''ನೀವು ಮುಂದೆ ಎಲ್ಲಿ ನಿಂತು ಗೆಲ್ಲುತ್ತೀರಿ'': ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

Update: 2022-06-18 13:01 GMT

ಬೆಂಗಳೂರು, ಜೂ. 18: ‘ವ್ಯಕ್ತಿ ಗೆಲ್ಲುತ್ತಾನೆ ಎಂದಾಗ ಸೋಲಿಸಲು ತುಂಬಾ ಜನ ಪ್ರಯತ್ನಿಸುವುದು ಸಹಜ, 2013ರಲ್ಲಿ ನೀವು ಮಾಡಿದ್ದು ಅದನ್ನೇ ಅಲ್ಲವೇ ಸಿದ್ದರಾಮಯ್ಯ? ಚಾಮುಂಡೇಶ್ವರಿ ಸೋಲಿನ ಭೀತಿ ಇನ್ನೂ ಮಾಸಿಲ್ಲ, ಅದಕ್ಕಾಗಿ ಹೋದಲ್ಲೆಲ್ಲಾ ಜೈಕಾರ ಹಾಕಿಸಿಕೊಳ್ಳುತ್ತಿದ್ದೀರಿ. ಅಷ್ಟಕ್ಕೂ ನೀವು ಮುಂದೆ ಎಲ್ಲಿ ನಿಂತು ಗೆಲ್ಲುತ್ತೀರಿ?' ಎಂದು ಬಿಜೆಪಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಬಿತ್ತಿದ್ದೇ ಬೆಳೆಯುತ್ತದೆ, ಬೇವು ಬಿತ್ತಿ ಮಾವು ಬಯಸಲು ಸಾಧ್ಯವೇ, ಅವಕಾಶವಾದಿ ಸಿದ್ದರಾಮಯ್ಯ? ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರಿ ಹೊಟ್ಟೆಕಿಚ್ಚು ಬಿತ್ತಿದಿರಿ. ಖರ್ಗೆ, ಪರಮೇಶ್ವರ್, ಡಿ.ಕೆ.ಶಿವಕುಮಾರ್ ಪ್ರತಿಸ್ಪರ್ಧಿಯಾಗುತ್ತಾರೆ ಎಂದು ಮೂಲೆಗುಂಪು ಮಾಡಿದಿರಿ. ಈಗ ಅದರ ಫಲ ಅನುಭವಿಸುತ್ತಿದ್ದೀರಿ. ಈ ಬಾರಿ ನಿಮಗೆ ಸೋಲು ಕಟ್ಟಿಟ್ಟ ಬುತ್ತಿ' ಎಂದು ಭವಿಷ್ಯ ನುಡಿದಿದೆ.

‘ಸಿದ್ದರಾಮಯ್ಯನವರೇ, ನಿಮ್ಮ ಬಗ್ಗೆ ಸ್ವಪಕ್ಷೀಯರಲ್ಲಿರುವುದು ಹೊಟ್ಟೆಕಿಚ್ಚು ಮಾತ್ರವಲ್ಲ, ದ್ವೇಷವೂ ಇದೆ. ಈ ಕಾರಣಕ್ಕಾಗಿಯೇ ನೀವು ಈ ಬಾರಿ ಎಲ್ಲೇ ನಿಂತರೂ ಒಳ ಏಟಿನ ರುಚಿ ತೋರಿಸಲು ಸಿದ್ದರಾಗಿದ್ದಾರೆ. ಕ್ಷೇತ್ರ ಹುಡುಕುವಾಗ ಎಚ್ಚರದಿಂದಿರಿ. ಯೋಚಿಸಿ ವಲಸೆ ನಿರ್ಧರಿಸಿ' ಎಂದು ಬಿಜೆಪಿ ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯರಿಗೆ ವ್ಯಂಗ್ಯ ಸಲಹೆ ನೀಡಿದೆ.

‘ಸಿದ್ದರಾಮಯ್ಯನವರ ಬಗ್ಗೆ ಕಾಂಗ್ರೆಸ್ಸಿಗರಿಗೆ ಹೊಟ್ಟೆಕಿಚ್ಚು, ಏಕೆ ಗೊತ್ತೇ? ಕಾಂಗ್ರೆಸ್ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿದ್ದಕ್ಕಾಗಿ, ಮೂಲ ಕಾಂಗ್ರೆಸ್ಸಿಗರು ನಾಚುವ ರೀತಿಯಲ್ಲಿ ದಿಲ್ಲಿ ಸೇವೆ ಮಾಡಿದ್ದಕ್ಕಾಗಿ, ನಕಲಿ ಗಾಂಧಿ ಕುಟುಂಬದ ಗುಲಾಮರಾಗಿದ್ದಕ್ಕಾಗಿ, ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ಸಿಗೆ ವಲಸೆ ಬಂದು ಕೇವಲ ಹತ್ತು ವರ್ಷದಲ್ಲೇ ಮುಖ್ಯಮಂತ್ರಿಯಾಗಿದ್ದನ್ನು ಮೂಲ ಕಾಂಗ್ರೆಸ್ಸಿಗರು ತಡೆದುಕೊಳ್ಳಲು ಹೇಗೆ ಸಾಧ್ಯ?' ಎಂದು ಬಿಜೆಪಿ ಕೇಳಿದೆ.

‘ಸಿದ್ದರಾಮಯ್ಯ ಅವರೇ ನಿಮ್ಮ ಬಗ್ಗೆ ಹೊಟ್ಟೆಕಿಚ್ಚಿರುವುದು ನಿಜ, ಆದರೆ, ಅದು ನಿಮ್ಮ ಪಕ್ಷದವರಿಗೆ ಮಾತ್ರ! ಯಾವ ಪಕ್ಷದ ಬಗ್ಗೆಯೂ ನಿಷ್ಠೆಯಿಲ್ಲದೇ, ವಲಸೆಯನ್ನೇ ರಾಜಕೀಯ ಧ್ಯೇಯವಾಗಿಸಿಕೊಂಡಿದ್ದಕ್ಕಾಗಿ ನಿಮ್ಮ ಬಗ್ಗೆ ಅಸಹನೆ ಇದೆ' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News