ಬಿಎಸ್‍ವೈ ನಂಬಿಕೆಗೆ ಬಸವರಾಜ ಬೊಮ್ಮಾಯಿ ದ್ರೋಹ ಬಗೆದಿದ್ದಾರೆ: ಡಾ. ಮಹದೇವಪ್ಪ

Update: 2022-05-29 12:46 GMT
ಬಸವರಾಜ್ ಬೊಮ್ಮಾಯಿ / ಡಾ.ಎಚ್.ಸಿ.ಮಹದೇವಪ್ಪ (Photo: Twitter)

ಬೆಂಗಳೂರು: ‘ಆರೆಸ್ಸೆಸ್‍ನ ಬಲವಂತವಾದ ಕೋಮುವಾದದ ತಂತ್ರಗಳಿಗೆ ಬಗ್ಗದ ಯಡಿಯೂರಪ್ಪ ಅವರನ್ನು ನಿರ್ದಯವಾಗಿ ಕೆಳಗೆ ಇಳಿಸಿದ ಬಿಜೆಪಿ ಮತ್ತು ಆರೆಸ್ಸೆಸ್‍ನವರು, ಇದೀಗ ಬೊಮ್ಮಾಯಿ ಅವರನ್ನು ಸಂಪೂರ್ಣ ಆರೆಸ್ಸೆಸ್ ಗುಲಾಮಗಿರಿಗೆ ಒಳಪಡಿಸಿದ್ದಾರೆ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇಂದಿಲ್ಲಿ ದೂರಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ತಮ್ಮ ಮೆದುಳು ಮತ್ತು ಪಂಚೇಂದ್ರಿಯಗಳನ್ನು ಆರೆಸ್ಸೆಸ್‍ನವರಿಗೆ ಕೊಟ್ಟು ಕುಳಿತಿರುವ ಬೊಮ್ಮಾಯಿ ಅವರು ತಾವೊಬ್ಬ ಆರೆಸ್ಸೆಸ್‍ನ ತೊಗಲು ಗೊಂಬೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇನ್ನು ಹಾಸ್ಯಾಸ್ಪದ ಎಂಬಂತೆ ಬೊಮ್ಮಾಯಿಯವರು ನೀವು ಆರ್ಯರೋ ದ್ರಾವಿಡರೋ ಎಂದು ಪ್ರಶ್ನೆ ಕೇಳುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ.

‘ಮೂಲತಃ ಸಿರಿಗೆರೆಯ ಮರುಳಸಿದ್ದೇಶ್ವರ ಸ್ವಾಮಿಗೆ ನಡೆದುಕೊಳ್ಳುವ ಇವರು ಮೂಲತಃ ದ್ರಾವಿಡರೇ ಆಗಿದ್ದು ಆ ಸಂಗತಿಯನ್ನು ಬೇಕಾದರೆ ಸಿರಿಗೆರೆ ಶ್ರೀಗಳ ಬಳಿಯೇ ಕೇಳಿ ಖಚಿತಪಡಿಸಿಕೊಳ್ಳಲಿ. ಅನ್ನಭಾಗ್ಯ ಅಕ್ಕಿಯನ್ನು ಕಡಿತಗೊಳಿಸಿ ತಿನ್ನುವ ಅನ್ನಕ್ಕೆ ಕನ್ನ ಹಾಕಿರುವ ಬಿಜೆಪಿಗರು, ಯುವಕರ ಉದ್ಯೋಗವನ್ನು ಕಿತ್ತುಕೊಳ್ಳುವ ಕೆಲಸ ಮಾಡಿದ್ದಾರೆ' ಎಂದು ಮಹದೇವಪ್ಪ ಇದೇ ವೇಳೆ ಟೀಕಿಸಿದ್ದಾರೆ.

‘ಸಾಲದು ಎಂಬಂತೆ ಹಗಲು ಇರುಳೂ ಓದುವ ಮಕ್ಕಳ ಶಾಲೆಯ ಮತ್ತು ಪಠ್ಯದ ವಾತಾವರಣ ಹಾಳು ಮಾಡುತ್ತಿರುವ ಬಿಜೆಪಿಗರು ಬಹುತೇಕ ಬಡವರು ಓದುವ ಸರಕಾರಿ ಶಾಲೆಗಳನ್ನು ಹಿಜಾಬ್ ಹಾಗೂ ಇನ್ನಿತರೆ ಕೋಮು ಸಂಗತಿಗಳನ್ನು ಮುನ್ನಲೆಗೆ ತರುವ ಮೂಲಕ ಪೂರ್ಣವಾಗಿ ಹಾಳು ಮಾಡುತ್ತಿದ್ದು ಕೆಳವರ್ಗದ ಮಕ್ಕಳು ಶಿಕ್ಷಣ ಪಡೆಯಬಾರದು ಎಂಬ ಹುನ್ನಾರವನ್ನು ಅದು ಹೊಂದಿದೆ' ಎಂದು ಮಹದೇವಪ್ಪ ದೂರಿದ್ದಾರೆ.

‘ಇಂತಹ ಪಾಪದ ಕೃತ್ಯಗಳಿಗೆ ಬೆಂಬಲವಾಗಿರುವ ಬೊಮ್ಮಾಯಿ ಇತ್ತೀಚೆಗೆ ಯಡಿಯೂರಪ್ಪನವರಿಗೂ ಡೋಂಟ್ ಕೇರ್ ಎನ್ನದೇ ಆರೆಸ್ಸೆಸ್‍ನವರ ಗುಲಾಮಗಿರಿಯನ್ನು ಮಾಡುತ್ತಿದ್ದು ಕೋಮುವಾದವನ್ನು ಉತ್ತೇಜಿಸದ ಮತ್ತು ಬೊಮ್ಮಾಯಿ ಈತ ತನ್ನ ಆಯ್ಕೆಯ ಮುಖ್ಯಮಂತ್ರಿ ಆಗಬಲ್ಲ ಎಂಬ ಬಿಎಸ್‍ವೈಗೆ ನಂಬಿಕೆಗೆ ದ್ರೋಹ ಮಾಡುತ್ತಿದ್ದಾರೆ. ಇಂತಹ ದ್ರೋಹಿಗಳಿಗೆ ಕರ್ನಾಟಕದ ಸಾರ್ವಜನಿಕ ಇತಿಹಾಸದಲ್ಲಿ ಕ್ಷಮೆಯುಂಟೇ?' ಎಂದು ಮಹದೇವಪ್ಪ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News