ಕಾರ್ಮಿಕ ಕೋರ್ಟ್ ಪೀಠಾಸೀನ ಅಧಿಕಾರಿ ನೇಮಕ: ನಿಲುವು ತಿಳಿಸಲು ಹೈಕೋರ್ಟ್ ನಿರ್ದೆಶನ

Update: 2022-05-25 14:03 GMT

ಬೆಂಗಳೂರು, ಮೇ 25: ಕೇಂದ್ರ ಸರಕಾರಿ ಕೈಗಾರಿಕಾ ನ್ಯಾಯಮಂಡಳಿ ಮತ್ತು ಕಾರ್ಮಿಕ ನ್ಯಾಯಾಲಯದ ಬೆಂಗಳೂರು ಕೇಂದ್ರದಲ್ಲಿ ಖಾಲಿಯಿರುವ ಪೀಠಾಸೀನ ಅಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ 2 ವಾರಗಳ ಒಳಗೆ ನಿಲುವು ತಿಳಿಸಬೇಕೆಂದು ಕೇಂದ್ರ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಸಂಬಂಧ ಇಂಡಸ್ಟ್ರಿಯಲ್ ಲಾ ಪ್ರಾಕ್ಟೀಷನರ್ಸ್ ಫೋರಂ ಕಾರ್ಯದರ್ಶಿ ಕೆ.ಬಿ.ನಾರಾಯಣ ಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. 

ಕೇಂದ್ರ ಸರಕಾರದ ಪರ ವಕೀಲ ಎ.ವಿ.ನಿಶಾಂತ್ ಅವರು ವಾದಿಸಿ, ಖಾಲಿ ಇರುವ ಪೀಠಾಸೀನ ಅಧಿಕಾರಿಗಳ ನೇಮಕಕ್ಕೂ ಮುನ್ನ ಪರಿಶೀಲನೆ ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷರಾದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸಭೆ ಸೇರಿ ತೀರ್ಮಾನ ಕೈಗೊಳ್ಳಬೇಕಿರುತ್ತದೆ. ಈ ನಿಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 2 ವಾರಗಳಲ್ಲಿ ಈ ಕುರಿತಂತೆ ನಿಮ್ಮ ನಿಲುವನ್ನು ತಿಳಿಸಿ ಎಂದು ನಿರ್ದೇಶಿಸಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

ಏನಿದು ಪ್ರಕರಣ: ಈ ಮೊದಲು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ರತ್ನಕಲಾ ಅವರು, ಕೇಂದ್ರ ಸರಕಾರಿ ಕೈಗಾರಿಕಾ ನ್ಯಾಯಮಂಡಳಿ ಮತ್ತು ಕಾರ್ಮಿಕ ನ್ಯಾಯಾಲಯದ ಬೆಂಗಳೂರು ಕೇಂದ್ರದ ಪೀಠಾಸೀನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2021ರ ಜನವರಿ 27ರಂದು ಅವರು ಅವಧಿ ಪೂರೈಸಿದ ಕಾರಣ ಅಲ್ಲಿಂದಲೂ ಆ ಹುದ್ದೆ ಖಾಲಿ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News