ಆಲೂರು | ಭೀಕರ ರಸ್ತೆ ಅಪಘಾತಕ್ಕೆ ತಂದೆ-ಮಗ ಸಹಿತ ಮೂವರು ಬಲಿ: ಮೂವರು ಗಂಭೀರ
Update: 2022-06-19 08:20 GMT
ಹಾಸನ, ಜೂ.19: ಕ್ಯಾಂಟರ್ ಟ್ರಕ್ ಮತ್ತು ಕಾರೊಂದರ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ತಂದೆ ಮಗ ಸಹಿತ ಮೂವರು ಮೃತಪಟ್ಟ ಘಟನೆ ಆಲೂರು ತಾಲೂಕಿನ ಆಲೂರು ಈಶ್ವರಹಳ್ಳಿ ಕೂಡಿಗೆ ಬಳಿ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ರವಿವಾರ ಮುಂಜಾನೆ 4:30ರ ಸುಮಾರಿಗೆ ಸಂಭವಿಸಿದೆ. ಅಪಘಾತದಲ್ಲಿ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ತಮಿಳುನಾಡು ಮೂಲದ ಆಂಜನಪ್ಪ(40), ಅವರ ಪುತ್ರ ಕಾರ್ತಿಕ್(17) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನೋರ್ವ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪುನೀತ್(15), ಕಾರ್ತಿಕ್(19) ಹಾಗೂ ರಾಮಚಂದ್ರ(40) ಎಂಬವರು ಗಾಯಾಳುಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ಕಾರುಗಳಲ್ಲಿ 10 ಮಂದಿ ಧರ್ಮಸ್ಥಳ ದೇವಾಲಯಕ್ಕೆಂದು ತೆರಳುತ್ತಿದ್ದರು. ಈ ಪೈಕಿ ಒಂದು ಕಾರು ಅಪಘಾತಕ್ಕೀಡಾಗಿದೆ.
ಸ್ಥಳಕ್ಕೆ ಆಲೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.