ಸೋನಿಯಾ ಗಾಂಧಿ ಮಾತ್ರವಲ್ಲ, ಯಡಿಯೂರಪ್ಪ, ವಿಜಯೇಂದ್ರ ಕೂಡ ಜೈಲಿಗೆ ಹೋಗ್ತಾರೆ: ಶಾಸಕ ಯತ್ನಾಳ್

Update: 2022-06-17 02:13 GMT

ಹಾವೇರಿ:  ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರ ವಿರುದ್ಧ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. 

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ಮಾತನಾಡಿದ ಯತ್ನಾಳ್ , 'ಕಾಂಗ್ರೆಸ್‌ನ ಸೋನಿಯಾ ಗಾಂಧಿ ಮಾತ್ರವಲ್ಲ,  ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ  ಬಿ.ವೈ ವಿಜಯೇಂದ್ರ ಕೂಡ ಜೈಲಿಗೆ ಹೋಗುವ ಕಾಲ  ಬರುತ್ತದೆ. ಬರೀ ಕಾಂಗ್ರೆಸ್ ನಾಯಕರ ಮನೆಯಲ್ಲಿ ಮಾತ್ರ ರೈಡ್ ಮಾಡುವುದಲ್ಲ, ಬಿಜೆಪಿ ನಾಯಕರ ಮನೆಯ ಮೇಲೂ ರೈಡ್ ಮಾಡಿದ್ದೇವೆ. ಅವರಿಗೂ ಜೈಲಿಗೆ ಹೋಗುವ ಕಾಲ ಬರುತ್ತೆ' ಎಂದು  ಹೇಳಿದ್ದಾರೆ. 

'ವಿಜಯೇಂದ್ರ ಆಗಾಗ ದುಬೈ ಮತ್ತು ಮಾರಿಷಸ್‌ಗೆ ಏಕೆ ಹೋಗುತ್ತಿರುತ್ತಾರೆ. ಧೈರ್ಯ ಇದ್ದರೆ ಆ ದೇಶಗಳಲ್ಲಿ ಮಾಡಿರುವ ಅಕ್ರಮ ಆಸ್ತಿ ದಾಖಲೆಯನ್ನು ಬಹಿರಂಗಪಡಿಸಲಿ' ಎಂದು ಕಿಡಿಗಾರಿದರು.

'ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂಬುದು ಸುಳ್ಳು ಸುದ್ದಿ. ಜೂನ್ 18ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜ್ಯಕ್ಕೆ ಆಗಮಿಸಲಿದ್ದು, ಆ ವೇಳೆ ಸ್ಪಷ್ಟ ಸಂದೇಶ ನೀಡಲಿದ್ದಾರೆ. ಬಿಜೆಪಿಯಲ್ಲಿ ಪರಿವಾರ ರಾಜಕೀಯ ಇಲ್ಲ. ತಂದೆಯ ಸ್ಥಾನ ನಾನು ನೋಡಿಕೊಳ್ಳುತ್ತೇನೆ ಅನ್ನುವುದು ಬಿಜೆಪಿಯಲ್ಲಿ ನಡೆಯಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

'ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯ ಹೋರಾಟದ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್,  ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ಮೀಸಲಾತಿ ಜಾಗೃತಿ ಮೂಡಿಸಲು ಹಳ್ಳಿ ಹಳ್ಳಿಗೆ ಹೋಗುತ್ತಿದ್ದಾರೆ. ಮೀಸಲಾತಿ ಹೋರಾಟ ತಾರ್ಕಿಕ ಅಂತ್ಯ ಕಾಣುವುದು ಸತ್ಯ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ...  ದೆಹಲಿಯಿಂದ ಬಂದವರು ನಿಮ್ಮನ್ನು ಸಿಎಂ ಮಾಡ್ತೀವಿ 2,500 ಕೋಟಿ ಕೊಡಿ ಅಂತ ಹೇಳಿದ್ದರು: ಶಾಸಕ ಯತ್ನಾಳ್

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News