ನವೆಂಬರ್ ಒಳಗೆ ರಾಜ್ಯದಲ್ಲಿನ ಗ್ರಾಮಗಳ ಚರಿತ್ರೆ ಕೋಶ ಪ್ರಕಟ: ಉಮಾ ಮಹದೇವನ್

Update: 2022-06-23 14:11 GMT

ಬೆಂಗಳೂರು, ಜೂ. 23: ‘ರಾಜ್ಯದ ಎಲ್ಲ ಜಿಲ್ಲೆಗಳ ಗ್ರಾಮಗಳ ಚರಿತ್ರೆ ಕೋಶವನ್ನು ಇದೇ ನವೆಂಬರ್ ತಿಂಗಳೊಳಗಾಗಿ ಪ್ರಕಟಿಸಲಾಗುವುದು' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್  ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ‘ಕರ್ನಾಟಕ ಗ್ರಾಮ ಚರಿತ್ರೆ ಕೋಶ ಯೋಜನೆ' ಕಾರ್ಯಾಗಾರದ ಉದ್ಘಾಟಿಸಿ ಮಾತನಾಡಿದ ಅವರು, ‘ಈ ಯೋಜನೆಯಡಿ ಎಲ್ಲಾ ಜಿಲ್ಲೆಗಳ ಎಲ್ಲ ಗ್ರಾಮಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕøತಿಕ, ಐತಿಹಾಸಿಕ ಹಾಗೂ ಇನ್ನಿತರ ವಿಷಯಗಳನ್ನು ಸಂಗ್ರಹಿಸಿ ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.

ಈಗಾಗಲೇ 17 ಜಿಲ್ಲೆಗಳ ಚರಿತ್ರೆ ಕೋಶ ಪ್ರಕಟಣೆಗೊಂಡಿದ್ದು, ಇನ್ನೂ 13 ಜಿಲ್ಲೆಗಳದ್ದು ಬಾಕಿಯಿದೆ. ಎಲ್ಲಾ ಕೋಶಗಳನ್ನು ಡಿಜಿಟಲ್ ಮೂಲಕ ಲಭ್ಯವಿರುವಂತೆ ಕ್ರಮ ವಹಿಸಲಾಗುವುದು. ಈ ಮಾಹಿತಿ ಕೋಶ ಪ್ರಮುಖ ಸರಕಾರ ಗ್ರಂಥಾಲಯಗಳಲ್ಲೂ ಲಭ್ಯವಿರುತ್ತದೆ. ಗ್ರಾಮಗಳ ಅಸ್ತಿತ್ವವನ್ನು ಭದ್ರವಾಗಿಸಿ ಸಾಂಸ್ಕøತಿಕವಾಗಿ ಇವುಗಳ ವಿಶೇಷತೆಗಳನ್ನು ಈ ಗ್ರಂಥಗಳಲ್ಲಿ ದಾಖಲಿಸಲಾಗುವುದು ಎಂದು ತಿಳಿಸಿದರು.

