ಓ ಮೆಣಸೇ...

Update: 2022-06-19 19:30 GMT

ಸಿಎಂ ಆಗಲು ಯೋಗ ಬೇಕು, ಜೊತೆಗೆ ವರಿಷ್ಠರ ಆಶೀರ್ವಾದವೂ ಬೇಕು - ಬಿ.ಸಿ.ಪಾಟೀಲ್, ಸಚಿವ

ಯೋಗ ಕಲಿಸಲು ಸಾಕ್ಷಾತ್ ಪ್ರಧಾನಮಂತ್ರಿಯೇ ಇದ್ದಾರೆ. ಇನ್ನು ವರಿಷ್ಠರ ಆಶೀರ್ವಾದ - ದೊಡ್ಡ ಸೂಟ್ ಕೇಸ್ ಕಳಿಸಿದರೆ ಸಿಗದ ಆಶೀರ್ವಾದ ಎಲ್ಲಿದೆ?

ಶಿವರುದ್ರಪ್ಪ, ಅನಂತಮೂರ್ತಿ ಮತ್ತು ಸಿದ್ದಲಿಂಗಯ್ಯ ಅವರ ಸಮಾಧಿಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಲಾಗುವುದು - ವಿ.ಸೋಮಣ್ಣ, ಸಚಿವ

ಆ ಮೂಲಕ ಸಾಹಿತಿಗಳಿಗೆ, ಸಮಾಧಿಯೇ ನಿಮಗೆ ಸೂಕ್ತ ಸ್ಥಳ ಎಂಬ ಸಂದೇಶ ಕೊಡುತ್ತೀರಾ?

ನಾವು ಯಾವುದೇ ರಾಜಕೀಯ ಪಕ್ವವನ್ನು ‘ಎ’ ಅಥವಾ ‘ಬಿ’ ಎಂದು ಇಟ್ಟುಕೊಂಡಿಲ್ಲ - ಸಿ.ಟಿ.ರವಿ, ಶಾಸಕ

 ಜನತೆ ನಿಮ್ಮ ಪಕ್ಷವನ್ನು ‘ಸಿ’ ಕೆಟಗರಿಯಲ್ಲಿ ಇಟ್ಟುಕೊಂಡಿದೆ.

ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕಾರ್ಕಳ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸನ್ನು ಅಧಿಕಾರಕ್ಕೆ ತರುವೆ - ಎಂ.ವೀರಪ್ಪ ಮೊಯ್ಲಿ, ಮಾಜಿ ಸಿಎಂ

ದೇಶ, ರಾಜ್ಯ ಎಲ್ಲ ಬಿಟ್ಟು ಕಾರ್ಕಳಕ್ಕೆ ಸೀಮಿತರಾಗಿ ಬಿಟ್ಟಿರಾ?

     ನಾಗರಿಕ ಸಮಾಜದಲ್ಲಿ ಸಮಾಜಘಾತುಕ ವ್ಯಕ್ತಿಗಳಿಗೆ ಜಾಗವಿಲ್ಲ- ಯೋಗಿ ಆದಿತ್ಯನಾಥ್, ಉ.ಪ್ರ. ಸಿಎಂ

    ಅವರಿಗೆ ಜಾಗವಿರುವುದು ಸಿ.ಎಂ. ಕಚೇರಿಯಲ್ಲಿ.

    ಹಿಂದೆ ಖಾದಿ ಹಾಕಿಕೊಂಡು ಬಂದರೆ ಕಾಲಿಗೆ ಬೀಳುತ್ತಿದ್ದರು. ಈಗ ಅವರನ್ನು ಕಾಣುವ ದೃಷ್ಟಿಯೇ ಬದಲಾಗಿದೆ- ಎಸ್.ಎಸ್. ಪಾಟೀಲ್, ಮಾಜಿ ಸಚಿವ

    ಈಗ ಖಾದಿ ಕಂಡವರು ಕಾಲಿಗೆ ಬುದ್ಧಿ ಹೇಳುತ್ತಾರೆ.

    ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಸಾಧಿಸಬೇಕಾದರೆ ಹಳ್ಳಿಗಳ ಅಭಿವೃದ್ಧಿ ಅತ್ಯಗತ್ಯ - ಅಮಿತ್ ಶಾ, ಕೇಂದ್ರ ಸಚಿವ

    ಅವುಗಳ ಅಭಿವೃದ್ಧಿ ಬಡ ಹಳ್ಳಿಗರಿಂದ ಸಾಧ್ಯವಿಲ್ಲ. ಆದ್ದರಿಂದ ಅಭಿವೃದ್ಧಿಗಾಗಿ ಅವುಗಳನ್ನು ಕಾರ್ಪೊರೇಟ್‌ಗಳ ವಶಕ್ಕೆ ಒಪ್ಪಿಸಲಾಗುವುದು.

    ಮುಂದಿನ ದಿನಗಳಲ್ಲಿ ಜೆಡಿಎಸ್ ನಂಬರ್ 1, ಬಿಜೆಪಿ ನಂಬರ್ 2, ಕಾಂಗ್ರೆಸ್ ನಂಬರ್ 3ನೇ ಸ್ಥಾನಕ್ಕೆ ಇಳಿಯಲಿದೆ - ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ

    ಕಾಂಗ್ರೆಸ್ಸನ್ನು ನಂಬರ್ 3ನೇ ಸ್ಥಾನಕ್ಕೆ ಇಳಿಸುವುದಕ್ಕೆ ನಂಬರ್ 2 ನವರು ನಂಬರ್ 1 ನವರಿಗೆ ಎಷ್ಟು ಮೊತ್ತ ಪಾವತಿಸುತ್ತಾರೆ? ಡೀಲ್ ವಿವರ ತಿಳಿಸಿ.

    ಪಠ್ಯ ಪುಸ್ತಕವನ್ನು ವಿರೋಧಿಸುವವರು ಪಠ್ಯ ಪುಸ್ತಕವನ್ನು ನೋಡಿಯೇ ಇಲ್ಲ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ

    ನೋಡಿದ್ದರೆ ಅವುಗಳನ್ನು ತಯಾರಿಸಿದವರನ್ನು ಗಲ್ಲಿಗೇರಿಸಬೇಕೆಂದು ಪಟ್ಟು ಹಿಡಿಯುತ್ತಿದ್ದರು.

    ಪ್ರಧಾನಿ ಮೋದಿ ಆಡಳಿತದಿಂದ ದೇಶದಲ್ಲಿ ಭಯೋತ್ಪಾದನೆ ನಿಂತಿದೆ, ಎಲ್ಲಿಯೂ ಬಾಂಬ್ ಸಿಡಿದಿಲ್ಲ, ನಕ್ಸಲ್ ಚಟುವಟಿಕೆ ಸಂಪೂರ್ಣ ನಿಂತಿದೆ - ನಳಿನ್ ಕುಮಾರ್ ಕಟೀಲು, ಸಂಸದ

    ವಿಧ್ವಂಸ ಮತ್ತು ಹಿಂಸಾಚಾರದ ಎಲ್ಲ ಚಟುವಟಿಕೆಗಳ ಮೇಲೆ ಆಡಳಿತಗಾರರೇ ತಮ್ಮ ಏಕಸ್ವಾಮ್ಯ ಸಾಧಿಸಿರುವಾಗ ಇತರ ಹಿಂಸಾವಾದಿಗಳು ನಿವೃತ್ತರಾಗುವುದು ಸಹಜ.

    ಸಮಾಜಕ್ಕಾಗಿ, ದೇಶಕ್ಕಾಗಿ ಬದುಕುವುದು, ತ್ಯಾಗ ಮಾಡುವುದು ನಿಜವಾದ ಶಿಕ್ಷಣ - ಸಿ.ಟಿ.ರವಿ, ಶಾಸಕ

ನೀವು ಪ್ರಾಮಾಣಿಕತೆ, ವಿವೇಕ, ಸಂಸ್ಕಾರ, ಗೌರವ ಇತ್ಯಾದಿಗಳನ್ನು ತ್ಯಾಗ ಮಾಡಿದ್ದನ್ನು ಜನರು ಈಗಾಗಲೇ ಗಮನಿಸಿದ್ದಾರೆ.

