ರಾಜ್ಯಸಭೆ ಚುನಾವಣೆ; ಜೆಡಿಎಸ್ ಮುಸ್ಲಿಮ್ ಅಭ್ಯರ್ಥಿ ಬೆಂಬಲಿಸಬೇಕು: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2022-06-04 12:36 GMT

ಬೆಂಗಳೂರು, ಜೂ. 4: ‘ಕಾಂಗ್ರೆಸ್‍ನ ರಾಜ್ಯಸಭಾ ಅಭ್ಯರ್ಥಿಗಳ ವಿಚಾರದಲ್ಲಿ ಜೆಡಿಎಸ್ ಪಕ್ಷದ ನಾಯಕರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಹೆಚ್ಚು ತಲೆ ಕೆಡಿಸಿಕೊಂಡಿದ್ದು ವಿಪಕ್ಷ ನಾಯಕರ ಮೇಲೆ ಎರಗಲು ಇದನ್ನೇ ಅವಕಾಶವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ದೂರಿದ್ದಾರೆ.

ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಕಾಂಗ್ರೆಸ್ ಪಕ್ಷದಿಂದ ಇಬ್ಬರನ್ನು ನಿಲ್ಲಿಸಿದರೂ ಗೆಲ್ಲುವುದು ಒಬ್ಬರೇ, ಹೀಗಾಗಿ ಕಾಂಗ್ರೆಸ್ ಪಕ್ಷವು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಲಿ ಎನ್ನುವುದು ದೇವೇಗೌಡರ ವಾದವಾದರೆ, ಕಾಂಗ್ರೆಸ್ ಪಕ್ಷವು ಮುಸ್ಲಿಂ ಅಭ್ಯರ್ಥಿಯನ್ನು ಮುಗಿಸಲು ಈ ಕೆಲಸ ಮಾಡಿದೆ ಎಂಬುದು ಕುಮಾರಸ್ವಾಮಿ ಅವರ ತಮಾಷೆಯಾಗಿದೆ.

‘ಇನ್ನು ಇತ್ತೀಚಿನ ದಿನಗಳಲ್ಲಿ ಕೋಮುವಾದಿಗಳಿಗೆ ಅನುಕೂಲವಾಗಲಿ ಮತ್ತು ಅವರ ಮತಗಳು ಒಡೆಯಲಿ ಎಂಬ ಕಾರಣಕ್ಕೆ ಕುಮಾರಸ್ವಾಮಿ ಮುಸಲ್ಮಾನರ ಸಮಸ್ಯೆಗಳ ಪರವಾಗಿ ದನಿ ಎತ್ತುತ್ತಿದ್ದಾರೆಂಬ ಸರಳ ಸಂಗತಿಯು ಅರ್ಥವಾಗಿದ್ದರೂ, ಕೋಮುವಿಷದ ವಿರುದ್ಧ ದನಿಮಾಡುತ್ತಿದ್ದಾರೆ ಬಿಡು ಎಂದುಕೊಳ್ಳುತ್ತಿದ್ದೆವು. ಆದರೆ, ಇದೀಗ ರಾಜ್ಯಸಭೆ ಅಭ್ಯರ್ಥಿಗಳ ವಿಚಾರದಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಬೋಗಸ್ ಮುಸ್ಲಿಂ ಪ್ರೇಮದ ಮುಖವಾಡ ಕಳಚಿ ಬಿದ್ದಿದ್ದು ಅವರ ಹಿಂದಿನ ಮಾತುಗಳು ದುರುದ್ದೇಶ ಮತ್ತು ಮತ ಒಡೆಯುವ ಕಾರಣಕ್ಕೆ ಆಡಿದ್ದ ಮಾತುಗಳು ಎಂಬ ಸಂಗತಿಯು ಸಾಬೀತಾಗಿದೆ' ಎಂದು ಟೀಕಿಸಿದ್ದಾರೆ.

ಗೌಡರನ್ನು ರಾಜ್ಯಸಭೆಗೆ ಕಳುಹಿಸಿದ್ದು ಕಾಂಗ್ರೆಸ್: ‘ಗೆಲ್ಲಲು ಸಾಧ್ಯವಿಲ್ಲದೇ ಇದ್ದರೂ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಾಕಿದೆ ಎಂದು ದೇವೇಗೌಡರು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ದೇವೇಗೌಡರ ಮಾತಿನ ಪ್ರಕಾರವೇ ಹೋಗುವುದಾದರೆ, ರಾಜ್ಯಸಭೆಯಲ್ಲಿ ಗೆಲ್ಲಲು ಬೇಕಾದಷ್ಟು ಬೆಂಬಲ ಇಲ್ಲದಾಗಲೂ ಅವರೂ ತಮ್ಮ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿದ್ದು ಇದು ಯಾವ ಕಾರಣಕ್ಕೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಇನ್ನು ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯ ನಂತರದಲ್ಲಿ ತುಮಕೂರು ಕ್ಷೇತ್ರವನ್ನು ಪಡೆದಿದ್ದ ದೇವೇಗೌಡ, ಅಲ್ಲಿ ಸೋತರು ಎಂಬ ಕಾರಣಕ್ಕೆ ಹಿರಿಯ ನಾಯಕರು ಎಂಬ ಗೌರವ ಇಟ್ಟುಕೊಂಡು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅವರಿಗೆ ರಾಜ್ಯಸಭೆಯಲ್ಲಿ ಅವಕಾಶವನ್ನು ಕಲ್ಪಿಸಿದೆ' ಎಂದು ಮಹದೇವಪ್ಪ ತಿಳಿಸಿದ್ದಾರೆ.

