ಕೃಷಿಯ ಕೊಲೆ ಬಿಜೆಪಿಯ ಸಾಧನೆ

Update: 2022-06-05 04:01 GMT

 ಭಾರತದ ಬದುಕು ಬೇಸಾಯದ ಮೇಲೆ ನಿಂತಿದೆ ಎಂಬ ಮಾತು ಈ ಕ್ಷಣಕ್ಕೂ ನಿಜ. ಮೋದಿಯವರ ನೇತೃತ್ವದ ಬಿಜೆಪಿ ಸರಕಾರದ ಯಪರಾ ತಪರಾ ಆರ್ಥಿಕ ನೀತಿಗಳ ಸುನಾಮಿಗೆ ಸಿಕ್ಕಿಯೂ ದೇಶ ಇನ್ನೂ ಉಸಿರಾಡುತ್ತಿದ್ದರೆ ಅದಕ್ಕೆ ಕಾರಣ ಕೃಷಿ. ದೇಶದ ಒಟ್ಟಾರೆ ಉದ್ಯೋಗಗಳಲ್ಲಿ ಈಗಲೂ ಶೇ.85ರಷ್ಟನ್ನು ಕೃಷಿ ಕ್ಷೇತ್ರವೊಂದೇ ಒದಗಿಸುತ್ತಿದೆ. ಕೃಷಿ ಮತ್ತು ಸಣ್ಣ ಕೈಗಾರಿಕೆಗಳು ಸೇರಿ ಶೇ.90 ಕ್ಕೂ ಹೆಚ್ಚಿನ ಜನರಿಗೆ ಉದ್ಯೋಗ ನೀಡಿವೆ. ಇಂಥ ಕ್ಷೇತ್ರವನ್ನು ಹಾಳುಗೆಡವಬೇಕು ಎಂದು ಬಿಜೆಪಿ ಮತ್ತು ಬಿಜೆಪಿ ಹಿಂದಿನ ಶಕ್ತಿಗಳು ನಿರಂತರ ಪ್ರಯತ್ನಿಸುತ್ತಿವೆ. ಕೇವಲ ಸ್ಲೋಗನ್‌ಗಳ/ಸುಳ್ಳುಗಳ ಮೂಲಕವೇ ಹೊಟ್ಟೆ ತುಂಬಿಸುವ ಕಲೆಯಲ್ಲಿ ಮಾತ್ರ ಬಿಜೆಪಿಗರು ಪರಿಣತರಾಗಿದ್ದಾರೆ. ಕಳೆದ 8 ವರ್ಷಗಳಲ್ಲಿ ಮೋದಿಯವರು ಹೇಳಿದ ಸುಳ್ಳುಗಳಿಗೆ ಲೆಕ್ಕವೇ ಇಲ್ಲ. ಅವುಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದೂ ಸೇರಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು 28-2-2016ರಂದು ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಭಾಷಣ ಮಾಡುವಾಗ 2022ರ ಒಳಗೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಘೊಷಣೆ ಮಾಡಿದರು. ಆ ನಂತರ ಈ ಘೋಷಣೆಯನ್ನು ಬಜೆಟ್‌ನಲ್ಲಿ ಸೇರಿಸಲಾಯಿತು. ನ್ಯಾಶನಲ್ ಸ್ಯಾಂಪಲ್ ಸರ್ವೇಯವರ ಪ್ರಕಾರ 2015-16ರಲ್ಲಿ ಪ್ರತಿ ರೈತ ಕುಟುಂಬದ ವಾರ್ಷಿಕ ಆದಾಯ 96,703 ರೂ.ಗಳಷ್ಟಿರುತ್ತದೆಂದು ಅಂದಾಜಿಸಲಾಗಿತ್ತು. ಅಂದರೆ ಒಂದು ಕೃಷಿ ಕುಟುಂಬದ ತಿಂಗಳ ಸರಾಸರಿ ಆದಾಯ 8,000 ರೂ. ಎಂದಾಯಿತು. ಈ ಎಂಟು ಸಾವಿರ ರೂಪಾಯಿಗಳಲ್ಲಿ ಸರಾಸರಿ ಶೇ.43ರಷ್ಟು ಕೂಲಿಯಿಂದ ಬರುತ್ತಿದೆ ಎಂದು ವರದಿಗಳು ಹೇಳುತ್ತಿವೆ.

