‘ಜಾತಿ ಸಮಾವೇಶ' ಮಾಡುವ ಸಿದ್ದರಾಮಯ್ಯ ಡೋಂಗಿ ಜಾತ್ಯತೀತ ನಾಯಕ: ಕುಮಾರಸ್ವಾಮಿ

Update: 2022-05-24 13:28 GMT

ಬೆಂಗಳೂರು, ಮೇ 24: ‘ನಮ್ಮ ಪಕ್ಷದ ಬಗ್ಗೆ ಆರೇಳು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಡೋಂಗಿ ಜಾತ್ಯತೀತ ನಾಯಕರು ಸುಳ್ಳು ಪ್ರಚಾರ ಮಾಡುತ್ತಿದ್ದು ಅವರಿಗೆ ತಕ್ಕ ಪಾಠ ಕಲಿಸುತ್ತೇವೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್ ಪಕ್ಷವನ್ನು ಬಿಜೆಪಿ ‘ಬಿ' ಟೀಂ ಎಂದು ಬಿಂಬಿಸಲು ಪ್ರಯತ್ನ ಮಾಡಿದ್ದಾರೆ, ಅದನ್ನು ಇನ್ನೂ ಮುಂದುವರಿಸುತ್ತಿದ್ದಾರೆ. ಈಚೆಗೆ ತುಮಕೂರಿನಲ್ಲೂ ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತಾಡಿದ್ದಾರೆ. ಅವರೇ ಜಾತಿವಾರು ಸಮಾವೇಶ ಮಾಡಿಕೊಂಡು ನಾವು ಜಾತ್ಯತೀತರು ಎಂದು ಭಂಡತನ ಪ್ರದರ್ಶನ ಮಾಡುತ್ತಿದ್ದಾರೆ' ಎಂದು ಕಿಡಿಕಾರಿದರು.

‘ಬಿಜೆಪಿ ಜತೆ ಸರಕಾರ ಮಾಡಿದಾಗಲೂ ಕೋಮು ಸಂಘರ್ಷಕ್ಕೆ ಅವಕಾಶ ಕೊಡಲಿಲ್ಲ. ಒಂದು ಸಣ್ಣ ಕೋಮು ಸಂಘರ್ಷ ಘಟನೆ ನಡೆಯಲಿಲ್ಲ. ಆದರೆ ಈಗ ಏನಾಗಿದೆ? ಅನೇಕ ತಿಂಗಳಿನಿಂದ ಸಮಾಜವನ್ನು ಒಡೆಯುವ ಘಟನೆಗಳು ನಡೆಯುತ್ತಿವೆ. ಇದಕ್ಕೆ ಕಾರಣ ಯಾರು? ಇಂಥ ಸರಕಾರ ಬರಲು ಕಾರಣ ಯಾರು? ಎನ್ನುವುದು ಜನತೆಗೆ ಗೊತ್ತಿದೆ' ಎಂದು ಅವರು ಟೀಕಿಸಿದರು.

‘ಪಕ್ಷ ಉಳಿಸುವುದಕ್ಕೆ ನಾನು ಬಿಜೆಪಿ ಜತೆ ಸೇರಿ ಸರಕಾರ ಮಾಡಿದೆ. ಅದೇ ರೀತಿ ಕಾಂಗ್ರೆಸ್ ಜತೆಯಲ್ಲೂ ಸೇರಿ ಸರಕಾರ ಮಾಡಿದೆ. ಆದರೆ ಇವತ್ತಿಗೂ ಕಾಂಗ್ರೆಸ್‍ನವರು ನಮ್ಮ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಹೇಳುತ್ತಾರೆ. ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ಸರಕಾರದಲ್ಲಿ ಮಂತ್ರಿ ಆಗಿದ್ದರು. ಈಗ ಕಾಂಗ್ರೆಸ್ ಪಕ್ಷವೇ ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆ ಸರಕಾರ ಮಾಡಿದೆ. ಇದಕ್ಕೆ ಏನೆಂದು ಹೇಳಬೇಕು' ಎಂದು ಅವರು ಕುಟುಕಿದರು.

