ಡಾ.ಚಂದ್ರಶೇಖರ ಕಂಬಾರರ ಹೆಸರಿನಲ್ಲಿ ವಂಚನೆ: ದೂರು ದಾಖಲು
ಬೆಂಗಳೂರು, ಜೂ.2: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹೆಸರಿನಲ್ಲಿ ವಾಟ್ಸ್ಆ್ಯಪ್ ಸಂದೇಶ ಕಳಿಸುತ್ತಿರುವ ಅಪರಿಚಿತರು ಧನಸಹಾಯ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಈ ಹಿನ್ನೆಲೆ ಕಂಬಾರರು ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನನ್ನ ಹೆಸರಿನಲ್ಲಿ ಬೇರೆ-ಬೇರೆ ವ್ಯಕ್ತಿಗಳಿಗೆ ವಾಟ್ಸ್ಆ್ಯಪ್ ಸಂದೇಶ ಕಳಿಸುತ್ತಿರುವ ಕಿಡಿಗೇಡಿಗಳು ಧನ ಸಹಾಯ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಹೀಗಾಗಿ, ಈ ಕುರಿತು ಕ್ರಮ ಕೈಗೊಳ್ಳುವಂತೆ ಕಂಬಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಿಇಎನ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂಬಾರರು, ಚಂಡೀಗಢ, ಕೋಲ್ಕತ್ತಾದಲ್ಲಿರುವ ನನ್ನ ಸ್ನೇಹಿತರೊಬ್ಬರಿಗೆ ಹಣ ಕೇಳಿ ವಾಟ್ಸ್ಆ್ಯಪ್ ಸಂದೇಶ ಮಾಡಿದ್ದಾರೆ. ನಾನು ತೊಂದರೆಯಲ್ಲಿದ್ದೀನಿ, ಹಣದ ಸಹಾಯ ಬೇಕಿದೆ ಅಂದಿದ್ದಾರೆ ಎಂದು ಹೇಳಿದರು.
ಈ ಬಗ್ಗೆ ಅವರ ಸ್ನೇಹಿತ ನನಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾರೆ. ಹೀಗಾಗಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ. ಈ ಹಿಂದೆ ಕೂಡ ಇದೇ ರೀತಿ ಸೈಬರ್ ಖದೀಮರು ಇ-ಮೇಲ್ ಮೂಲಕ ಹಣ ಕೇಳಿದ್ದರು. ಕೆಲ ಕಿಡಿಗೇಡಿಗಳು ನನ್ನ ಹೆಸರನ್ನು ಬಳಸಿಕೊಂಡು ಈ ರೀತಿ ಮಾಡುತ್ತಾರೆ. ಇದನ್ನು ನಂಬಬೇಡಿ. ನಾನು ಆರೋಗ್ಯವಾಗಿದ್ದೇನೆ ಎಂದು ಅವರು ಸ್ಟಷ್ಟನೆ ನೀಡಿದ್ದಾರೆ.
ಹಣ ಕೇಳಿದರೆ ಕೊಡಬೇಡಿ: ಚಂದ್ರಶೇಖರ್ ಕಂಬಾರ
‘ನನ್ನ ಹೆಸರಿನಲ್ಲಿ ವಾಟ್ಸ್ ಆ್ಯಪ್ ಸಂದೇಶ ಕಳಿಸುತ್ತಿರುವ ಕಿಡಿಗೇಡಿಗಳು ಧನ ಸಹಾಯ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಹೀಗಾಗಿ, ನನ್ನ ಹೆಸರು ಬಳಸಿಕೊಂಡ ಹಣ ಕೇಳಿದರೆ ಯಾರೂ ಕೊಡಬೇಡಿ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಚಂದ್ರಶೇಖರ ಕಂಬಾರ ತಿಳಿಸಿದ್ದಾರೆ.