ಪಠ್ಯದಿಂದ ಡಾ. ಆರ್. ವಿ. ಭಂಡಾರಿ ಬರೆದ 'ಹಾರಿದ ಹಕ್ಕಿಗಳು' ಕವನ ಪ್ರಕಟಿಸುವ ಅನುಮತಿ ವಾಪಸ್
ಬೆಂಗಳೂರು: ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ನಡೆದ ಪಠ್ಯಪರಿಷ್ಕರಣೆ ವಿವಾದವು ರಾಜ್ಯದಲ್ಲಿ ಭುಗಿಲೆದ್ದಿದ್ದು, ಹಲವು ಸಾಹಿತಿಗಳು ‘ತಮ್ಮ ಕಥೆ, ಕಾವ್ಯ, ಪ್ರಬಂಧ ಬೋಧನೆಗೆ ನೀಡಿದ್ದ ಅನುಮತಿ'ಯನ್ನು ಹಿಂಪಡೆದುಕೊಳ್ಳುವ ಸರಕಾರದ ವಿರುದ್ಧ ಆಕ್ರೋಶ ಮುಂದುವರಿಸಿದ್ದಾರೆ.
ಇದೀಗ ಸಾಹಿತಿ ಡಾ. ಆರ್. ವಿ. ಭಂಡಾರಿ ಅವರು ಬರೆದ 'ಹಾರಿದ ಹಕ್ಕಿಗಳು' ಕವನವನ್ನೂ ಕೂಡ ಪಠ್ಯದಿಂದ ಕೈಬಿಡುವಂತೆ ಡಾ. ಆರ್. ವಿ. ಭಂಡಾರಿ ಅವರ ಸೊಸೆ ಯಮುನಾ ಗಾಂವ್ಕರ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಅವರಿಗೆ ಪತ್ರ ಬರೆದಿದ್ದಾರೆ.
"ಹಾರಿದ ಹಕ್ಕಿಗಳು" ಕವನವನ್ನು ಪಠ್ಯದಲ್ಲಿ ಬಳಸಲು ನೀಡಿದ ಪರವಾನಗಿಯನ್ನು ಡಾ. ಆರ್. ವಿ. ಭಂಡಾರಿಯವರ ಕುಟುಂಬದ ಪರವಾಗಿ ನೀಡಲಾಗಿತ್ತು. ಬದಲಾದ ಪರಿಸ್ಥಿತಿಯಲ್ಲಿ ಈ ಪಠ್ಯವನ್ನು ಹಿಂಪಡೆಯುತ್ತಿದ್ದೇವೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರದ ಸಾರಾಂಶ : ಕಳೆದ ಅವಧಿಯಲ್ಲಿ ತಿಳಿ ಕನ್ನಡ, ದ್ವಿತೀಯ ಭಾಷಾ ಕನ್ನಡ ಪಠ್ಯಪುಸ್ತಕ, ಪರಿಷ್ಕೃತ, (ಎರಡನೇ ಭಾಷೆ, ಕನ್ನಡ ಪಠ್ಯಪುಸ್ತಕ) ಎಂಟನೆಯ ತರಗತಿಯ ಪರಿವಿಡಿಯ ಪದ್ಯಭಾಗದ 2 ನೇ ಕವನ ಪುಟ ಸಂಖ್ಯೆ 69-71 ರಲ್ಲಿರುವ ಆರ್. ವಿ. ಭಂಡಾರಿಯವರು ಬರೆದ "ಹಾರಿದ ಹಕ್ಕಿಗಳು" ಕವನವನ್ನು ಪಠ್ಯದಲ್ಲಿ ಬಳಸಲು ನೀಡಿದ ಪರವಾನಗಿಯನ್ನು ಡಾ. ಆರ್. ವಿ. ಭಂಡಾರಿಯವರ ಕುಟುಂಬದ ಪರವಾಗಿ ನೀಡಲಾಗಿತ್ತು. ಬದಲಾದ ಪರಿಸ್ಥಿತಿಯಲ್ಲಿ ಈ ಪಠ್ಯವನ್ನು ಹಿಂಪಡೆದ ಪತ್ರ ತಮಗೆ ಕಳಿಸಲಾಗಿದೆ.
