×
Ad

ರಾಜ್ಯಸಭೆ ಚುನಾವಣೆ ಸಂಬಂಧ ಖರ್ಗೆ ಅವರು ಯಾರೊಂದಿಗೂ ಸಂಧಾನ ನಡೆಸಿಲ್ಲ: ಡಿ ಕೆ ಶಿವಕುಮಾರ್

Update: 2022-06-04 21:29 IST

ತುಮಕೂರು : ರಾಜ್ಯಸಭೆ ಚುನಾವಣೆ ಸಂಬಂಧ ನಮ್ಮ ಪಕ್ಷದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಅವರು ಯಾರೊಂದಿಗೂ ಯಾವುದೇ ಸಂಧಾನ ಮಾತುಕತೆ ನಡೆಸಿಲ್ಲ. ಈ ಬಗ್ಗೆ  ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಖರ್ಗೆ ಅವರು ಪಕ್ದದ ಸಭೆಯಲ್ಲಿ ಪಾಲ್ಗೊಳ್ಳಲು ಒಂದು ದಿನ ದಿಲ್ಲಿಗೆ ಹೋಗಿ ಬಂದರು. ಚಿಂತನ ಶಿಬಿರದಂತೆ ಅಲ್ಲಿಯೂ ಇಂದು ಸಭೆ ಇತ್ತು. ಅದನ್ನು ಬಿಟ್ಟು ಅವರು ಯಾರೊಂದಿಗೂ ಸಮಾಲೋಚನೆ ನಡೆಸಿಲ್ಲ, ಸಂಧಾನ ಮಾತುಕತೆ ಯನ್ನೂ ನಡೆಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ತುಮಕೂರು ಕಾರಾಗೃಹದಲ್ಲಿ ಎನ್ ಎಸ್ ಯು ಐ ಮುಖಂಡರು, ಕಾರ್ಯಕರ್ತರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರ ಜತೆ ಶನಿವಾರ ಮಾತನಾಡಿದರು.

ಅವರು ಒಟ್ಟಾರೆ ಹೇಳಿದ್ದಿಷ್ಟು: ಎರಡನೇ ಅಭ್ಯರ್ಥಿಯನ್ನು ರಾಜ್ಯಸಭೆ ಚುನಾವಣೆ ಕಣಕ್ಕೆ ಇಳಿಸಿರುವುದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ತೀರ್ಮಾನ.

ನಾನು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ಮುಖಂಡರು ಚರ್ಚೆ ಮಾಡಿ, ಪಕ್ಷದ ಹಿತದೃಷ್ಟಿಯಿಂದ ಎರಡನೇ ಅಭ್ಯರ್ಥಿ ಹೆಸರನ್ನು ಹೈಕಮಾಂಡ್ಗೆ ಕಳುಹಿಸಿ ಕೊಟ್ಟಿದ್ದೆವು. ಅದನ್ನು ಹೈಕಮಾಂಡ್ ಅಂತಿಮಗೊಳಿಸಿದೆ.

ಕಾಂಗ್ರೆಸ್ ಗೆಲ್ಲುವುದು ಒಂದೇ ಸೀಟು ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ, ಖರ್ಗೆ ಅವರು ಮಾತುಕತೆ ನಡೆಸುತ್ತಿದ್ದಾರೆ ಎಂದು ದೇವೇಗೌಡರು ಹೇಳಿದ್ದಾರೆ ಎಂಬ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, "ನಾವು ಗೆಲ್ಲುತ್ತೆವೋ, ಸೋಲುತ್ತೆವೋ ಅದು ಬೇರೆ ವಿಚಾರ. ನಮ್ಮ ರಾಜಕಾರಣ ನಾವು ಮಾಡುತ್ತೇವೆ. ನನಗಿರುವ ಮಾಹಿತಿಯ ಪ್ರಕಾರ ಈ ಚುನಾವಣೆ ಸಂಬಂಧ ಖರ್ಗೆ ಅವರಾಗಲಿ, ನಮ್ಮ ಪಕ್ಷದ ಇತರ ಮುಖಂಡರಾಗಲಿ ಯಾರೂ ಅನ್ಯ ಪಕ್ಷದ ಯಾರ ಜತೆಗೂ ಚರ್ಚೆ ನಡೆಸಿಲ್ಲ. ನಮ್ಮನ್ನು ಯಾರೂ ಸಂಪರ್ಕ ಮಾಡಿಲ್ಲ. ಈ ವಿಚಾರದಲ್ಲಿ ಯಾವುದೇ ಸಂಧಾನ ನಡೆದಿಲ್ಲ. ಈ ಬಗ್ಗೆ ಬೇರೆ ಪಕ್ಷದವರು ಏನೂ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಯಾರೂ ಏನೇ ಹೇಳಿದರೂ ಸರಿಯೇ, ನಾವಂತು ಒಕ್ಕೊರಲಿನಿಂದ ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇವೆ ಎಂದರು.

ಇದರ ಹಿಂದೆ ನಮ್ಮದೇ ಆದ ರಾಜಕೀಯ ತಂತ್ರ ಇದೆ. ಅದನ್ನು ಹೇಳಲು ಹೋಗುವುದಿಲ್ಲ. ನಮ್ಮ ವೋಟನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದು ನಮಗೆ ಗೊತ್ತು. ಬೇರೆಯವರಂತೆ ನಮಗೂ ಗೆಲ್ಲುವ ವಿಶ್ವಾಸವಿದೆ. ಎಂದರು.

ಬೇರೆಯವರ ಮತ ನಿಮಗೆ ಸಿಗುತ್ತದೆಯೇ ಎಂಬ ಪ್ರಶ್ನೆಗೆ ನಾನದನ್ನೂ ಹೇಳಲು ಹೋಗುವುದಿಲ್ಲ. ಆತ್ಮಸಾಕ್ಷಿಯ ಮತ ಕೇಳಿದ್ದೇವೆ. ನೋಡೋಣ ಏನಾಗುತ್ತೆ ಎಂದು. ಒಟ್ಟಾರೆ ಎರಡನೇ ಅಭ್ಯರ್ಥಿ ನಮ್ಮೆಲ್ಲರ ಒಗ್ಗಟ್ಟಿನ ಅಭ್ಯರ್ಥಿ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News