ಒಂದೊಂದು ಹುದ್ದೆಗೂ ಪಡೆದ ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಯಾರ ಕೈಸೇರಿದೆ?: ಸಿದ್ದರಾಮಯ್ಯ ಪ್ರಶ್ನೆ

Update: 2022-05-27 13:31 GMT

ಬೆಂಗಳೂರು, ಮೇ 27: ‘ಪಿಎಸ್ಸೈ ತನಿಖೆಯನ್ನು ಗಮನಿಸಿದರೆ ಸರಕಾರ ನೆಪಕ್ಕೆ ಮಾತ್ರ ಜನರ ಕಣ್ಣೊರೆಸಲು ಸಿಐಡಿ ತನಿಖೆ ನಡೆಸುತ್ತಿರುವಂತಿದೆ. ಒಂದೊಂದು ಹುದ್ದೆಗೂ ಪಡೆದ ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಯಾರ ಕೈಸೇರಿದೆ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ. 

ಶುಕ್ರವಾರ ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ‘ಪಿಎಸ್ಸೈ ನೇಮಕ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಿ, ಹಗರಣದಲ್ಲಿ ಎಷ್ಟೇ ಪ್ರಭಾವಿ ವ್ಯಕ್ತಿಯಿದ್ದರೂ ಅವರಿಗೆ ಶಿಕ್ಷೆ ವಿಧಿಸಬೇಕು. ಜೊತೆಗೆ ಯಾವ ಮಂತ್ರಿಗಳ ಮೇಲೆ ಆರೋಪವಿದೆಯೋ ಕೂಡಲೆ ಅವರನ್ನು ಸಂಪುಟದಿಂದ ವಜಾ ಮಾಡಿ, ತನಿಖೆ ನಿಷ್ಪಕ್ಷಪಾತ ತನಿಖೆ ಆಗುವಂತೆ ನೋಡಿಕೊಳ್ಳಬೇಕು' ಎಂದು ಸಿದ್ದರಾಮಯ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಪಿಎಸ್ಸೈ ನೇಮಕಾತಿ ಹಗರಣದ ಕುರಿತು ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದ ನಂತರ ಸಿಐಡಿ ತನಿಖೆಗೆ ಒಪ್ಪಿಸಲಾಯಿತು. ನಾವು ಆಗಲೂ ಸಿಐಡಿ ತನಿಖೆಯನ್ನು ವಿರೋಧಿಸಿದ್ದೆವು. ಇದಕ್ಕೆ ಮುಖ್ಯ ಕಾರಣ ಈ ಪ್ರಕರಣದಲ್ಲಿ ಸರಕಾರದಲ್ಲಿರುವ ಪ್ರಬಲ ವ್ಯಕ್ತಿಗಳು ಭಾಗಿಯಾಗಿದ್ದಾರೆ. ಅವರನ್ನು ಧೈರ್ಯವಾಗಿ ವಿಚಾರಣೆ ನಡೆಸಿ ಬಂಧಿಸುವ ತಾಕತ್ತು ಸಿಐಡಿಗೆ ಇಲ್ಲ, ಹಾಗಾಗಿ ಈ ಪ್ರಕರಣವನ್ನು ಹೈಕೋರ್ಟ್‍ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು' ಎಂದು ಆಗ್ರಹಿಸಿದರು.

‘ವಿಧಾನ ಮಂಡಲ ಅಧಿವೇಶನದಲ್ಲಿ ಈ ಬಗ್ಗೆ ಆಗ್ರಹಿಸಿದ್ದೆವು. ಆದರೆ, ಸರಕಾರಕ್ಕೆ ಒಳಗೊಳಗೆ ಭಯವಿದ್ದ ಕಾರಣಕ್ಕೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಿಲ್ಲ. ಪ್ರಬಲ ತಿಮಿಂಗಿಲಗಳನ್ನು ಹಿಡಿದು ತನಿಖೆ ನಡೆಸುವ ಶಕ್ತಿ ಸಿಐಡಿಗೆ ಇಲ್ಲ ಎಂದು ನಾವು ಹೇಳಿದ್ದ ಮಾತಿನಂತೆಯೇ ಈಗ ಈ ತನಿಖಾ ಸಂಸ್ಥೆಯು ನಡೆದುಕೊಳ್ಳುತ್ತಿದೆ. ಇಷ್ಟು ದಿನವಾದರೂ ಒಬ್ಬನೆ ಒಬ್ಬ ಪ್ರಭಾವಿಯನ್ನು ಅಥವಾ ವಿಧಾನಸೌಧದಲ್ಲಿ ಕೂತವರನ್ನು ತನಿಖೆಗೆ ಒಳಪಡಿಸಿಲ್ಲ. ಜನರ ಕಣ್ಣ ಮುಂದೆಯೆ ಹಲವು ಸಾಕ್ಷಿಗಳಿದ್ದರೂ ಜನರೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದರೂ ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿಲ್ಲ. ಇದನ್ನು ನೋಡಿದರೆ ಇಡೀ ಹಗರಣವನ್ನು ನಿಧಾನಕ್ಕೆ ಕತ್ತು ಹಿಸುಕಿ ಮೂಲೆಗೆ ಎಸೆಯುವ ಹುನ್ನಾರ ಕಾಣಿಸುತ್ತಿದೆ' ಎಂದು ಸಿದ್ದರಾಮಯ್ಯ ಆರೋಪಿಸಿದರು.

