ಶಿವಮೊಗ್ಗ: ಬಂಧಿಸಲು ತೆರಳಿದ್ದ ಇಬ್ಬರು ಪೊಲೀಸರಿಗೆ ಚೂರಿಯಿಂದ ಇರಿದು ರೌಡಿ ಶೀಟರ್ ಪರಾರಿ

Update: 2022-06-21 07:30 GMT

ಶಿವಮೊಗ್ಗ, ಜೂ.21: ಬಂಧಿಸಲು ತೆರಳಿದ್ದ ಪೊಲೀಸ್ ಕಾನ್ ಸ್ಟೇಬಲ್ ಗಳಿಬ್ಬರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿ ರೌಡಿ ಶೀಟರ್ ಪರಾರಿಯಾದ ಘಟನೆ ಹಳೆ ಶಿವಮೊಗ್ಗ ನಗರದ ಕ್ಲಾರ್ಕ್ ಪೇಟೆಯಲ್ಲಿ ಮಂಗಳವಾರ ನಡೆದಿರುವುದು ವರದಿಯಾಗಿದೆ.

 ಲಷ್ಕರ್ ಮೊಹಲ್ಲಾ ನಿವಾಸಿ  ಶಾಹಿದ್ ಖುರೇಶಿ(22) ಪೊಲೀಸರಿಗೆ ಚಾಕುವಿನಿಂದ ಇರಿದ ಆರೋಪಿ. ದೊಡ್ಡಪೇಟೆ ಠಾಣೆ ಸಿಬ್ಬಂದಿಯಾದ ಗುರು ನಾಯ್ಕ್ ಹಾಗೂ ರಮೇಶ್ ಹಲ್ಲೆಗೊಳಗಾದವರು.

ಶಾಹಿದ್ ಖುರೇಶಿ ರೌಡಿ ಶೀಟರ್ ಅಗಿದ್ದು, ಪ್ರಕರಣವೊಂದಕ್ಕೆ ಸಂಬಂಧಿಸಿ ಆತನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿ ಶಾಹಿದ್ ಚಾಕುವಿನಿಂದ ಪೊಲೀಸ್ ಸಿಬ್ಬಂದಿ ಗುರು ನಾಯ್ಕ್ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ಮತ್ತೋರ್ವ ಸಿಬ್ಬಂದಿ  ಮೇಲೆಯೂ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳು ಪೊಲೀಸ್ ಸಿಬ್ಬಂದಿಯನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ‌ ಚಿಕಿತ್ಸೆಗಾಗಿ ನಗರದ ಸಹ್ಯಾದ್ರಿ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿದೆ.

 ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಆಸ್ಪತ್ರೆಗೆ ಭೇಟಿ ಸಿಬ್ಬಂದಿಯ ಆರೋಗ್ಯ ವಿಚಾರಿಸಿದರು.

ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News