ಮಾನವೀಯ ಗುಣಗಳಲ್ಲಿ ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ: ಸಿಎಂ ಬೊಮ್ಮಾಯಿ
ಬೆಂಗಳೂರು, ಜೂ.5: ಮಾನವೀಯ ಗುಣಗಳಲ್ಲಿ ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ. ಮಾನವೀಯ ಗುಣವುಳ್ಳ ವೈಚಾರಿಕತೆಯನ್ನು ನಾವು ಬೆಳೆಸಿಕೊಳ್ಳಬೇಕು. ಇತರರನ್ನು ಗೌರವವಿಂದ ಕಾಣುವುದು ಮೊದಲ ಮಾನವೀಯ ಗುಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರವಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ವೈ.ಕೆ.ಎಂ-75 (ವೈ.ಕೆ.ಮುದ್ದುಕೃಷ್ಣ) ಸಂಭ್ರಮಾಚರಣೆ, ಆತ್ಮಕಥನ ಹಾಗೂ ‘ಹಾಡು ಹಿಡಿದ ಜಾಡು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಹಿತ್ಯ ಬಹಳದೊಡ್ಡ ಶಕ್ತಿ. ಸಾಹಿತ್ಯದಿಂದ ವೈಚಾರಿಕತೆ ಬೆಳೆಯುತ್ತಿದೆ. ನಮ್ಮಲ್ಲಿನ ಒಳಪಯಣಕ್ಕೆ ಸಾಹಿತ್ಯ ಸಹಕರಿಸುತ್ತದೆ. ವ್ಯಕ್ತಿತ್ವ ಚಿಂತನೆಯ ಲಹರಿಯನ್ನು ಬಿಂಬಿಸುತ್ತದೆ. ನಮ್ಮ ತತ್ವಸಿದ್ಧಾಂತಗಳ ಆಧಾರದ ಮೇಲೆ ನಮ್ಮ ಅಭಿಪ್ರಾಯಗಳು ಬೆಳೆಯುತ್ತವೆ. ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಸರ್ವಸ್ವತಂತ್ರರು. ಈ ನಿಟ್ಟಿನಲ್ಲಿ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಸಾಹಿತಿಗಳಲ್ಲಿ, ಚಿಂತಕರಲ್ಲಿ ಸಾಧನೆ ಮಾಡುವ ಶಕ್ತಿಯಿದೆ. ಈ ಸಾಧನೆ ಕನ್ನಡವನ್ನು ಮಾತ್ರವಲ್ಲ ವೈಚಾರಿಕತೆ ಶ್ರೀಮಂತಗೊಳಿಸುತ್ತದೆ. ನಮ್ಮಲ್ಲಿರುವುದು ನಾಗರಿಕತೆ, ನಾವೇನಾಗಿದ್ದೇವೋ ಅದು ಸಂಸ್ಕೃತಿ. ಇಂತಹ ವೈಚಾರಿಕ ಚಿಂತನೆಗೆ ಈ ವೇದಿಕೆ ಅವಕಾಶ ಮಾಡಿಕೊಟ್ಟಿದೆ ಎಂದರು.
ಸಾಹಿತ್ಯ ದಿಗ್ಗಜರ ನಡುವೆ ಚರ್ಚೆಗೆ, ವೈಚಾರಿಕತೆಗೆ ಈ ಕಾರ್ಯಕ್ರಮ ಅವಕಾಶ ಮಾಡಿಕೊಟ್ಟಿದೆ. ಕೆಲವರು ವೃತ್ತಿ ಮತ್ತು ಪ್ರವೃತ್ತಿಯಲ್ಲಿ, ಪ್ರವೃತ್ತಿಗೆ ಹೆಚ್ಚು ಮಹತ್ವ ನೀಡಿ, ಪರಿಪೂರ್ಣತೆಯನ್ನು ಹೊಂದುವುದು ವಿರಳ ಮತ್ತು ಅರ್ಥಪೂರ್ಣ. ವಿವಿಧ ಸರಕಾರದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಮುದ್ದುಕೃಷ್ಣ ಅವರು ಸುಗಮಸಂಗೀತದ ಜಾಡನ್ನು ಹಿಡಿದು ಸಾಧನೆ ಮಾಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಸಂತೃಪ್ತಿಯಿಂದ ಕಾರ್ಯ ನಿರ್ವಹಿಸಿದ್ದಾರೆ. ಆತ್ಮಸಾಕ್ಷಿಯಂತೆ ಜೀವನಪಯರ್ಂತ ನಡೆದುಕೊಳ್ಳುವುದೂ ಕಷ್ಟಸಾಧ್ಯ. ವೈಕೆಎಂ ಅವರು ತಮ್ಮ ಆತ್ಮಸಾಕ್ಷಿಯಂತೆ ಸಂಗೀತ, ಸಂಗೀತ ಸಂಘಟನೆಯನ್ನು ನಡೆಸಿಕೊಂಡು ಬಂದಿದ್ದು, ಅವರು ಸಂತೋಷ ಹಾಗೂ ಸಂತೃಪ್ತಿಯ ಭಾವವನ್ನು ಹೊಂದಿದ್ದಾರೆ ಎಂದರು.
ಒಬ್ಬ ಅಧಿಕಾರಿ ಸಾಹಿತ್ಯ ಲೋಕದಲ್ಲಿ ಅದ್ಭುತ ಸಾಧನೆ ಮಾಡಿರುವುದು ‘ಹಾಡು ಹಿಡಿದ ಜಾಡು’ ಕೃತಿ ನಿರೂಪಿಸುತ್ತಿದೆ. ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ. ವೈ.ಕೆ.ಮುದ್ದುಕೃಷ್ಣ ಅವರಿಗೆ ಆಯಸ್ಸು, ಆರೋಗ್ಯ, ಯಶಸ್ಸು ಸಾಧನೆಗಳನ್ನು ಭಗವಂತ ದಯಪಾಲಿಸಲಿ ಎಂದು ಮುಖ್ಯಮಂತ್ರಿಗಳು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಹಂಪ ನಾಗರಾಜಯ್ಯ, ಕವಿ ಎಚ್.ಎಸ್.ವೆಂಕಟೇಶ್ ಮೂರ್ತಿ, ಸಪ್ನ ಬುಕ್ ಹೌಸ್ ನಿತಿನ್ ಉಪಸ್ಥಿತರಿದ್ದರು.