‘ಸರಕಾರ ಆರಂಭದಿಂದಲೂ ನೇಮಕಾತಿಯಲ್ಲಿ ಹಗರಣಗಳೆ ನಡೆದಿಲ್ಲವೆಂದು ಪ್ರತಿಪಾದಿಸುವ ಕೆಲಸ ಮಾಡಿತು. ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪಿಎಸ್ಸೈ ನೇಮಕಾತಿಯಲ್ಲಿ ಯಾವುದೇ ಲೋಪ ನಡೆದಿಲ್ಲ, ಹಗರಣವೂ ನಡೆದಿಲ್ಲ ಎಂದು ಅಧಿವೇಶನದಲ್ಲೇ ಸುಳ್ಳು ಹೇಳಿದರು. ತನಿಖೆಯನ್ನು ಸಿಐಡಿಗೆ ವಹಿಸುವುದು ನಿಮಗೂ ಅನಿವಾರ್ಯ ಆಗುವಷ್ಟು ಸಾಕ್ಷ್ಯಗಳು ಬಹಿರಂಗಗೊಂಡವು. ಹೀಗಾಗಿ ತನಿಖೆಗೆ ವಹಿಸಿದಿರಿ. ಆದರೆ, ಇದುವರೆಗೆ ಸಿಐಡಿ ತನಿಖೆಯಿಂದ ಸಾಧಿಸಿದ್ದಾದರೂ ಏನು?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಒಬ್ಬೊಬ್ಬ ಪಿಎಸ್ಸೈ ನೇಮಕಕ್ಕೆ 30 ಲಕ್ಷ ರೂ.ನಿಂದ ಒಂದೂವರೆ ಕೋಟಿ ರೂ.ವರೆಗೂ ಹಣ ಪಡೆಯಲಾಗಿದೆ ಎನ್ನುವ ಸಂಗತಿ ಸಿಐಡಿ ತನಿಖೆಯಿಂದ ಹೊರಗೆ ಬಂತು. ನೇಮಕಾತಿಗಾಗಿ ಹಣ ಕೊಟ್ಟ, ಹಣಕ್ಕಾಗಿ ಮಧ್ಯವರ್ತಿಗಳಾಗಿ ಕೆಲಸ ಮಾಡಿದ್ದ ಸಣ್ಣ ಪುಟ್ಟ ಕೆಲವರನ್ನು ಬಂಧಿಸಿದಿರಿ. ಆದರೆ, ನೂರಾರು ಕೋಟಿ ರೂ. ಹಣ ಯಾರ ಕೈ ಸೇರಿತು ಎನ್ನುವುದನ್ನು ಬಹಿರಂಗಗೊಳಿಸಲೇ ಇಲ್ಲ. ಹಣ ಪಡೆದ ದೊಡ್ಡ ತಲೆಗಳನ್ನು ಈ ಕ್ಷಣಕ್ಕೂ ಬಂಧಿಸಿಲ್ಲ. ನೆಪಕ್ಕೂ ಅವರನ್ನು ತನಿಖೆಗೆ ಒಳಪಡಿಸಿಲ್ಲ. ಒಂದು ನೋಟಿಸ್ ನೀಡಿಲ್ಲ. ಪಡೆದಿದ್ದ ಲಂಚದ ಹಣದಲ್ಲಿ ಶೇ.10ರಷ್ಟನ್ನೂ ಇನ್ನೂ ವಶಪಡಿಸಿಕೊಂಡಿಲ್ಲ. ಆದರೆ, ಹಗರಣದ ಬಗ್ಗೆ ಧ್ವನಿ ಎತ್ತಿದ್ದ ನಮ್ಮ ಪಕ್ಷದ ಶಾಸಕರಿಗೆ ನೋಟಿಸ್ ಮೇಲೆ ನೋಟಿಸ್ ನೀಡಿ ತನಿಖೆಯ ದಿಕ್ಕು ತಪ್ಪಿಸಲು ಹೆಣಗಾಡಿದಿರಿ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. 

