ಅಸಮರ್ಥ ಗೃಹ ಸಚಿವರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಶಾಸಕ ಪ್ರಿಯಾಂಕ್ ಖರ್ಗೆ ಟೀಕೆ
ಕಲಬುರಗಿ: ಅಸಮರ್ಥ ಗೃಹ ಸಚಿವರಿಂದಾಗಿ ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಹಾಗಾಗಿ, ಜಿಲ್ಲೆಯಲ್ಲಿ ಮಹಿಳೆಯರ ನಾಪತ್ತೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದು ಮಾಜಿ ಸಚಿವ, ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಅವರು ಕಲಬುರಗಿಯ ಜಗತ್ ಸರ್ಕಲ್ ಬಳಿಯ ಬಸವೇಶ್ವರ ಪ್ರತಿಮೆಯ ಹತ್ತಿರ ನಡೆಯುತ್ತಿರುವ 24 ಗಂಟೆಗಳ ಅಹೋರಾತ್ರಿ ಧರಣಿಯ ಸ್ಥಳದಲ್ಲಿ ಮಾಧ್ಯಮದವದರೊಂದಿಗೆ ಮಾತನಾಡುತ್ತಿದ್ದರು.
ಪಠ್ಯಪುಸ್ತಕಗಳಲ್ಲಿ ಕೇಸರಿಕರಣ ಹಾಗೂ ಪರಿಷ್ಕೃತ ಪಠ್ಯಪುಸ್ತಕ ದಲ್ಲಿ ಮಹನೀಯರಿಗೆ ಅವಹೇಳನ ಮಾಡಲಾಗಿದೆ ಎಂದು ಸರ್ಕಾರದ ನಿರ್ಧಾರವನ್ನು ವಿರೋಧಿಸಿ 24 ಗಂಟೆಗಳ ಅಹೋರಾತ್ರಿ ಧರಣಿ ನಡೆಸುತ್ತಿದ್ದು ಖರ್ಗೆ ಅವರು ನಿನ್ನೆ ಬೆಳಿಗ್ಗೆಯಿಂದಲೇ ಭಾಗವಹಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 40ಕ್ಕೂ ಅಧಿಕ ಚಿಕ್ಕವಯಸ್ಸಿನ ಮಕ್ಕಳೂ ಸೇರಿದಂತೆ ಮಹಿಳೆಯರು ನಾಪತ್ತೆಯಾಗಿರುವ ಕುರಿತು ಪೊಲೀಸ್ ಠಾಣೆ ಗಳಲ್ಲಿ ದೂರು ದಾಖಲಾಗಿವೆ. ಇದು ಜಿಲ್ಲೆಯಲ್ಲಿ ಕಾನೂನು ಸುವವ್ಯಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಇದಕ್ಕೆ ಯಾರು ಉತ್ತರ ಕೊಡಬೇಕು ? ಸ್ವತಃ ಗೃಹ ಸಚಿವರಿಗೆ ತಮ್ಮ ಇಲಾಖೆಯ ಬಗ್ಗೆ ಗೌರವವಿಲ್ಲ. ತಮ್ಮ ಸಿಬ್ಬಂದಿಗಳನ್ನೇ 'ಎಂಜಲು ಕಾಸಿಗೆ ಕಾಯುವ ನಾಯಿಗಳು' ಎಂದು ಜರಿಯುತ್ತಾರೆ. ಹೀಗಿರುವಾಗ ಇಲಾಖೆಯ ಮೇಲೆ ಹಿಡಿತ ಹೇಗೆ ಸಾಧ್ಯ ? ಕಾನೂನು ಸುವವ್ಯಸ್ಥೆ ಬಿಗಿಯಾಗಿರಲು ಸಾಧ್ಯ ? ಎಂದು ಪ್ರಶ್ನಿಸಿದರು.
ನಗರದ ಲಾಡ್ಜ್ ಗಳು ಪೊಲೀಸರ ಸೆಟಲ್ ಮೆಂಟ್ ಕೇಂದ್ರಗಳಾಗಿವೆ ಎಂದು ಆರೋಪಿಸಿದ ಅವರು, ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಗಾಂಜಾ, ಮಟ್ಕಾ, ಬೆಟ್ಟಿಂಗ್ ದಂದೆಗಳು ಅವ್ಯಾಹತವಾಗಿ ಸಾಗಿವೆ. ಇಲಾಖೆ ಬಗ್ಗೆ ಹೆದರಿಕೆ ಯಾರಿಗೂ ಇಲ್ಲದಂತಾಗಿದೆ. ಇಂತಹ ಸಂದರ್ಭಲ್ಲಿ ಮಹಿಳೆಯರ ರಕ್ಷಣೆ ಯಾರು ಮಾಡಬೇಕು? ಕೇಂದ್ರ ಸರ್ಕಾರದ "ಬೇಟಿ ಬಜಾವೋ; ಬೇಟಿ ಪಡಾವೋ" ಯೋಜನೆ ಕೇವಲ ನಾಮಕಾವಾಸ್ಥೆಯಂತಾಗಿದ್ದು, ಈ ಯೋಜನೆ ಕೇವಲ ಪ್ರಚಾರ ಮಾತ್ರ ಪಡೆದುಕೊಂಡಿದೆ ಎಂದು ಟೀಕಿಸಿದರು.
ಎರಡೂವರೆ ವರ್ಷದಲ್ಲಿ 180 ಮಿಸ್ಸಿಂಗ್ ಕೇಸ್ ನಡೆದಿವೆ, 34 ಯುವತಿಯರು, ಮಹಿಳೆಯರ ಸುಳಿವೆ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು ಮಹಿಳೆಯರು ನಾಪತ್ತೆಯಾದ ಪ್ರಕರಣಗಳಲ್ಲಿ ಅವರನ್ನ ಬಲವಂತದಿಂದಲೂ ಕರೆದುಕೊಂಡು ಹೋಗಿರಬಹುದು. ಪೊಲೀಸರು ಮಹಿಳೆಯರು ನಾಪತ್ತೆ ವಿಷಯ ಬಂದಾಗ ಮೊದಲು ದೂರು ದಾಖಲಿಸಿಕೊಂಡು ತಕ್ಷಣ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಖರ್ಗೆ ಅವರು ಆಗ್ರಹಿಸಿದರು.
ಮಹಿಳೆಯ ಜೀವನ ನಿರ್ವಹಣೆಗೆ ಹಾಗೂ ಅವರು ಗೌರವಯುತವಾಗಿ ಬದುಕುವಂತಾಗಲು ಸರ್ಕಾರ ಸಮಗ್ರ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಇದೇ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.