‘ಮಾತಿಗೆ ಮುಂಚೆ ನಾವು ಜಾತ್ಯತೀತರು ಎಂದು ಹೇಳಿಕೊಳ್ಳುವ ನೀವು, ರಾಜಕಾರಣ ಮಾಡುತ್ತಿರುವುದು ಯಾರ ಹೆಸರಲ್ಲಿ? ಮಡಿವಾಳ, ಅಲ್ಪಸಂಖ್ಯಾತ ಸಮಾವೇಶ ಮಾಡ್ತೀರಾ? ಹಾಗಾದರೆ ಅದು ಏನು? ಐದು ವರ್ಷ ಸರಕಾರ ನಡೆಸಿದಾಗ ಈ ಸಮುದಾಯದವರಿಗೆ ಏನು ಮಾಡಿದಿರಿ? ಕಾಂಗ್ರೆಸ್‍ನವರು ಜಾತ್ಯತೀತತೆ ಬಗ್ಗೆ ಚರ್ಚೆ ಮಾಡಲು ನೈತಿಕತೆ ಉಳಿಸಿಕೊಂಡಿಲ್ಲ' ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

‘ನಾನು ಯಾವ ಪಕ್ಷದ ಬಿ ಟೀಂ ಅಲ್ಲ. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮ ವಹಿಸುತ್ತೇವೆ. ಬಿಜೆಪಿ ಸಾಮರಸ್ಯ ಹಾಳು ಮಾಡಲು ಸಂಘಟನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಆ ಸಂಘಟನೆಗಳನ್ನು ಎದುರು ಹಾಕಿಕೊಂಡು ಹೋರಾಟ ನಡೆಸುತ್ತಿರುವವರು ನಾವು. ಸದನದಲ್ಲಿ ಮತಾಂತರ ನಿಷೇಧ ಕಾಯ್ದೆ ಬಂದಾಗ ಕಾಂಗ್ರೆಸ್‍ನವರು ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡರು. ಆದರೂ ಪದೆಪದೇ ನಮ್ಮ ಪಕ್ಷದ ಬಗ್ಗೆ ಇವರು ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಿ.ಎಂ.ಇಬ್ರಾಹೀಂ ಪಕ್ಷ ಬಿಟ್ಟ ಮೇಲೆ ನಮ್ಮ ಪಕ್ಷವನ್ನೇ ಮುಗಿಸಲು ಹೊರಟಿರಿ. ಆದರೂ, ನಾವು ಸಾಯಲು ಬಿಡಲಿಲ್ಲ. ಮತ್ತೆ ಇಬ್ರಾಹೀಂ ವಾಪಸ್ ಬಂದ ಮೇಲೆ ಅಲ್ಲಿ ಡೌನ್ ಫಾಲ್ ಆಗುತ್ತಿದೆ. ಇಬ್ರಾಹೀಂ ಅವರ ಕಾಲ್ಗುಣವೇ ಅಂತಹದ್ದು ಎಂದು ಅವರು ತಿಳಿಸಿದರು.

‘ರಾಜ್ಯಸಭಾ ಚುನಾವಣೆ ಕಾಂಗ್ರೆಸ್, ಬಿಜೆಪಿಗೆ ಹೋಲಿಕೆ ಮಾಡಿದರೆ ಜೆಡಿಎಸ್ ಪಕ್ಷಕ್ಕೆ ಮತಗಳು ಹೆಚ್ಚಿವೆ. ನಾವು ಅಭ್ಯರ್ಥಿ ಕಣಕ್ಕೆ ಇಳಿಸುತ್ತೇವೆ. ಆ ಪಕ್ಷಗಳು ಒಂದಿಷ್ಟು ಲೆಕ್ಕಾಚಾರ ಮಾಡುತ್ತಿದ್ದು, ನಾವು ಇಲ್ಲಿಯವರೆಗೆ ಯಾರ ಜೊತೆಯೂ ಚರ್ಚೆ ಮಾಡಿಲ್ಲ. ನಾಲ್ಕನೆ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ಅವರಿಗೂ ಇಲ್ಲ'

-ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News