ಗೋವಾ ಪ್ರವಾಸದಲ್ಲಿದ್ದ ನಟ ದಿಗಂತ್‍ಗೆ ಗಂಭೀರ ಗಾಯ: ಏರ್‌ಲಿಫ್ಟ್‌ ಮೂಲಕ ಬೆಂಗಳೂರಿಗೆ

Update: 2022-06-21 17:12 GMT
Photo: Twitter/Keypadguerilla

ಬೆಂಗಳೂರು, ಜೂ.21: ಕನ್ನಡ ಚಿತ್ರನಟ ದಿಗಂತ್‍ಗೆ ಗಂಭೀರ ಗಾಯವಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ.

ಗೋವಾದಲ್ಲಿ ಕುಟುಂಬದ ಜೊತೆ ಗೋವಾಗೆ ಪ್ರವಾಸ ಹೋಗಿದ್ದಾಗ ಸೋಮವಾರ ಇಲ್ಲಿನ ಸಮುದ್ರ ತೀರದಲ್ಲಿ ಬ್ಯಾಕ್ ಫ್ಲಿಪ್ ಮಾಡುವ ವೇಳೆ ಆಯತಪ್ಪಿ ಬಿದ್ದು ಬೆನ್ನು ಮೂಳೆಗೆ ಪೆಟ್ಟಾಗಿದೆ. ಆನಂತರ, ಮಂಗಳವಾರ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಹೆಲಿಕಾಪ್ಟರ್ ಮೂಲಕ ಕರೆತರಲಾಯಿತು.

ಈ ಕುರಿತು ಪ್ರತಿಕ್ರಿಯಿಸಿದ ದಿಗಂತ್ ತಂದೆ ಕೃಷ್ಣಮೂರ್ತಿ, ವೈದ್ಯರು ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದಿದ್ದಾರೆ. ಆದರೆ, ಘಟನೆ ಕುರಿತು ನನಗೆ ಹೆಚ್ಚಿನ ಮಾಹಿತಿ ಇಲ್ಲ. ಓಡಾಡುವಾಗ ಬೀಳೋದು ಸಹಜ, ಇದೀಗ ಚೆನ್ನಾಗಿ ಮಾತನಾಡುತ್ತಿದ್ದಾನೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಈಗಲೇ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಇದರಿಂದ ಯಾರು ಸಹ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ನುಡಿದರು. 

ನಟಿ ಐಂದ್ರಿತಾ ರೈ ಅವರ ತಂದೆ ಎ.ಕೆ.ರೈ ಮಾತನಾಡಿ, ಸದ್ಯ ಒಂದು ಶಸ್ತ್ರಚಿಕಿತ್ಸೆ ಆಗಬೇಕಿದೆ. ಉಳಿದಂತೆ ಅವರ ಆರೋಗ್ಯ ಸ್ಥಿರವಾಗಿದೆ. ಆದರೆ, ಸಣ್ಣ ಪ್ರಮಾಣದಲ್ಲಿ ಕುತ್ತಿಗೆ ಮತ್ತು ಬೆನ್ನು ಹುರಿಗೆ ಪೆಟ್ಟಾಗಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News