2022ರಲ್ಲಿ ಇದು ದ್ವಿಗುಣಗೊಳ್ಳಬೇಕಾದರೆ 2015-16ರ ಬೆಲೆಗಳಲ್ಲಿ ಲೆಕ್ಕ ಹಾಕಿದರೆ ಸರಾಸರಿ ಪ್ರತಿ ರೈತ ಕುಟುಂಬದ ತಿಂಗಳ ಆದಾಯ 16,000 ರೂ.ಗೆ ಏರಿಕೆಯಾಗಬೇಕು. ವರ್ಷಕ್ಕೆ 1,72,694 ರೂ.ಯಷ್ಟಾಗಬೇಕು. ಇಂದಿನ ಬೆಲೆಗಳಲ್ಲಿ, ಹಣದುಬ್ಬರವನ್ನು ಸೇರಿಸಿ ಲೆಕ್ಕ ಹಾಕಿದರೆ 2.5ರಿಂದ 2.8 ಲಕ್ಷ ರೂಪಾಯಿಯಾಗಬೇಕು ಅಥವಾ ತಿಂಗಳಿಗೆ 22 ರಿಂದ 25 ಸಾವಿರ ರೂಪಾಯಿಯಾಗಬೇಕು ಎಂದು ತಜ್ಞರು ಹೇಳುತ್ತಿದ್ದಾರೆ. ರೈತರ ಆದಾಯ ದ್ವಿಗುಣಗೊಳ್ಳಬೇಕಾಗಿದ್ದರೆ 2016ರಿಂದಲೇ ನಿರಂತರವಾಗಿ ಕೃಷಿ ಕ್ಷೇತ್ರದ ಬೆಳವಣಿಗೆ ಪ್ರತಿ ವರ್ಷ ಸುಮಾರು ಶೇ. 10.5 ರಷ್ಟು ಇರಬೇಕಾಗಿತ್ತು. ಆದರೆ ವಾಸ್ತವವಾಗಿ ಬೆಳವಣಿಗೆಯಾಗಿದ್ದು ಕೇವಲ 2.88ರಷ್ಟು ಮಾತ್ರ ಎಂದು ಕೇಂದ್ರ ಸರಕಾರದ ಅಂಕಿ ಅಂಶಗಳೇ ಹೇಳುತ್ತವೆ. ಬಿಜೆಪಿಯಾಗಲಿ ಅದರ ನೇತಾರರಾದ ನರೇಂದ್ರ ಮೋದಿಯವರಾಗಲಿ ಯಾವುದೇ ಯೋಜನೆಯನ್ನು ಪ್ರಾರಂಭಿಸುವ ಮೊದಲು ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿರುವುದಿಲ್ಲ. ಯೋಜನೆಗಳನ್ನು ಘೋಷಿಸಿದ ಮೇಲೆ ಅದನ್ನು ಅನುಷ್ಠಾನ ಗೊಳಿಸಲು ಬೇಕಾದ ಕಾರ್ಯನೀತಿಗಳೂ ಇರುವುದಿಲ್ಲ. ಸಮರ್ಪಕ ಉಸ್ತುವಾರಿಯೂ ಇರುವುದಿಲ್ಲ. ನಂತರ ಆ ಯೋಜನೆ ಏನಾಯಿತು ಎಂದು ತಿಳಿದುಕೊಳ್ಳಲು ಅಗತ್ಯವಿರುವ ಅಂಕಿ-ಅಂಶಗಳನ್ನೂ ಜನರಿಗೆ ಒದಗಿಸುವುದಿಲ್ಲ. ಕೇಂದ್ರ ಸರಕಾರವು ಆಗಿಂದಾಗ್ಗೆ ಮಾಡಬೇಕಾದ ಸಮೀಕ್ಷೆಗಳನ್ನು ಬಹುತೇಕ ಸ್ಥಗಿತಗೊಳಿಸಿದೆ. 2019-20ರಲ್ಲಿ ಎನ್‌ಎಸ್‌ಎಸ್‌ಒ ಹಲವು ಆಯಾಮಗಳಲ್ಲಿ ಸಮೀಕ್ಷೆ ಮಾಡಿತು. ಆದರೆ ಸಮೀಕ್ಷೆಯ ವರದಿಗಳನ್ನು ಗುಪ್ತವಾಗಿ ಪರಿಶೀಲಿಸಿದ ಕೇಂದ್ರ ಸರಕಾರಕ್ಕೆ, ಆ ವರದಿಯು ತನಗೆ ವ್ಯತಿರಿಕ್ತವಾಗಿದೆ ಎಂದು ಅನ್ನಿಸಿದ ಕಾರಣ ಅದನ್ನು ಬಿಡುಗಡೆ ಮಾಡಲಿಲ್ಲ. ಆದರೂ ಆ ವರದಿ ಮಾಧ್ಯಮಗಳಿಗೆ ಸೋರಿಕೆಯಾಯಿತು.

