ವ್ಯತ್ಯಾಸವಿದ್ದಲ್ಲಿ ವಾಸ್ತವಾಂಶದ ಆಧಾರದ ಮೇಲೆ ಪಠ್ಯ ಪರಿಷ್ಕರಣೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-06-04 10:42 GMT

ಚಿತ್ರದುರ್ಗ, ಮೇ 4: ನಮ್ಮದು ಬಸವ ಪಥದ ಸರಕಾರ. ಪಠ್ಯ ಪರಿಷ್ಕರಣೆಯಲ್ಲಿ ಏನಾದರೂ ವ್ಯತ್ಯಾಸವಿದ್ದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ, ವಾಸ್ತವಾಂಶದ ಆಧಾರದ ಮೇಲೆ ಪರಿಷ್ಕರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಇಂದು ಹಿರಿಯೂರಿನ ದೇವರಕೊಟ್ಟ ಹೆಲಿಪ್ಯಾಡ್ ಗೆ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಪಠ್ಯಪುಸ್ತಕ ಸಮಿತಿಯ ಕೆಲಸ ಪೂರ್ಣಗೊಂಡಿದ್ದರಿಂದ ಸಮಿತಿಯನ್ನು ವಿಸರ್ಜನೆಗೊಳಿಸಲಾಗಿದೆ. ಪರಿಷ್ಕೃತ ಪಠ್ಯದ ಬಗ್ಗೆ ಹಲವಾರು ಸ್ವಾಮೀಜಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ನೀಡಿದ್ದು, ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ನಮ್ಮದು ಬಸವಪಥ ಸರಕಾರ. ಬಸವಣ್ಣನವರ  ಉತ್ತಮ ವಚನಗಳಿದ್ದು, ಅವುಗಳನ್ನು ಪರಿಶೀಲಿಸಿದ್ದೇನೆ. 2015ರಲ್ಲಿ ಕಾಂಗ್ರೆಸ್ ಸರ್ಕಾರ ಪಠ್ಯ ಪರಿಷ್ಕರಣೆ ಮಾಡಿದ ಬರಗೂರು ರಾಮಚಂದ್ರಪ್ಪ ಸಮಿತಿ ಮತ್ತು ಈಗಿನ ಸಮಿತಿಗೆ ಕೇವಲ ಒಂದು ವಾಕ್ಯದ ವ್ಯತ್ಯಾಸವಿದ್ದು, ಉಳಿದಂತೆ ಲಿಂಗದೀಕ್ಷೆ ಸೇರಿದಂತೆ ಎಲ್ಲ ವಿಷಯಗಳು ಬರಗೂರು ರಾಮಚಂದ್ರಪ್ಪರ ಪಠ್ಯದಲ್ಲಿಯೂ ಇದೆ ಎಂದರು.

ಒಟ್ಟಾರೆ ಬಸವಣ್ಣನವರ ನಿಜ ಸ್ವರೂಪ ಹಾಗೂ ವಚನ ಸಾಹಿತ್ಯ ಪರಿಚಯ ಆಗಬೇಕು ಎಂಬುದು ಎಲ್ಲರ ಇಚ್ಛೆ. ಅದಕ್ಕಾಗಿ ಎಲ್ಲರ ಜತೆ ಸಮಾಲೋಚನೆ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

 ಹೆಡಗೆವಾರ್ ಅವರ ಪಠ್ಯವೂ ಇರಲಿದೆ. ಪರಿಷ್ಕೃತ ಪಠ್ಯಗಳಿಗೆ ಹೊಸ ಸಂಪುಟವನ್ನು ನೀಡಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News