‘ಇಡೀ ರಾಜ್ಯ ಗೊತ್ತಿರುವ ಈ ಸಂಗತಿಯು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ಗೊತ್ತಿದೆ ಎಂದುಕೊಂಡಿರುವೆ. ಹೀಗಿರುವಾಗ ದೇವೇಗೌಡರು ತಾನು ಕಾಂಗ್ರೆಸ್ ಪರವಾಗಿ ನಿಲ್ಲಬೇಕಾದ್ದು ನ್ಯಾಯಯುತವಾದ ನಡೆ ಅಂತ ಅವರಿಗೆ ಅನ್ನಿಸುವುದಿಲ್ಲವೇ? ಇನ್ನು ವಿಪಕ್ಷದ ಸ್ಥಾನದಲ್ಲಿ ಇದ್ದುಕೊಂಡು ವಿರೋಧ ಪಕ್ಷವನ್ನೇ ಬೈಯ್ಯುವ ಅಪರೂಪದ ಜನಪ್ರತಿನಿಧಿಯಾದ ಕುಮಾರಸ್ವಾಮಿ ಅವರು ಬರಿ ಮಾತಿನಲ್ಲಿ ಮುಸಲ್ಮಾನರ ಮೇಲೆ ಪ್ರೀತಿ ತೋರಿಸದೇ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದರೆ, ಅವರ ಗೊಂದಲಮಯ ಮಾತುಗಳಿಗೂ ಅರ್ಥವಿರುತ್ತದೆ ಮತ್ತು ಮುಸ್ಲಿಮ್ ಅಭ್ಯರ್ಥಿಯು ರಾಜ್ಯಸಭೆಯನ್ನು ಪ್ರವೇಶಿಸಿದರೆ, ಈ ಹೊತ್ತಿನ ಕೆಟ್ಟ ಮುಸ್ಲಿಮ್ ದ್ವೇಷದ ಸಂದರ್ಭದಲ್ಲಿ ಆ ಬಗ್ಗೆ ದನಿ ಎತ್ತುವ ಅವರ ಶಕ್ತಿ ಹೆಚ್ಚಾಗುವುದಿಲ್ಲವೇ?' ಎಂದು ಮಹದೇವಪ್ಪ ಪ್ರಶ್ನಿಸಿದ್ದಾರೆ.

‘ಎಲ್ಲವೂ ಇಷ್ಟೊಂದು ನೇರವಾಗಿ ಮತ್ತು ಸ್ಪಷ್ಟವಾಗಿ ಇದ್ದಾಗಲೂ ಜೆಡಿಎಸ್ ಅಸೂಕ್ಷ್ಮತೆಯಿಂದ ವರ್ತಿಸಿದರೆ ಹೇಗೆ? ಕುಮಾರಸ್ವಾಮಿ ಅವರ ತಿಳುವಳಿಕೆ ಮತ್ತು ಅವರ ಸಾರ್ವಜನಿಕ ಜೀವನದ ಬಗ್ಗೆ ನಮಗೆ ಸ್ಪಷ್ಟತೆ ಇರುವುದರಿಂದ ಅವರ ಮಾತುಗಳಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿಟ್ಟುಕೊಂಡರೂ ದೇವೇಗೌಡರ ಹಿರಿತನ ಮತ್ತು ಅನುಭವಕ್ಕೆ ಏನಾಗಿದೆ? ಹೀಗೆ ಮಾಡಿದರೆ ಪೊಳ್ಳಾಗಿ ಆಡುವ ಕುಮಾರಸ್ವಾಮಿಗೂ ದೇವೇಗೌಡರಿಗೂ ವ್ಯತ್ಯಾಸ ಇದೆ ಎಂದು ನಾವು ಅಂದುಕೊಳ್ಳುವುದಾದರೂ ಹೇಗೆ? ಎಲ್ಲವೂ ಇಷ್ಟು ನೇರವಾಗಿ ಮತ್ತು ಸ್ಪಷ್ಟವಾಗಿ ಇದ್ದಾಗಲೂ ವಿಪಕ್ಷ ನಾಯಕರುಗಳ ಮೇಲೆ ಅನಾರೋಗ್ಯಕರವಾಗಿ ಮೂಡಿರುವ ದೇವೇಗೌಡರ ಅಸಹನೆಗೆ ಏನಾದರೂ ಅರ್ಥವಿದೆಯೇ?' ಎಂದು ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News