ಸರಕಾರದ ಡೇಟಾ ನೋಡಿದರೂ ಕೂಡ ಮನಮೋಹನ್‌ಸಿಂಗ್ ಅವರ ಯುಪಿಎ ಅವಧಿಯಲ್ಲಿ ಕೃಷಿಯ ಜಿವಿಎ ಬೆಳವಣಿಗೆ ದರ ಸರಾಸರಿ ಶೇ. 4.6ಕ್ಕಿಂತ ಹೆಚ್ಚಿಗೆ ಇತ್ತು. ಮೋದಿಯವರ ಕಾಲದಲ್ಲಿ ಕೇವಲ ಶೇ. 3.3ರಷ್ಟಿದೆ.

ಇಷ್ಟೆಲ್ಲಾ ಆದರೂ ಮೋದಿಯವರ ಸರಕಾರ ಜಾಹೀರಾತು ಕೊಟ್ಟು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಕೃಷಿಕರ ಉಳಿವಿಗಾಗಿ ಎಂಎಸ್‌ಪಿ ಹೆಚ್ಚಿಸಿದ್ದೇವೆ ಎಂದು ಹೇಳುತ್ತಾರೆ. ವಾಸ್ತವವಾಗಿ ಯುಪಿಎ ಸರಕಾರ ನಿಗದಿಪಡಿಸಿದ ಬೆಂಬಲ ಬೆಲೆ ಮತ್ತು ಮೋದಿ ಸರಕಾರ ನಿಗದಿಪಡಿಸಿದ ಬೆಲೆಗಳ ನಡುವೆ ಅಗಾಧ ವ್ಯತ್ಯಾಸವಿದೆ. ಮನಮೋಹನ್‌ಸಿಂಗ್ ಅವರ ನೇತೃತ್ವದ ಯುಪಿಎ ಸರಕಾರ 2004ರಿಂದ 2013-14ರ ವೇಳೆಗೆ ಹಲವಾರು ಕೃಷಿ ಉತ್ಪನ್ನಗಳಿಗೆ ಶೇ. 204ರ ವರೆಗೆ ಬೆಂಬಲ ಬೆಲೆ ಹೆಚ್ಚಿಸಿದ್ದರು. ಭತ್ತದ ಮೇಲೆ ನೀಡುವ ಎಂಎಸ್‌ಪಿ ಶೇ.126ರಷ್ಟು ಹೆಚ್ಚು ಮಾಡಿದ್ದರು. ಮೋದಿಯವರು ಈ 8 ವರ್ಷಗಳಲ್ಲಿ ಭತ್ತದ ಎಂಎಸ್‌ಪಿಯನ್ನು ಕೇವಲ ಶೇ.44ರಷ್ಟು ಹೆಚ್ಚಿಸಿದ್ದಾರೆ. ತೊಗರಿಯ ಬೆಂಬಲ ಬೆಲೆಯನ್ನು ಮನಮೋಹನ್‌ಸಿಂಗ್ ಶೇ.204ರಷ್ಟು ಹೆಚ್ಚಿಸಿದ್ದರೆ ಮೋದಿಯವರು ಶೇ.44ರಷ್ಟು ಹೆಚ್ಚಿಸಿದ್ದಾರೆ. ಬಿಳಿಜೋಳದ ಮೇಲೆ ಶೇ.178ರಷ್ಟು ಹೆಚ್ಚಿಸಿದ್ದರೆ ಮೋದಿಯವರ ಸರಕಾರ ಕೇವಲ ಶೇ.78ರಷ್ಟು ಹೆಚ್ಚಿಸಿದೆ. ಶೇಂಗಾ ಪರಿಸ್ಥಿತಿಯೂ ಅಷ್ಟೇ. ಯುಪಿಎ ಸರಕಾರ ಶೇ. 163ರಷ್ಟು ಹೆಚ್ಚಿಸಿತ್ತು. ಬಿಜೆಪಿ ಸರಕಾರ ಕೇವಲ ಶೇ. 31.5ರಷ್ಟು ಹೆಚ್ಚಿಸಿದೆ. ಹೆಸರು ಕಾಳಿನ ಮೇಲಿನ ಎಂಎಸ್‌ಪಿಯನ್ನು ಕಾಂಗ್ರೆಸ್ ನೇತೃತ್ವದ ಸರಕಾರ ಶೇ.196ರಷ್ಟು ಹೆಚ್ಚಿಸಿದ್ದರೆ ಬಿಜೆಪಿ ಸರಕಾರ ಕೇವಲ ಶೇ.56ರಷ್ಟು ಹೆಚ್ಚಿಸಿದೆ. ಬಿಜೆಪಿಯವರು ಮುಗ್ಧ ಜನರಿಗೆ ಇನ್ನೊಂದು ಸುಳ್ಳು ಹೇಳುತ್ತಿದ್ದಾರೆ. ಮೋದಿ ಸರಕಾರ ಎಂಎಸ್‌ಪಿಯಡಿ ಕರ್ನಾಟಕದ ರೈತರಿಂದ ಸಿಕ್ಕಾಪಟ್ಟೆ ಖರೀದಿಸಿ ಜನರಿಗೆ ಅನುಕೂಲ ಮಾಡಿದೆ ಎನ್ನುವುದು ಆ ಸುಳ್ಳು. ವಾಸ್ತವದಲ್ಲಿ ಮನಮೋಹನ್‌ಸಿಂಗ್ ಅವರ ಸರಕಾರ ಕರ್ನಾಟಕದ ರೈತರಿಂದ 360.79 ಲಕ್ಷ ಕ್ವಿಂಟಾಲ್‌ಗಳನ್ನು ಖರೀದಿಸಿತ್ತು. ಮೋದಿಯವರ ಸರಕಾರ 2014ರಿಂದ 2021ರ ವರೆಗೆ 340.7 ಲಕ್ಷ ಟನ್‌ಗಳನ್ನು ಮಾತ್ರ ಖರೀದಿಸಿದೆ. ಕಾಂಗ್ರೆಸ್ ಪಕ್ಷವು ಭಾರತದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 6,000 ರೂಪಾಯಿಯಂತೆ ವರ್ಷಕ್ಕೆ 72,000 ರೂಪಾಯಿಯನ್ನು ಅವರ ಖಾತೆಗೆ ಹಾಕುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಮೋದಿಯವರ ಸರಕಾರ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದು ರೈತ ಕುಟುಂಬಗಳಿಗೆ ವರ್ಷಕ್ಕೆ 6,000 ರೂಪಾಯಿಯನ್ನು ನೀಡುತ್ತಿದೆ. ಅಂದರೆ ತಿಂಗಳಿಗೆ 500 ಮಾತ್ರ. ಕರ್ನಾಟಕದಲ್ಲಿ ಕೇಂದ್ರ ಸರಕಾರ ನೀಡುವ ಹಣದ ಜೊತೆಗೆ ತಿಂಗಳಿಗೆ 333 ರೂಪಾಯಿ ನೀಡುವುದಾಗಿ ಯಡಿಯೂರಪ್ಪನವರು ಘೋಷಿಸಿದ್ದರು. ಆದರೆ ಕಳೆದ ವರ್ಷದವರೆಗೆ 47 ಲಕ್ಷ ರೈತ ಕುಟುಂಬಗಳಿಗೆ ತಿಂಗಳಿಗೆ ನೀಡಿದ್ದು ಕೇವಲ 166 ರೂಪಾಯಿ ಮಾತ್ರ. ಇದು ಬಿಜೆಪಿಯವರ ಸಾಧನೆ.

