ಕಳಸ: ಶಾಲಾ ಮಕ್ಕಳ ಬಿಸಿಯೂಟದ ಪಡಿತರದಲ್ಲಿ ಹುಳುಗಳು ಪತ್ತೆ; ಆರೋಪ

Update: 2022-05-24 13:34 GMT

ಕಳಸ, ಮೇ 24: ಪಟ್ಟಣದ ಹೃದಯ ಭಾಗದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಶಾಲಾ ಮಕ್ಕಳಿಗೆ ತಯಾರಿಸುತ್ತಿರುವ ಬಿಸಿಯೂಟಕ್ಕೆ ಬಳಸುವ ಪಡಿತರದಲ್ಲಿ ಹುಳಗಳು ಪತ್ತೆಯಾಗಿದ್ದು, ಈ ಪಡಿತರದಿಂದಲೇ ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸಿ ಉಣ ಬಡಿಸುತ್ತಿರುವುದು ಬೆಳಕಿಗೆ ಬಂದಿದೆ.

ಬಿಸಿಯೂಟದ ಪಡಿತರದಲ್ಲಿ ಹುಳಗಳು ಇರುವ ವಿದ್ಯಾರ್ಥಿಯ ಪೋಷಕರೊಬ್ಬರು ಕಳಸ ಗ್ರಾ.ಪಂ ಸದಸ್ಯ ವೀರೇಂದ್ರ ಅವರ ಗಮನಕ್ಕೆ ತಂದಿದ್ದು, ಮಂಗಳವಾರ ಗ್ರಾಮ ಪಂಚಾಯತ್ ಸದಸ್ಯ ವೀರೇಂದ್ರ ಅವರು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಜು, ಸಾಮಾಜಿಕ ಕಾರ್ಯಕರ್ತ ರಿಝ್ವಾನ್‍ರೊಂದಿಗೆ ಶಾಲೆಗೆ ತೆರಳಿ ಪರೀಕ್ಷಿಸಿದಾಗ ಪಡಿತರದಲ್ಲಿ ಹುಳಗಳು ಇರುವುದು ಕಂಡು ಬಂದಿದೆ.

ಮಂಗಳವಾರವೂ ಕೂಡ ಇದೇ ಪಡಿತರದಿಂದ ಅಡುಗೆ ತಯಾರಿಸಿ ಮಕ್ಕಳಿಗೆ ನೀಡಲಾಗಿದೆ. ಪಡಿತರದಲ್ಲಿ ಹುಳ ಇರುವ ಬಗ್ಗೆ ಯಾರಿಗೂ ತಿಳಿಸದೆ ಅದೇ ಪಡಿತರದಿಂದ ಅಡುಗೆ ತಯಾರಿಸಿ ಮಕ್ಕಳಿಗೆ ಕೊಡಲಾಗುತ್ತಿರುವುದು ಪತ್ತೆಯಾಗಿದೆ. ಅಡುಗೆ ತಯಾರಕರು ಪಡಿತರದಲ್ಲಿ ಹುಳುಗಳು ಇರುವುದನ್ನು ಶಾಲೆಯ ಮುಖ್ಯ ಶಿಕ್ಷಕಿಯ ಗಮಕ್ಕೆ ತಂದಿದ್ದರೂ ಕೂಡ ಮುಖ್ಯ ಶಿಕ್ಷಕ ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಮಕ್ಕಳ ಆರೋಗ್ಯದ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆಂದು ಪೋಷಕರು ಆರೋಪಿಸಿದ್ದರೇ, ಪಡಿತರ ಸರಬರಾಜು ಮಾಡುವ ಏಜೆನ್ಸಿ ಮತ್ತು ಶಾಲಾ ಮುಖ್ಯ ಶಿಕ್ಷಕಿಯ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯ ವೀರೇಂದ್ರ ಒತ್ತಾಯಿಸಿದ್ದಾರೆ.

ಈ ಬಗ್ಗೆ ಇಲ್ಲಿಯ ಮುಖ್ಯ ಶಿಕ್ಷಕಿ ಲಲಿತಾ ಅವರನ್ನು ಪ್ರಶ್ನಿಸಿದರೇ ಸೋಮವಾರದವರೆಗೂ ಪಡಿತರ ಚೆನ್ನಾಗಿಯೇ ಇತ್ತು. ಮಂಗಳವಾರ ಹುಳುಗಳು ಕಂಡು ಬಂದಿವೆ. ಪಡಿತರವನ್ನು ಬದಲಾಯಿಸಿ ಬಿಸಿಯೂಟ ತರಯಾರಿಸಲಾಗುವುದು ಎಂದು ಸಮಜಾಯಿಸಿ ನೀಡಿದ್ದಾರೆ.

ಗ್ರಾಪಂ ಸದಸ್ಯ ರಂಗನಾಥ್ ಮಾತನಾಡಿ, ಪಡಿತರದಲ್ಲಿ ಹುಳ ಇರುವ ಬಗ್ಗೆ ಮುಖ್ಯ ಶಿಕ್ಷಕಿ ಕಳಸ ಗ್ರಾಮ ಪಂಚಾಯತ್ ಗಮನಕ್ಕೆ ತಂದಿದ್ದಲ್ಲಿ ಕೂಡಲೇ ಬಿಸಿಯೂಟಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡುತ್ತಿದ್ದೆವು. ಆದರೆ ಯಾರ ಗಮನಕ್ಕೆ ತರದೇ ಹುಳ ತುಂಬಿದ ಪಡಿತರದಿಂದ ಅಡುಗೆ ತಯಾರಿಸಿ ಮಕ್ಕಳಿಗೆ ನೀಡಿರುವುದು ತಪ್ಪು. ಈ ಬಗ್ಗೆ ಸಂಬಂದ ಪಟ್ಟ ಅಧಿಕಾರಿಗಳು ಮುಖ್ಯ ಶಿಕ್ಷಕಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News