ ಪ್ರೀತಿ ಬರಲು ಸಾಧ್ಯವಿಲ್ಲ. ಹಾಗೆಯೇ ನಾಡು ಕಟ್ಟುವ ಪ್ರಕ್ರಿಯೆಯಲ್ಲಿ ಯಾವತ್ತೂ ತೊಡಗಿಸಿಕೊಳ್ಳದವರಿಗೆ ನಾಡ ಗೀತೆ ಬಗ್ಗೆ ಪ್ರೀತಿ ಬರಲು ಹೇಗೆ ಸಾಧ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ?' ಎಂದು ಪ್ರಕಾಶ್ ರಾಥೋಡ್ ಪ್ರಶ್ನಿಸಿದ್ದಾರೆ.

‘ಜಗದೀಶ್ ಶೆಟ್ಟರ್ ಅವರೇ ನಿಮ್ಮ ಈ ಹೇಳಿಕೆ ಓದಿ ಮೊದಲಿಗೆ ಆಶ್ಚರ್ಯವಾಗಿದೆ. ಏಕೆ ಗೊತ್ತಾ? ಬಸವಾದಿ ಶರಣರ ಪರಂಪರೆ, ಹೆಂಗ್ ಪುಂಗ್ಲಿ ಪರಂಪರೆ. ಇವೆರಡರಲ್ಲಿ ನಿಮ್ಮ ಆಯ್ಕೆ ಯಾವುದು ಎನ್ನುವ ಪ್ರಶ್ನೆ ನಾನೇ ಹಾಕಿಕೊಂಡೆ. ಈಗ ನಿಮಗೂ ಇದೇ ಪ್ರಶ್ನೆ ಕೇಳುತ್ತಿದ್ದೇನೆ. ನಿಮ್ಮ ಆಯ್ಕೆ ಯಾವುದು? ಕಲಬೇಡ-ಕೊಲಬೇಡ ಹುಸಿಯ ನುಡಿಯಲು ಬೇಡ'

-ಪ್ರಕಾಶ್ ರಾಥೋಡ್ ವಿಧಾನ ಪರಿಷತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News