ಕೃಷಿಕರ ಆದಾಯ 8 ವರ್ಷಗಳಲ್ಲಿ ದ್ವಿಗುಣಗೊಳ್ಳುವ ಬದಲು ಅವರ ಸಾಲದ ಪ್ರಮಾಣ ದ್ವಿಗುಣಗೊಳ್ಳುತ್ತಿದೆ. 2014ರಿಂದ 2019ರ ವರೆಗಿನ ಸರಕಾರದ ಅಂಕಿ-ಅಂಶಗಳನ್ನು ನೋಡಿದರೆ ರೈತರ ಸಾಲದ ಪ್ರಮಾಣ ಶೇ. 53ರಷ್ಟು ಹೆಚ್ಚಾಗಿತ್ತು. ಆ ನಂತರದ ಈ ಮೂರು ವರ್ಷಗಳಲ್ಲಿ ಅದರ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ. ಮೋದಿಯವರು ಕಾಂಗ್ರೆಸ್ ಸರಕಾರದ ಕಾಲದ ಬೆಳೆಯ ವಿಮಾ ಯೋಜನೆಯನ್ನು 'ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ' ಎಂದು ಹೆಸರು ಬದಲಿಸಿ ಜಾರಿಗೆ ತಂದರು. ಈ ಯೋಜನೆ ಸಮರ್ಪಕವಾಗಿಲ್ಲವೆಂದು ತಿಳಿದ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳೇ ಕೈ ಬಿಟ್ಟು, ಆಯಾ ರಾಜ್ಯಗಳೇ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತಂದಿವೆ.