ಚೀನಾವನ್ನು ಬೆದರಿಕೆ, ಎದುರಾಳಿ, ಶತ್ರು ಎಂದು ಪರಿಗಣಿಸುವುದು ಐತಿಹಾಸಿಕ ಪ್ರಮಾದವಾಗಲಿದೆ - ಜ.ವೆಯ್ ಫೆಂಗೆ, ಚೀನಾ ರಕ್ಷಣಾ ಸಚಿವ

    ನೆರೆಯವರ ಮನೆಗೆ ನುಗ್ಗಿ ಬಾವುಟ ಊರಿದವರನ್ನು ಅಳಿಯನೆಂದು ಪರಿಗಣಿಸಿ ಸತ್ಕರಿಸಬೇಕೇ?

     ರಾಷ್ಟ್ರೀಯ ಮಿಲಿಟರಿ ಶಾಲೆ ‘ವೈವಿಧ್ಯದಲ್ಲಿ ಏಕತೆ’ಯ ಪ್ರತೀಕವಾಗಿದೆ - ರಾಮನಾಥ ಕೋವಿಂದ್, ರಾಷ್ಟ್ರಪತಿ

ಆದ್ದರಿಂದಲೇ ಆಕ್ರೋಶಿತ ಯುವಜನರು ವ್ಯವಸ್ಥೆಯ ವಿರುದ್ಧ ವೈವಿಧ್ಯಮಯ ಗಾತ್ರದ ಕಲ್ಲುಗಳನ್ನು ಎಸೆಯುತ್ತಿದ್ದಾರೆ.

ರಾಜ್ಯದಲ್ಲಿ ಗಲಭೆಕೋರರ ವಿರುದ್ಧ ಬುಲ್ಡೋಜರ್ ಅಸ್ತ್ರ ಪ್ರಯೋಗಿಸುವ ಅನಿವಾರ್ಯತೆ ಇಲ್ಲ - ಆರಗ ಜ್ಞಾನೇಂದ್ರ, ಸಚಿವ

    ಯಾಕೆ? ಎ.ಕೆ. 47ಗಳು ಸಜ್ಜಾಗಿವೆಯೇ?

    ರಾಜಕಾರಣದಲ್ಲಿ ಸರಕಾರ ವಿಫಲವಾದಾಗ ಪ್ರತಿಪಕ್ಷಗಳು ಈ.ಡಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಾಗುತ್ತದೆ - ಅಖಿಲೇಶ್ ಯಾದವ್, ಎಸ್ಪಿ ನಾಯಕ

    ಪ್ರತಿಪಕ್ಷಗಳು ರಾಜಕೀಯದಲ್ಲೂ ಫೈಲ್ ಆಗಿದ್ದರಿಂದ ತಾನೇ ಪ್ರತಿಪಕ್ಷದಲ್ಲಿರುವುದು?

    ರಾಜ್ಯದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ನಿತ್ಯ ಏರುತ್ತಿದ್ದರೂ ಜನ ಭಯಪಡುವ ಅಗತ್ಯವಿಲ್ಲ - ಡಾ.ಸುಧಾಕರ್, ಸಚಿವ

    ಏಕೆಂದರೆ ಬಡವರ ಸಂಖ್ಯೆ ಕುಗ್ಗಿಸುವುದಕ್ಕೆ ಅದುವೇ ಕ್ಷಿಪ್ರ ಮಾರ್ಗ

    ಅಗ್ನಿಪಥ್ ಯೋಜನೆಯಿಂದ ಯುವ ಜನರಲ್ಲಿ ರಾಷ್ಟ್ರೀಯತೆಯ ಭಾವನೆಗಳು ಬಲಗೊಳ್ಳಲಿವೆ - ಅಶ್ವಿನಿ ಚೌಬೆ, ಕೇಂದ್ರ ಸಚಿವ

    ಆಡಳಿತಗಾರರಲ್ಲಿ ರಾಷ್ಟ್ರೀಯ ಭಾವನೆ ಯಾಕಿಲ್ಲ ಎಂಬ ಕುರಿತು ಆತ್ಮಾವಲೋಕನದ ಬಳಿಕ ಈ ತೀರ್ಮಾನ ಕೈಗೊಳ್ಳಲಾಯಿತೇ?

