ಬಿಜೆಪಿ ಶಾಸಕ ನೆಹರು ಓಲೇಕಾರ್ ಕುಟುಂಬದಿಂದ ದಬ್ಬಾಳಿಕೆ ಆರೋಪ; ನಾಲ್ವರಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Update: 2022-06-16 09:21 GMT
ಶಾಸಕ ನೆಹರು ಓಲೇಕಾರ್

ಹಾವೇರಿ: ಹಾವೇರಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ನೆಹರು ಓಲೇಕಾರ್ ಅವರ ಕುಟುಂಬ ದಬ್ಬಾಳಿಕೆ ಮಾಡುತ್ತಿದೆ ಎಂಬ ಆರೋಪಿಸಿ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಲ್ಲಿನ ಶಿಡೇನೂರು ಗ್ರಾಮದಲ್ಲಿ ನಡೆದಿದೆ. 

ಉಳುಮೆ ಮಾಡುತ್ತಿರುವ ಜಮೀನನ್ನು ಶಾಸಕ ನೆಹರು ಓಲೇಕಾರ್ ಕುಟುಂಬ ಕಿತ್ತುಕೊಳ್ಳಲು ಯತ್ನಿಸುತ್ತಿದೆ ಎಂದು ಶಿವಾಜಿನಗರ ಕಂದಾಯ ಗ್ರಾಮದ ಪಾಂಡಪ್ಪ ಕಬ್ಬೂರು, ಗಂಗವ್ವ ಕಬ್ಬೂರು, ಹನುಮಂತಪ್ಪ ಬಡಿಗೇರ್ ಮತ್ತು ಗುರುಚಪ್ಪ ಲಮಾಣಿ ಹೊಲದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. 

ವಿಷ ಸೇವಿಸಿ ಅಸ್ವಸ್ಥರಾಗಿದ್ದ ನಾಲ್ವರನ್ನು ಬ್ಯಾಡಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಶಿಡೇನೂರು ಗ್ರಾಮದಲ್ಲಿ 29 ಕುಟುಂಬಗಳು ಅಕ್ರಮ- ಸಕ್ರಮ ಜಮೀನಿನಲ್ಲಿ ಸಾಗುವಳಿ ಮಾಡುತ್ತಿವೆ. ಆದರೆ ತಾವು ಸಾಗುವಳಿ ಮಾಡುತ್ತಿರುವ ಜಮೀನಿನಲ್ಲಿ ಪ್ರತಿ ಕುಟುಂಬವೂ ತಲಾ 15 ಗುಂಟೆ ಜಮೀನು ಬಿಟ್ಟುಕೊಡಬೇಕು ಎಂದು ಶಾಸಕ ನೆಹರು ಓಲೇಕಾರ್ ಮತ್ತು ಅವರ ಮಕ್ಕಳು ಒತ್ತಾಯಿಸಿದ್ದಾರೆ. ಜಮೀನು ಬಿಟ್ಟುಕೊಡದಿದ್ದಕ್ಕೆ ಗ್ರಾಮದಲ್ಲಿನ ಜನರು ಕೃಷಿಗೆ ಸಹಕಾರ ಕೊಡದಂತೆ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. 

ಈ ಆರೋಪಕ್ಕೆ ಸಂಬಂಧಿಸಿ ಶಾಸಕ ನೆಹರು ಓಲೇಕಾರ್ ಅವರಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News