ಆಸ್ತಿ ವಿಚಾರ: ದಾಯಾದಿಗಳ ಹೊಡೆದಾಟಕ್ಕೆ ಓರ್ವ ಬಲಿ
Update: 2022-05-26 16:35 GMT
ಮೈಸೂರು,ಮೇ.26: ಆಸ್ತಿ ವಿಚಾರದಲ್ಲಿ ದಾಯಾದಿಗಳ ನಡುವೆ ಆರಂಭವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕರಡಿಮರಯ್ಯನ ಹುಂಡಿ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಮೈಸೂರು ತಾಲೂಕು ಜಯಪುರ ಹೋಬಳಿಯ ಕರಡಿಮರಯ್ಯನಹುಂಡಿ ನಿವಾಸಿ ನಂಜುಂಡ (54) ಎಂದು ಹೇಳಲಾಗಿದೆ. ಮಾಲೇಗೌಡರ ಮಕ್ಕಳಾದ ಶಿವಣ್ಣ, ಕೃಷ್ಣ ಕೊಲೆ ಮಾಡಿದವರಾಗಿದ್ದಾರೆ. ನಿನ್ನೆ ಸಂಜೆ ಆಸ್ತಿ ವಿಚಾರದಲ್ಲಿ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ನಂಜುಂಡನಿಗೆ ಶಿವಣ್ಣ, ಕೃಷ್ಣ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ನಂಜುಂಡನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಂಜುಂಡ ಸಾವನ್ನಪ್ಪಿದ್ದಾರೆ. ಕೊಲೆಗೈದ ಆರೋಪಿ ಶಿವಣ್ಣ, ಕೃಷ್ಣ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.