ಮಂಡ್ಯ | ಇಬ್ಬರು ಅಪರಿಚಿತ ಮಹಿಳೆಯರ ಭೀಕರ ಹತ್ಯೆ; ಪ್ರತ್ಯೇಕ ನಾಲೆಗಳಲ್ಲಿ ಮೃತದೇಹ ಪತ್ತೆ

Update: 2022-06-08 12:41 GMT
ಸಾಂದರ್ಭಿಕ ಚಿತ್ರ -PTI

ಮಂಡ್ಯ, ಜೂ.8: ಜಿಲ್ಲೆಯ ಎರಡು ಕಡೆ ಇಬ್ಬರು ಅಪರಿಚಿತ ಮಹಿಳೆಯರ ಮೃತದೇಹ ಪತ್ತೆಯಾಗಿದ್ದು, ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ ನೀರಿನಲ್ಲಿ ಬಿಸಾಡಿದ್ದಾರೆ. 

ಪಾಂಡವಪುರ ತಾಲೂಕಿನ ಬೇಬಿ-ಕೆ.ಬೆಟ್ಟಹಳ್ಳಿ ಮಾರ್ಗದ ಬೇಬಿ ಕೆರೆಯ ನಾಲೆಯಲ್ಲಿ ಓರ್ವ ಮಹಿಳೆ ಶವ ಪತ್ತೆಯಾಗಿದ್ದರೆ, ಮತ್ತೊಬ್ಬ ಮಹಿಳೆಯ ಶವ ಶ್ರೀರಂಗಪಟ್ಟಣ ತಾಲೂಕು ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಸಿಡಿಎಸ್ ನಾಲೆಯ ಪಕ್ಕದ ಜಮೀನಿನಲ್ಲಿ ದೊರೆತಿದೆ.

ಈ ಮಹಿಳೆಯರನ್ನು ಎರಡು ಭಾಗವಾಗಿ ಕತ್ತರಿಸಿ ಹತ್ಯೆ ಮಾಡಲಾದ್ದು, ಹೊಟ್ಟೆಯ ಕೆಳಭಾಗದ ದೇಹಮಾತ್ರ ಪತ್ತೆಯಾಗಿದೆ. ಎರಡೂ ಶವಗಳ ಕಾಲುಗಳನ್ನು ಹಗ್ಗದಲ್ಲಿ ಕಟ್ಟಲಾಗಿದೆ ಎಂದು ಹೇಳಲಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲೆಯ ಜನರು ಭಯಭೀತರಾಗಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅರಕೆರೆ ಮತ್ತು ಪಾಂಡವಪುರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕೊಲೆಯಾದ ಮಹಿಳೆಯರ ಹೆಸರು ವಿಳಾಸ ಹಾಗೂ ದುಷ್ಕರ್ಮಿಗಳ ಪತ್ತೆಗೆ ಪೊಲೀಸರ ತಂಡ ರಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News