ಅಗ್ನಿಪಥ್ ಯೋಜನೆ; ಕಾಂಗ್ರೆಸ್ ಬೆಂಕಿಗೆ ತುಪ್ಪ ಹಾಕುವ ಕೆಲಸ ಮಾಡುತ್ತಿದೆ ಎಂದ ಮುಖ್ಯಮಂತ್ರಿ ಬೊಮ್ಮಾಯಿ
ಬೆಂಗಳೂರು, ಜೂ. 19: ‘ರಕ್ಷಣಾ ಇಲಾಖೆಯ ಅಗ್ನಿಪಥ್ ಯೋಜನೆ ವಿರುದ್ಧ ಕಾಂಗ್ರೆಸ್ ಬೆಂಕಿಗೆ ತುಪ್ಪ ಹಾಕುವ ಕೆಲಸವನ್ನು ಇಡೀ ದೇಶದಲ್ಲಿ ಮಾಡುತ್ತಿದೆ. ಇದಕ್ಕೆ ಬೆಳಗಾವಿ ಜಿಲ್ಲೆಯ ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಧರಣಿ ಮಾಡುತ್ತಿರುವುದು ಸಾಕ್ಷಿ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಅಗ್ನಿಪಥ್' ಯೋಜನೆ ಒಂದು ವಿನೂತನ ಕಾರ್ಯಕ್ರಮ. ಇಡೀ ಜಗತ್ತಿನಲ್ಲಿ ಯುವಕರಿಗೆ ಮಿಲಿಟರಿ ತರಬೇತಿ ನೀಡುವ ವ್ಯವಸ್ಥೆ. 17ರಿಂದ 21 ವರ್ಷ ಉತ್ತಮ ತರಬೇತಿ ಪಡೆದರೆ, ಬೇರೆ ಅವಕಾಶಗಳು ಸಿಗುತ್ತವೆ. ಮಿಲಿಟರಿ ಹಾಗೂ ಅರೆಮಿಲಿಟರಿ ಪಡೆಗಳಲ್ಲಿ ಅವಕಾಶ ಸಿಗಲಿದೆ' ಎಂದು ನುಡಿದರು.
‘ಸಶಕ್ತ ಯುವಕರ ಜನಸಂಖ್ಯೆಯನ್ನು ಸಿದ್ದ ಮಾಡುವ ದೃಷ್ಟಿಯಿಂದ ಹಾಗೂ ಸಶಸ್ತ್ರ ಪಡೆಗಳಲ್ಲಿ ಯುವಶಕ್ತಿ ಯನ್ನು ತುಂಬುವ ಮಹತ್ವಾಕಾಂಕ್ಷೆ ಇದೆ. ಪರೀಕ್ಷೆ ಬರೆದವರಿಗೆ ಆತಂಕ ಇದೆ. ಅದನ್ನು ಕೇಂದ್ರ ಸರಕಾರ ಗಮನಿಸಿ ಪರಿಹಾರ ನೀಡುವ ವಿಶ್ವಾಸವಿದೆ. ಆದರೆ, ಈ ನೆಪದಲ್ಲಿ ರೈಲುಗಳಿಗೆ ಬೆಂಕಿ ಹಚ್ಚುವುದು, ಖಂಡಿತವಾಗಿಯೂ ಕ್ಷಮಿಸಲಾಗದ ಅಪರಾಧ. ಪ್ರಯಾಣಿಕರಿಗೆ ತೊಂದರೆ, ಆಸ್ತಿಪಾಸ್ತಿ ನಷ್ಟವಾಗಿದೆ. ಜವಾಬ್ದಾರಿ ಇರುವವರು ಯಾರೂ ಈ ರೀತಿ ಮಾಡುವುದಿಲ್ಲ. ಇದೊಂದು ರಾಜಕೀಯ ಪ್ರೇರಿತ ಕೃತ್ಯ. ಜನ ಸ್ವಲ್ಪ ದಿನಗಳಲ್ಲಿಯೇ ಅರ್ಥ ಮಾಡಿಕೊಳ್ಳುತ್ತಾರೆ' ಎಂದು ಅವರು ತಿಳಿಸಿದರು.
ದೇಶ-ನಾಡು ಕಟ್ಟಿದವರ ಗೌರವ ಕಾಪಾಡಲು ಸಿದ್ದ: ‘ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸ್ವಾಮೀಜಿಗಳು ನೀಡಿರುವ ಮನವಿಯನ್ನು ತರಿಸಿಕೊಂಡು ಏನೆಲ್ಲಾ ಬದಲಾವಣೆ ಮಾಡಬೇಕೋ ಅದನ್ನು ಮುಕ್ತ ಮನಸ್ಸಿನಿಂದ ಕೈಗೊಳ್ಳಲಾಗುವುದು. ಇದನ್ನು ಪ್ರತಿಷ್ಟೆ ಎಂದು ಪರಿಗಣಿಸಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.
‘ಪಠ್ಯ ಪುಸ್ತಕಗಳ ಕುರಿತು ಆಕ್ಷೇಪವಿದ್ದರೆ, ಅದನ್ನು ನಿವಾರಿಸಲು ಸಿದ್ಧರಿದ್ದೇವೆ. ಭಾರತ ಹಾಗೂ ಕರ್ನಾಟಕ ಕಟ್ಟಲು ಶ್ರಮಿಸಿರುವ ಹಿರಿಯರು, ರಾಜಮಹಾರಾಜರು, ಸಾಹಿತಿಗಳು, ಕಲಾಕಾರರು, ಜ್ಞಾನಪೀಠ ಪ್ರಶಸ್ತಿ ಪುರಸ್ಕøತರ ಬಗ್ಗೆ ಅಪಾರ ಗೌರವವಿದೆ. ಯಾವುದೇ ಕಾರಣಕ್ಕಾಗಿ ಅವರಿಗೆ ನೀಡುವ ಗೌರವದಲ್ಲಿ ರಾಜಿ ಮಾಡಿಕೊಳ್ಳಲು ಸರಕಾರ ಸಿದ್ದವಿಲ್ಲ. ಅವರ ಗೌರವ ಉಳಿಸಲು ಹಾಗೂ ಮುಂದಿನ ಜನಾಂಗಕ್ಕೆ ಅವರ ಬಗ್ಗೆ ತಿಳಿಸಲು ಯಾವುದೇ ಮಟ್ಟಕ್ಕೊ ಹೋಗಲು ತಯಾರು' ಎಂದು ಬೊಮ್ಮಾಯಿ ನುಡಿದರು