ಸಿ ರಿಪೋರ್ಟ್ ಸಲ್ಲಿಸಿದ ಬಳಿಕವೂ ತನಿಖೆ ಮುಂದುವರಿಸಬಹುದು: ಹೈಕೋರ್ಟ್ ಗೆ ವಕೀಲರ ಹೇಳಿಕೆ

Update: 2022-06-09 14:14 GMT

ಬೆಂಗಳೂರು, ಜೂ.9: ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಸಂಘದ ಅಧ್ಯಕ್ಷ ಎ. ಅಮೃತರಾಜ್ ವಿರುದ್ಧ ಹೂಡಲಾಗಿರುವ ಜೀವ ಬೆದರಿಕೆ ಪ್ರಕರಣದಲ್ಲಿ ಸಮನ್ಸ್ ಜಾರಿಗೊಳಿಸಿರುವುದನ್ನು ರದ್ದುಗೊಳಿಸಬೇಕು ಎಂದು ಕೋರಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‍ನ ಪೂರ್ವ ನಿದರ್ಶನಗಳನ್ನು ನ್ಯಾಯಾಲಯಕ್ಕೆ ಪ್ರಸ್ತುತಪಡಿಸಿ ಎಂದು ದೂರುದಾರರ ಪರವಕೀಲರಿಗೆ ಹೈಕೋರ್ಟ್ ಸೂಚಿಸಿದೆ. ದೂರುದಾರರ ಪರ ವಕೀಲರೂ ಸಿ ರಿಪೋರ್ಟ್ ಸಲ್ಲಿಸಿದ ಬಳಿಕವೂ ತನಿಖೆ ಮುಂದುವರೆಸಬಹುದು ಎಂದು ಹೈಕೋರ್ಟ್‍ಗೆ ತಿಳಿಸಿದ್ದಾರೆ. 

ನನ್ನ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೊಲೆಯತ್ನ, ಜೀವ ಬೆದರಿಕೆ ಆರೋಪದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿ ಅಮೃತರಾಜ್ ಅವರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠ, ವಿಚಾರಣೆ ನಡೆಸಿತು. 

ವಿಚಾರಣೆ ವೇಳೆ ಅಮೃತರಾಜ್ ಪರ ವಕೀಲರು ವಾದ ಮಂಡಿಸಿ, ಈ ಪ್ರಕರಣದಲ್ಲಿ ಈಗಾಗಲೇ ಯಶವಂತಪುರ ಮತ್ತು ಆರ್‍ಎಂಸಿ ಯಾರ್ಡ್ ಪೊಲೀಸರು ಎರಡು ಬಾರಿ ‘ಸಿ’ ರಿಪೋರ್ಟ್ ಸಲ್ಲಿಸಿದ್ದಾರೆ. ನ್ಯಾಯಾಲಯದ ಆದೇಶ ವಿಲ್ಲದೆ ಪ್ರಕರಣದ ಮುಂದುವರಿದ ತನಿಖೆಯನ್ನು ಕೈಗೊಂಡು ಆರೋಪಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವುದು ಕಾನೂನುಬಾಹಿರ. ಹೀಗಾಗಿ, ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಪೀಠಕ್ಕೆ ತಿಳಿಸಿದರು. 

ದೂರುದಾರರೂ ಆದ ಪ್ರತಿವಾದಿ ಬಿ.ಆರ್.ಮುರಳೀಧರ ಪರ ವಾದ ಮಂಡಿಸಿದ ವಕೀಲ ಸಿ.ಎಚ್.ಹನುಮಂತರಾಯ ಅವರು, ಸಿ ರಿಪೆÇೀರ್ಟ್ ಸಲ್ಲಿಸಿದ ಮಾತ್ರಕ್ಕೆ ಪ್ರಕರಣ ಮುಕ್ತಾಯವಾಗಿದೆ ಎಂದರ್ಥವಲ್ಲ. ಕರ್ನಾಟಕ ಪೊಲೀಸ್ ಮ್ಯಾನುಯಲ್ ಅನುಸಾರ ಅಂತಿಮ ‘ಸಿ’ ವರದಿ ಸಲ್ಲಿಸಿದ ಪ್ರಕರಣದಲ್ಲಿ ತನಿಖಾಧಿಕಾರಿಗೆ ಯಾವುದಾದರೂ ಸಾಕ್ಷ್ಯ ಲಭಿಸಿದಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೆ ಸ್ವಯಂ ಅಥವಾ ಮೇಲಧಿಕಾರಿಯ ಆದೇಶದ ಮೇರೆಗೆ ತನಿಖೆ ಮುಂದುವರೆಸಬಹುದು ಎಂದು ಪೀಠಕ್ಕೆ ತಿಳಿಸಿದರು. 

ಬಿ ರಿಪೋರ್ಟ್ ಸಲ್ಲಿಸಿದಾಗ ಮಾತ್ರ ಪ್ರಕರಣ ಮುಕ್ತಾಯವಾಗಿದೆ ಎಂದರ್ಥ. ಮುಂದುವರೆದ ತನಿಖೆಗೆ ನ್ಯಾಯಾಲಯದ ಅನುಮತಿಯ ಅಗತ್ಯವಿರುತ್ತದೆ. ಆದರೆ, ಸಿ ಅಂತಿಮ ವರದಿ ಸಲ್ಲಿಸಿದಾಗ ಅದರ ಅಗತ್ಯವಿಲ್ಲ ಎಂಬುದನ್ನು ಕರ್ನಾಟಕ ಪೊಲೀಸ್ ಮ್ಯಾನುಯಲ್ ಸೂಚಿಸುತ್ತದೆ ಎಂದು ವಿವರಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‍ನ ಪೂರ್ವನಿದರ್ಶನಗಳು ಏನು ಹೇಳುತ್ತವೆ ಎಂಬ ವರದಿಗಳನ್ನು ಪ್ರಸ್ತುತಪಡಿಸಿ ಎಂದು ವಕೀಲ ಸಿ.ಎಚ್.ಹನುಮಂತರಾಯ ಅವರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣವೇನು: ಮತ್ತೀಕೆರೆಯ ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆಯಲ್ಲಿ ಉಸ್ತುವಾರಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಬಿ.ಆರ್.ಮುರಳೀಧರ ಅವರು, ಅಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ಪರಿವೀಕ್ಷಕ ಹಾಗೂ ಉಪವಿಭಾಗಾಧಿಕಾರಿ ಕಚೇರಿಯ ಜಾಹೀರಾತು ವಿಭಾಗದ ನೌಕರರಾಗಿದ್ದ ಅಮೃತರಾಜ್ ತಮ್ಮ ಮೇಲೆ ಕ್ರಿಕೆಟ್ ಬ್ಯಾಟ್‍ನಿಂದ ಹಲ್ಲೆ ಮಾಡಿ ಮೂರು ಹಲ್ಲುಗಳನ್ನು ಮುರಿದು, ಕೊಲೆಯತ್ನ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದರು. ಈ ಘಟನೆ ನಡೆದ ಸಂದರ್ಭದಲ್ಲಿ ಅಮೃತರಾಜ್ ಅವರು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ನಿರ್ದೇಶಕರಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News