ಕೆಜಿಎಫ್: ಮಾಜಿ ಶಾಸಕನ ತೋಟದ ಮನೆ ಆವರಣದಲ್ಲಿ ವೃದ್ಧನ ಮೃತದೇಹ ಪತ್ತೆ

Update: 2022-06-03 16:33 GMT
ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು 

ಕೆಜಿಎಫ್ : ತಾಲೂಕಿನ ಬೇತಮಂಗಲದ ನಾಗಶೆಟ್ಟಿಹಳ್ಳಿಯ ಮಾಜಿ ಶಾಸಕ ವೈ. ಸಂಪಂಗಿ ರವರ ತೋಟದ ಮನೆ ಆವರಣದಲ್ಲಿ ವಯೋವೃದ್ಧ ವ್ಯಕ್ತಿಯ ಶವ ಪತ್ತೆಯಾಗಿದೆ. 

ಮೃತ ವ್ಯಕ್ತಿಯನ್ನು ಪೊಲೀಸರು ಗುರುತಿಸಿದ್ದು, ಟಿ. ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದ್ದಿನಾಯಕನಹಳ್ಳಿ ಗ್ರಾಮದ ನಿವಾಸಿ ತಾಯಲೂರಪ್ಪ (80) ಎಂದು ಗುರುತಿಸಲಾಗಿದೆ. 

ಮಾಜಿ ಶಾಸಕ ವೈ. ಸಂಪಂಗಿ ಅವರ ಹುಟ್ಟು ಹಬ್ಬವನ್ನು ತೋಟದ ಮನೆ ಆವರಣದಲ್ಲಿ ಬುಧವಾರ ರಾತ್ರಿ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಔತಣಕೂಟವನ್ನೂ ನಡೆಸಲಾಗಿತ್ತು.  ಔತಣ ಕೂಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಸಹ ಭಾಗವಹಿಸಿದ್ದರೆನ್ನಲಾಗಿದೆ. 

ಹುಟ್ಟು ಹಬ್ಬಕ್ಕೆ ಅಳವಡಿಸಲಾಗಿದ್ದ ಬೃಹತ್ ಪೆಂಡಾಲ್ ಬಿಚ್ಚುವ ಸಂದರ್ಭದಲ್ಲಿ ಶವ ಪತ್ತೆಯಾಗಿದೆ.  ಮೃತ ವ್ಯಕ್ತಿ ಮಾಜಿ ಶಾಸಕ ವೈ ಸಂಪಂಗಿ ರವರ ಹುಟ್ಟು ಹಬ್ಬಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ. 

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣಿದೇವಿ ಮಾಲಗತ್ತಿ, ಸ್ಥಳ ಪರಿಶೀಲನೆ ನಡೆಸಿದರು,  ಘಟನೆಗೆ ನಿಖರ ಕಾರಣ ಇನ್ನೂ ಪತ್ತೆಯಾಗಬೇಕಾಗಿದ್ದು ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News