‘ಹಲವು ವಕೀಲರುಗಳು, ನಾಗರಿಕ ಸಂಘಟನೆಗಳು ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಪಿಎಸ್ಸೈ ಹಗರಣದಲ್ಲಿ ಐದು ಮಂದಿ ಸಚಿವರ ನೇರ ಕೈವಾಡ ಇದೆ. ನೂರಾರು ಕೋಟಿ ರೂ.ಹಣ ಈ ಐದು ಮಂದಿ ಸಚಿವರ ಕಿಸೆ ಸೇರಿದೆ. ಮಾಜಿ ಮುಖ್ಯಮಂತ್ರಿಗಳೊಬ್ಬರ ಪುತ್ರ ಹಗರಣದಲ್ಲಿ ನೇರ ಭಾಗಿ ಆಗಿದ್ದು ಒಟ್ಟು 544 ಪಿಎಸ್ಸೈ ಹುದ್ದೆಗಳಲ್ಲಿ ಇವರ ಸೂಚನೆ ಮೇರೆಗೆ 63ಕ್ಕೂ ಹೆಚ್ಚು ಅಭ್ಯರ್ಥಿಗಳ ನೇಮಕಾತಿ ನಡೆದಿದೆ ಎನ್ನುವ ನೇರ ಆರೋಪಗಳನ್ನು ಮಾಡಿದ್ದಾರೆ. ಆದರೆ, ಸಿಐಡಿ ಮಾತ್ರ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈ ಕುರಿತು ಸಿಐಡಿಯು ಇದುವರೆಗೆ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿಲ್ಲ. ಆದರೆ ಹಗರಣಗಳನ್ನು ಬೆಳಕಿಗೆ ತರಲು ಪ್ರಯತ್ನಿಸಿದ ನಮ್ಮ ಪಕ್ಷದ ಶಾಸಕರಿಗೆ ಮಾತ್ರ ಮೇಲಿಂದ ಮೇಲೆ ನೋಟಿಸ್ ನೀಡಿದ್ದೀರಿ. ಇದುವರೆಗೂ ವಿಧಾನಸೌಧ ಮುಂತಾದ ಕಡೆ ಕೂತಿರುವ ಹಗರಣದ ರೂವಾರಿಗಳನ್ನು ಮುಟ್ಟುವ ಕೆಲಸ ಮಾಡಿಲ್ಲ. ಏನಿದರ ಅರ್ಥ? ಯಾರನ್ನು ರಕ್ಷಿಸಲು ಈ ತನಿಖೆ ನಡೆಯುತ್ತಿದೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ಪಿಎಸ್ಸೈ ತನಿಖೆಯನ್ನು ಗಮನಿಸಿದರೆ ಸರಕಾರ ನೆಪಕ್ಕೆ ಮಾತ್ರ ಜನರ ಕಣ್ಣೊರೆಸಲು ಸಿಐಡಿ ತನಿಖೆ ನಡೆಸುತ್ತಿರುವಂತಿದೆ. ಒಂದೊಂದು ಹುದ್ದೆಗೂ ಪಡೆದ ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಯಾರ ಕೈಸೇರಿದೆ? ಸರಕಾರದ ದೊಡ್ಡ ತಲೆಗಳ ಸೂಚನೆ ಇಲ್ಲದೆ ಕೇವಲ ಕೆಳ ಹಂತದ ಅಧಿಕಾರಿಗಳು ನೂರಾರು ಕೋಟಿ ಹಣ ಸುಲಿಗೆ ಮಾಡಲು, ತಾವೇ ನುಂಗಿ ಹಾಕಲು ಸಾಧ್ಯವಿಲ್ಲ. ಇದುವರೆಗೂ ತಪ್ಪಿತಸ್ಥ ಅಧಿಕಾರಿಗಳನ್ನು ಪುರಸ್ಕಾರದ ರೀತಿಯಲ್ಲಿ ವರ್ಗಾವಣೆ ಮಾಡಿದ್ದು ಬಿಟ್ಟರೆ ಯಾರನ್ನೂ ಬಂಧಿಸಿಲ್ಲ. ಅವರು ಪಡೆದ ಹಣವನ್ನೂ ವಶಪಡಿಸಿಕೊಂಡಿಲ್ಲ. ಹೀಗಾಗಿ ದೊಡ್ಡ ತಲೆಗಳನ್ನು ರಕ್ಷಿಸಲಿಕ್ಕೆಂದೇ ಸಿಐಡಿ ತನಿಖೆ ನಡೆಸಿರುವುದು ಖಚಿತವಾಗುತ್ತಿದೆ. ತನಿಖೆಗೆ ನಿರ್ಭೀತವಾಗಿ, ಪಾರದರ್ಶಕವಾಗಿ ನಡೆಯುತ್ತಿಲ್ಲವೆಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ರೀತಿಯ ತನಿಖೆಯಿಂದ ಕಳ್ಳರನ್ನು ಹುಡುಕಿ ಶಿಕ್ಷಿಸಲು ಸಾಧ್ಯವಿಲ್ಲ'

-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News