    ನಮಗೆ ಯಾವ ಪಕ್ಷದ ಜೊತೆಯೂ ಮೈತ್ರಿಯ ಅಗತ್ಯವಿಲ್ಲ, 150 ಸ್ಥಾನಗಳನ್ನು ಪಡೆದು ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ - ಎಂ.ಬಿ.ಪಾಟೀಲ್, ಮಾಜಿ ಸಚಿವ

    ಸಿಕ್ಕಷ್ಟನ್ನು ಉಳಿಸಿಕೊಳ್ಳುವುದಕ್ಕೆ ಸೂಕ್ತ ರೆಸಾರ್ಟ್ ಅನ್ನು ಈಗಲೇ ಬುಕ್ ಮಾಡಿಟ್ಟುಕೊಳ್ಳಿ.

    ಜಗತ್ತಿಗೆ ಶಕ್ತಿಯ ಭಾಷೆ ಮಾತ್ರ ಅರ್ಥವಾಗುವುದು ಎಂದಾದರೆ ಭಾರತ ಅಹಿಂಸೆಯ ಬಗ್ಗೆ ಮಾತನಾಡುವಂತೆಯೇ ದಂಡವನ್ನೂ ಹೊಂದಿರಬಲ್ಲದು - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ

    ಅಕ್ಕಪಕ್ಕದವರು ಅತ್ಯಾಧುನಿಕ ಅಸ್ತ್ರಗಳೊಂದಿಗೆ ಸನ್ನದ್ಧರಾಗಿರುವಾಗ ನೀವಿನ್ನೂ ಹರಕು ಚಡ್ಡಿ ಮುರುಕು ದೊಣ್ಣೆಗಳ ಗುಂಗಿನಲ್ಲೇ ಮೈ ಮರೆತಿರುವಿರಲ್ಲಾ !

    ಕಾಂಗ್ರೆಸ್‌ನಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನೀತಿ ನಮ್ಮ ಕುಟುಂಬಕ್ಕೆ ಅನ್ವಯಿಸುವುದಿಲ್ಲ. ನಾನು ಕೇಳಿದರೆ ನಾಲ್ಕು ಟಿಕೆಟ್ ಬೇಕಾದರೂ ಕೊಡುತ್ತಾರೆ - ಶಾಮನೂರು ಶಿವಶಂಕರಪ್ಪ, ಶಾಸಕ

    ನೀವು ಇರುವುದೆಲ್ಲಿ? ಪಕ್ಷದಲ್ಲೋ, ಥಿಯೇಟರ್‌ನಲ್ಲೋ?

    ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಿದ ಫಲವಾಗಿ ಈಗ ಐ.ಟಿ., ಈ.ಡಿ. ಗಾಳಕ್ಕೆ ಸಿಲುಕಿದೆ - ಶ್ರೀರಾಮುಲು, ಸಚಿವ

ಅವರು ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸದೇ ಇದ್ದಿದ್ದರಿಂದಲೇ, ಕಂಬಿ ಎಣಿಸುತ್ತಿರಬೇಕಾಗಿದ್ದವರು ಇಂದು ಐ.ಟಿ, ಈ.ಡಿ.ಗಳನ್ನು ಗಾಳವಾಗಿ ಬಳಸುತ್ತಿದ್ದಾರೆ.

ಹಿಂದೆ ತುಕ್ಡೆ ಗ್ಯಾಂಗ್ ಮಾಡಿದ ಕೆಲಸವನ್ನೇ ರಾಜ್ಯದಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದೆ - ಬಿ.ಸಿ.ನಾಗೇಶ್, ಸಚಿವ

    ಚಿಂತಿಸಬೇಡಿ. ಅವರೆಷ್ಟೇ ಶ್ರಮಿಸಿದರೂ ಸಮಾಜವನ್ನು ತುಕುಡೆ ತುಕುಡೆ ಮಾಡುವ ವಿಷಯದಲ್ಲಿ ನಿಮ್ಮನ್ನು ಮೀರಲು ಅವರಿಗೆ ಎಂದೆಂದೂ ಸಾಧ್ಯವಿಲ್ಲ.

    ನಾವು ಮತ್ತೆ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ವರದಿಯನ್ನು ಸ್ವೀಕಾರ ಮಾಡುತ್ತೇವೆ- ಸಿದ್ದರಾಮಯ್ಯ, ಮಾಜಿ ಸಿಎಂ

    ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎನ್ನುವ ಕಾರಣಕ್ಕೆ ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ವರದಿ ಸ್ವೀಕಾರ ಮಾಡಿಲ್ಲವೇ?

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...