ರಸಗೊಬ್ಬರಕ್ಕೆ ಸಹಾಯಧನ; ರೈತರಿಗಿಂತ ಕಂಪೆನಿಗಳಿಗೇ ಅನುಕೂಲ: ಆರೋಪ
ಬೆಂಗಳೂರು, ಮೇ 27: ರೈತರಿಗೆ ನೀಡುವ ರಸಗೊಬ್ಬರಗಳ ಸಹಾಯಧನವನ್ನು ಹೆಚ್ಚಿಸಲು ಕೇಂದ್ರ ಸರಕಾರವು ನಿರ್ಧಾರ ತೆಗೆದುಕೊಂಡಿದೆ. ಇದರಿಂದ ರೈತರಿಗಿಂತ ರಸಗೊಬ್ಬರಗಳ ಕಂಪನಿಗಳಿಗೆ ಉಪಯೋಗವಾಗುತ್ತಿದೆ ಎಂದು ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ಆರೋಪಿಸಿದೆ.
ಶುಕ್ರವಾರ ಪ್ರೆಸ್ಕ್ಲಬ್ನಲ್ಲಿ ಸಂಘದ ದಕ್ಷಿಣ ಪ್ರಾಂತದ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್ರಾಜು ಅವರು ಮಾತನಾಡಿ, ಸರಕಾರವು ರಸಗೊಬ್ಬರ ಕೊಳ್ಳಲು ಸಹಾಯಧನವನ್ನು ನೀಡುತ್ತಿದೆ. ಈ ಸಹಾಯಧನವನ್ನು ನೇರವಾಗಿ ರೈತರಿಗೆ ನೀಡದೆ, ಕಂಪನಿಗಳಿಗೆ ನೀಡುತ್ತಿದೆ. ಕಂಪನಿಗಳು ರೈತರ ಹೆಸರಿನಲ್ಲಿ 20ಚೀಲಕ್ಕೆ ಸರಾಸರಿ 40 ಸಾವಿರ ರೂ. ಹಣವನ್ನು ಪಡೆದುಕೊಳ್ಳುತ್ತವೆ. ಹಾಗಾಗಿ ನೇರವಾಗಿ ಸಹಾಯಧನವು ರೈತರಿಗೆ ಸಿಗುವಂತೆ ರಸಗೊಬ್ಬರವನ್ನು ಮುಕ್ತ ಮಾರುಕಟ್ಟೆಗೆ ಬಿಡಬೇಕು ಎಂದು ಹೇಳಿದರು.
ರಸಗೊಬ್ಬರದ ಸಹಾಯಧನವನ್ನು ಮುಕ್ತ ಮಾರುಕಟ್ಟೆಗೆ ಬಿಟ್ಟರೆ ನೇರವಾಗಿ ಕೊಳ್ಳುವುದರಿಂದ ರೈತರಿಗೆ ಹೊರೆ ಅನಿಸಬಹುದು, ಆದರೆ ರೈತರು ಮಿತವಾಗಿ ರಸಗೊಬ್ಬರವನ್ನು ಬಳಸುತ್ತಾರೆ. ನೈಸರ್ಗಿಕ ಕೃಷಿಯತ್ತ ರೈತರು ಸಾಗುತ್ತಾರೆ ಎಂದು ಅವರು ತಿಳಿಸಿದರು.