ದೇಶದ ಕೃಷಿಕರ ಪರಿಸ್ಥಿತಿ ತೀವ್ರ ಆತಂಕದಲ್ಲಿದೆ. ರೈತರಲ್ಲಿ ಶೇ.87ರಷ್ಟು ಕುಟುಂಬಗಳು ಸಣ್ಣ ಮತ್ತು ಅತಿಸಣ್ಣ ರೈತರಿದ್ದಾರೆ. ಪ್ರತೀ ದಿನ ದೇಶದಲ್ಲಿ ಸಾವಿರಾರು ರೈತರು ಕೃಷಿಯನ್ನು ತೊರೆಯುತ್ತಿದ್ದಾರೆಂದು ವರದಿಗಳು ಹೇಳುತ್ತಿವೆ.

ಕೊರೋನ ಅಟ್ಟಹಾಸ ಮಾಡುತ್ತಿದ್ದಾಗ ಮೋದಿಯವರು ಕರಾಳ ಕೃಷಿ ಕಾಯ್ದೆಗಳನ್ನು ತಂದು ಅದಾನಿ, ಅಂಬಾನಿಗಳಂತಹ ಬೃಹತ್ ಕಾರ್ಪೊರೇಟ್ ಬಂಡವಾಳಿಗರಿಗೆ ಅನುಕೂಲ ಮಾಡಿಕೊಡಲು ಹೊರಟರು. ರೈತರು ನಡೆಸಿದ ಧೀರೋದಾತ್ತ ಹೋರಾಟದಿಂದಾಗಿ ಕಾಯ್ದೆಗಳನ್ನು ವಾಪಸ್ಸು ಪಡೆದರು. ಆದರೆ ನಮ್ಮ ರಾಜ್ಯದಲ್ಲಿ ಎಪಿಎಂಸಿಗಳು ಸಂಪೂರ್ಣ ಮುಳುಗಿ ಹೋಗುತ್ತಿದ್ದರೂ ಎಪಿಎಂಸಿ ಕಾಯ್ದೆಯನ್ನು ಹಿಂಪಡೆದಿಲ್ಲ. ಫಲವತ್ತಾದ ಭೂಮಿ ಬಂಡವಾಳಿಗರ ಕೈ ಸೇರುತ್ತಿದ್ದರೂ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯನ್ನು ಹಿಂದಕ್ಕೆ ಪಡೆದಿಲ್ಲ. ಇದರ ಜೊತೆಗೆ ಕೃಷಿಗೆ ನೀಡುವ ಸಬ್ಸಿಡಿಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ. ರೈತರು ತಮ್ಮ ಮನೆಗಳಲ್ಲಿನ ಚಿನ್ನವನ್ನು ಅಡವಿಟ್ಟು ಸಾಲ ತರುತ್ತಿದ್ದಾರೆ. ಬೆಳೆ ಬಂದಾಗ ಬೆಲೆ ಸಿಗುತ್ತಿಲ್ಲ. ಸರಕಾರದ ಭ್ರಷ್ಟಾಚಾರದಿಂದಾಗಿ ಕಳಪೆ ಔಷಧ, ಬೀಜ, ಗೊಬ್ಬರ ಮಾರುಕಟ್ಟೆಯಲ್ಲಿ ತುಂಬಿದೆ. ಇದನ್ನು ನಿಯಂತ್ರಣ ಮಾಡುವ ಶಕ್ತಿಯಾಗಲಿ, ಉದ್ದೇಶವಾಗಲಿ ಕೇಂದ್ರ, ರಾಜ್ಯ ಸರಕಾರಗಳಿಗೆ ಇಲ್ಲ.
ಹಾಗಾಗಿ ಈ ಎಂಟು ವರ್ಷಗಳ ಮೋದಿಯವರ ಸಾಧನೆಯೆಂದರೆ ಕೃಷಿ ಕ್ಷೇತ್ರವನ್ನು ಸಂಪೂರ್ಣ ಹಾಳುಗೆಡವಿ, ಅದನ್ನು ಕಾರ್ಪೊರೇಟ್ ಬಂಡವಾಳಿಗರ ಕಾಲ ಕೆಳಕ್ಕೆ ತಳ್ಳಿದ್ದಷ್ಟೇ ಎಂಬುದನ್ನು ಇತಿಹಾಸ ಹೇಳುತ್ತಿದೆ.

Writer - ಸಿದ್ದರಾಮಯ್ಯ

contributor

Editor - ಸಿದ್ದರಾಮಯ್ಯ

contributor

Similar News