ಆದರೆ ಸದ್ಯದ ಪಠ್ಯ ಪುಸ್ತಕ ಪರಿಷ್ಕರಣೆಯ ಧ್ಯೇಯ ಫಲಿತಗಳು ಡಾ. ಆರ್.ವಿ ಭಂಡಾರಿಯವರು ಬಾಳಿದ ಮತ್ತು ಬೋಧಿಸಿದ ತಾತ್ವಿಕತೆ ಮತ್ತು ಮೌಲ್ಯಗಲಿಗೆ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ಅವರ ಕುಟುಂಬ ವರ್ಗ ಅವರ ವರ್ಗವನ್ನು ಪರಿಷ್ಕೃತ ಪಠ್ಯಪುಸ್ತಕದಲ್ಲಿ ಉಳಿದುಕೊಳ್ಳಲು ಅನುಮತಿಯನ್ನು ಹಿಂತೆಗೆದುಕೊಂಡಿದೆ ಎಂದು ಕುಟುಂಬದ ಪರವಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ.
ಯಮುನಾ ಗಾಂವ್ಕರ್ ಅವರ ಫೇಸ್ ಬುಕ್ ಪೋಸ್ಟ್ ಹೀಗಿದೆ...
"ಹಾರಿಹೋದ ಹಕ್ಕಿಗಳು" ಡಾ. ಆರ್ ವಿ ಭಂಡಾರಿಯವರ ಕವನ ಪರಿಷ್ಕೃತ ಪಠ್ಯದಿಂದ ಹಿಂಪಡೆದ ಪತ್ರ
ಡಾ. ಆರ್. ವಿ. ಭಂಡಾರಿಯವರು ಬರೆದ ಕವನವನ್ನು ಪರಿಷ್ಕೃತ ಪಠ್ಯದಲ್ಲಿ ಅಳವಡಿಸಿಕೊಳ್ಳಲು ಪರವಾನಗಿ ಹಿಂಪಡೆದಿರುವ ಪತ್ರವನ್ನು ಮಾನ್ಯ ಶ್ರೀ ಬಿ. ಸಿ. ನಾಗೇಶ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು ಇವರಿಗೆ ಅಂಚೆ ಮೂಲಕ ಮತ್ತು ಈ ಮೇಲ್ ಮೂಲಕ ಇಂದು ಕುಟುಂಬದ ಪರವಾಗಿ ಕಳಿಸಲಾಗಿದೆ.
ತಮಗೆಲ್ಲ ಗೊತ್ತಿರುವಂತೆ, ನಾಡಿನ ಜನತೆಯ ಸಾಕ್ಷಿ ಪ್ರಜ್ಞೆಯಂತಿದ್ದ ಡಾ. ಆರ್. ವಿ. ಭಂಡಾರಿಯವರು ಅರವತ್ತರ ದಶಕದಲ್ಲಿಯೇ ಎರಡು ಸ್ನಾತಕೋತ್ತರ ಉನ್ನತ ಪದವಿಗಳನ್ನು ನಂತರ ಸಂಶೋಧನಾ ಪ್ರಬಂಧವನ್ನು ಸಲ್ಲಿಸಿ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಕೊನೆಯವರೆಗೂ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಸೇವೆಸಲ್ಲಿಸಿದರು. ಮೂವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದವರು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಅವರ ಮನಸ್ಸನ್ನು ಅರಳಿಸುವ ಪರಿಯನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಂಡವರು. ನೂರಾರು ಪುಸ್ತಕ ಬರೆದು ಮಕ್ಕಳ ಸಾಹಿತ್ಯ, ವಿಮರ್ಶೆ, ಕತೆ, ಕಾದಂಬರಿ, ವೈಚಾರಿಕ, ಮಾನವಿಕ ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾದವರು. ಪ್ರಸಿದ್ಧ ತಾಳಮದ್ದಲೆ ಅರ್ಥಧಾರಿಗಳೂ ಆಗಿದ್ದರು. ಸಾಕ್ಷರತಾ ಆಂದೋಲನವನ್ನು ಒಳಗೊಂಡು ಶೈಕ್ಷಣಿಕ ಎಲ್ಲಾ ಕೆಲಸಗಳಲ್ಲಿ ಇದ್ದವರು. ಅಂದು ಸಾಹಿತ್ಯ ಅಕಾಡೆಮಿ, ಕನ್ನಡ ಜಾಗೃತಿ ಸಮಿತಿ, ಗ್ರಂಥಾಲಯ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ನಲವತ್ತು ದಶಕಗಳ ಕಾಲ ವಿವಿಧ ಸರ್ಕಾರಗಳ ಅವಧಿಯಲ್ಲಿ ಪಠ್ಯ ಪುಸ್ತಕ ರಚನೆಗೆ ತನ್ನ ಪ್ರಬುದ್ಧ ಸಲಹೆಗಳನ್ನು, ಅಗತ್ಯವಿದ್ದಲ್ಲಿ ಸೂಕ್ತ ಮಾರ್ಪಾಡುಗಳನ್ನು ಸೂಚಿಸುವಲ್ಲಿ ತೊಡಗಿಸಿಕೊಂಡಿದ್ದರು.