ಪಂಚಾಯತ್‍ರಾಜ್ ಸಲಹೆಗಾರ ಎಂ.ಕೆ.ಕೆಂಪೇಗೌಡ ಮಾತನಾಡಿ, ‘ಗ್ರಾಮ ಪಂಚಾಯಿತಿಗಳನ್ನೊಳಗೊಂಡ ವಿಚಾರ, ಇತಿಹಾಸ, ಕರೆ ಅಭಿವೃದ್ಧಿ, ಆಹಾರ ಪದ್ಧತಿ, ಜನಪದ ಕಲೆಗಳು, ಇತ್ಯಾದಿ ವಿಷಯಗಳನ್ನು ಈ ಗ್ರಾಮ ಚರಿತ್ರೆ ಕೋಶದಲ್ಲಿ ದಾಖಲಿಸಲಾಗುವುದು. ರಾಜ್ಯದ ಗ್ರಾಮೀಣ ಭಾಗದ 5,400 ಗ್ರಂಥಾಲಯಗಳು ಅಭಿವೃದ್ಧಿಗೊಂಡಿವೆ. ಮುಂದಿನ 5 ವರ್ಷಗಳಲ್ಲಿ ಎಲ್ಲ ಗ್ರಾಮಸ್ಥರಿಗೂ ಆರೋಗ್ಯ ಕಾರ್ಡ್ ನೀಡಲು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಜಾನಪದ ವಿಶ್ವವಿದ್ಯಾಲಯದ ಕುಲಪತಿ ಸಿ.ಟಿ.ಗುರುಪ್ರಸಾದ್ ಮಾತನಾಡಿ, ‘ವಿವಿಯು ರಾಜ್ಯದಲ್ಲಿ ಸ್ಥಾಪನೆಗೊಂಡು 10 ವರ್ಷಗಳಾಗಿವೆ. ಇಲ್ಲಿ 150 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 800 ಜನ ಕುಳಿತುಕೊಳ್ಳುವ ಕಲಾಭವನ ನಿರ್ಮಾಣಗೊಳ್ಳುತ್ತಿದೆ. ವಿಶ್ವವಿದ್ಯಾಲಯ ಹಲವು ಪತ್ರಿಕೆಗಳನ್ನು ಪ್ರಕಟಿಸುತ್ತಿದೆ. ಗ್ರಾಮ ಚರಿತ್ರೆ ಕೋಶ ಯೋಜನೆಯಡಿ 5,900 ಹಳ್ಳಿಗಳ ಇತಿಹಾಸ ಇತರ ವಿವರಗಳು ದಾಖಲೆಗೊಳ್ಳುತ್ತದೆ. ಇದು ಒಳ್ಳೆಯ ಮಾಹಿತಿ ಗ್ರಂಥಾಲಯವಾಗಲಿದೆ. ವಿ.ವಿ186 ಎಕರೆಯಲ್ಲಿ ವಸ್ತು ಸಂಗ್ರಹಾಲಯ ತೆರೆಯುವ ಉದ್ದೇಶವಿದೆ ಎಂದರು.

‘ರಾಜ್ಯ ವಿಕೇಂದ್ರೀಕರಣ ವಿಭಾಗದ ಉಪಾಧ್ಯಕ್ಷ ಪ್ರಮೋದ್ ಹೆಗಡೆ ಮಾತನಾಡಿ, ‘ಹಳ್ಳಿಗಳ ಜೀವನವೆ ಸಾರ್ಥಕ ಜೀವನ. ಇವರು ಹೆಚ್ಚು ಸಂವೇದನಾಶೀಲರೂ, ಹೃದಯವಂತರೂ ಆಗಿರುತ್ತಾರೆ. ಕರ್ನಾಟಕ ಗ್ರಾಮ ಚರಿತ್ರೆ ಕೋಶ ಪ್ರಕಟಿಸುವುದರಿಂದ ಹಳ್ಳಿಗಳ ಶಕ್ತಿ ತುಂಬುವ ಕೆಲಸವಾಗುತ್ತದೆ. ನರೇಗಾದಲ್ಲಿ ದೇಶಕ್ಕೆ ರಾಜ್ಯ ಪ್ರಥಮ ಸ್ಥಾನ ಬಂದಿರುವುದು ಪ್ರಶಂಸಾರ್ಹ. ರಾಜ್ಯದಲ್ಲಿ 6 ಸಾವಿರ ಗ್ರಂಥಾಲಯಗಳು ಕಾರ್ಯನಿರ್ವಹಿಸಿ ಡಿಜಟಲೀಕರಣಗೊಳ್ಳುತ್ತಿದೆ ಎಂದರು. ಪಂಚಾಯತ್‍ರಾಜ್ ಇಲಾಖೆ ಆಯುಕ್ತೆ ಶಿಲ್ಪಾ ಶರ್ಮಾ, ನಿರ್ದೇಶಕ ಕೆ.ಟಿ.ಆಂಜಿನಪ್ಪ, ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್‍ಕುಮಾರ್ ಹೊಸಮನಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News