×
Ad

ಎಸ್‍ಡಿಪಿಐ, ಬಿಜೆಪಿಯ ಬೀ ಟೀಂ: ದಿನೇಶ್ ಗುಂಡೂರಾವ್

Update: 2022-05-29 17:48 IST

ಬೆಂಗಳೂರು, ಮೇ 29: ‘ಎಸ್‍ಡಿಪಿಐ ಕಾಂಗ್ರೆಸ್ ಕೂಸು ಎಂದಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯಾರ ಕಿವಿಗೆ ಹೂ ಮುಡಿಸುತ್ತಿದ್ದಾರೆ.? ಮುಸ್ಲಿಮರ ಮತ ವಿಭಜಿಸಿ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿರುವ ಎಸ್‍ಡಿಪಿಐ ಕಾಂಗ್ರೆಸ್ ಕೂಸಾಗಲು ಸಾಧ್ಯವೆ.? ಎಸ್‍ಡಿಪಿಐ ಮತ್ತು ಓವೈಸಿಯ ಎಐಎಂಐಎಂ ಪಕ್ಷ ಬಿಜೆಪಿಯ ಬೀ ಟೀಂ ಎಂದು ದೇಶಕ್ಕೆ ಗೊತ್ತಿದೆ. ಈ ಬಗ್ಗೆ ಜೋಶಿಯವರು ಎದೆ ತಟ್ಟಿ ಹೇಳುತ್ತಾರೆಯೇ?' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಪ್ರಹ್ಲಾದ್ ಜೋಶಿಯವರು ಗಾಳಿಯಲ್ಲಿ ಗುಂಡು ಹಾರಿಸುವ ಬದಲು ಎಸ್‍ಡಿಪಿಐ, ಓವೈಸಿಯ ಎಐಎಂಐಎಂ ಹಾಗೂ ನಾಗಪುರ ನಡುವಿನ ಕನೆಕ್ಷನ್ ಏನು ಎಂಬುದನ್ನು ತಿಳಿಸಲಿ. ಆರೆಸ್ಸೆಸ್ ಕೃಪಾ ಪೋಷಿತ ನಾಟಕ ಮಂಡಳಿಯಲ್ಲಿ ಎಸ್‍ಡಿಪಿಐ ಪಾತ್ರವೇನು? ಓವೈಸಿಯ ರೋಲ್ ಏನು ಎಂದು ದೇಶಕ್ಕೆ ತಿಳಿಯಲಿ. ಈ ಸಂಘಟನೆಗಳಿಗೆ ನಾಗಪುರದ ಕನೆಕ್ಷನ್ ಇಲ್ಲದಿದ್ದರೆ ಈ ಕೂಡಲೇ ಎಸ್‍ಡಿಪಿಐಯನ್ನು ನಿಷೇಧಿಸಲಿ' ಎಂದು ಸವಾಲು ಹಾಕಿದ್ದಾರೆ.

‘ಎಸ್‍ಡಿಪಿಐನಿಂದ ರಾಜಕೀಯ ಲಾಭ ಪಡೆಯುತ್ತಿರುವ ಬಿಜೆಪಿಯವರು ಎಸ್‍ಡಿಪಿಐ ಸಂಘಟನೆ ಕಾಂಗ್ರೆಸ್ ಕೂಸು ಎಂದು ಹಲುಬುವುದ್ಯಾಕೆ? ಎಸ್‍ಡಿಪಿಐ ಸಂಘಟನೆಯ ಬಗ್ಗೆ ಕಾಂಗ್ರೆಸ್‍ಗೆ ಯಾವ ಸಾಫ್ಟ್ ಕಾರ್ನರ್ ಇಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ಸರಕಾರವೇ ಇದೆ. ಎಸ್‍ಡಿಪಿಐ ಸಂಘಟನೆಯನ್ನು ನಿಷೇಧಿಸದಂತೆ ಬಿಜೆಪಿಯವರ ಕೈ ಕಟ್ಟಿ ಹಾಕಿರುವವರು ಯಾರು? ತಾಕತ್ತಿದ್ದರೆ ನಿಷೇಧಿಸಲಿ' ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಎಸ್‍ಡಿಪಿಐ ಸಂಘಟನೆ ಬಿಜೆಪಿಯ ಪಾಲಿಗೆ ಕಲ್ಪವೃಕ್ಷ ಇದ್ದಂತೆ. ಎಸ್‍ಡಿಪಿಐ ಸಂಘಟನೆ ನಿಷೇಧವಾಗುವುದು ಬಿಜೆಪಿಯವರಿಗೂ ಸುತಾರಾಂ ಇಷ್ಟವಿಲ್ಲ. ಈ ಸತ್ಯ ಜೋಶಿಯವರಿಗೂ ಗೊತ್ತಿದೆ. ಆದರೂ ಜೋಶಿಯವರು ಜನರ ಕಣ್ಣಿಗೆ ಮಣ್ಣೆರಚಲು ಎಸ್‍ಡಿಪಿಐ ನೊಂದಿಗೆ ಕಾಂಗ್ರೆಸ್‍ಗೆ ಸಂಬಂಧ ಕಲ್ಪಿಸುತ್ತಾರೆ. ಅಷ್ಟಕ್ಕೂ ಎಸ್‍ಡಿಪಿಐ ಸಂಘಟನೆಯಿಂದ ಕಾಂಗ್ರೆಸ್‍ಗೆ ಏನು ಲಾಭ ಜೋಶಿಯವರೆ?' ಎಂದು ದಿನೇಶ್ ಗುಂಡೂರಾವ್ ಕೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News