ಜಾಗ ಕಬಳಿಕೆ ಬಗ್ಗೆ ವರದಿ ಸಲ್ಲಿಸದ ವಿಚಾರ; ತಹಶೀಲ್ದಾರ್ ವಿರುದ್ಧ ಕೋರ್ಟ್‍ನಿಂದ ವಾರೆಂಟ್ ಜಾರಿ

Update: 2022-06-23 17:42 GMT

ಬೆಂಗಳೂರು, ಜೂ.23: ದೇವಸ್ಥಾನದ ಜಾಗ ಕಬಳಿಕೆ ಸಂಬಂಧ ವರದಿ ಸಲ್ಲಿಸದ ಹಿನ್ನೆಲೆಯಲ್ಲಿ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಅಜಿತ್ ಕುಮಾರ್ ರೈಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಮತ್ತೊಮ್ಮೆ 25 ಸಾವಿರ ದಂಡ ವಿಧಿಸಿ ಜಾಮೀನು ಸಹಿತ ಬಂಧನ ವಾರೆಂಟ್ ಹೊರಡಿಸಿದೆ. 

2011ರಲ್ಲಿ ಬಾಳಪ್ಪ ಹಂದಿಗುಂದ ತಹಶೀಲ್ದಾರ್ ಆಗಿದ್ದ ವೇಳೆ ದೇವಸ್ಥಾನಕ್ಕೆ ಸೇರಿದ ಸರಕಾರಿ ಭೂಮಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿರುವ ಕುರಿತು ಬೆಳತ್ತೂರು ಪರಮೇಶ್ ಎಂಬುವರು ಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಸಂಬಂಧ ತಹಶೀಲ್ದಾರ್ ಅಜಿತ್ ಕುಮಾರ್ ರೈಗೆ ಸೂಕ್ತ ದಾಖಲೆಗಳನ್ನು ಕಲೆ ಹಾಕಿ ಅವುಗಳೊಂದಿಗೆ ಹಾಜರಾಗುವಂತೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ಆದರೆ ತಹಶೀಲ್ದಾರ್ ಹಾಜರಾಗದ ಹಿನ್ನೆಲೆಯಲ್ಲಿ ಜು.19ರಂದು 25 ಸಾವಿರ ದಂಡದ ಜೊತೆಗೆ ಜಾಮೀನು ಸಹಿತ ಬಂಧನ ವಾರೆಂಟ್‍ನ್ನು ನೀಡಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಆದೇಶ ಹೊರಡಿಸಿದೆ. 

ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ 2021ರಲ್ಲಿ ನ್ಯಾಯಾಲಯ ತಹಶೀಲ್ದಾರ್‍ಗೆ ದಂಡ ವಿಧಿಸಿ ಬಂಧನ ವಾರೆಂಟ್ ಜಾರಿ ಮಾಡಿತ್ತು. ಬೆಳತ್ತೂರು ಗ್ರಾಮದ ಸರ್ವೇ ನಂ.57ರ ಚೌಡೇಶ್ವರಿ ದೇವಾಲಯಕ್ಕೆ ಸೇರಿದ 2 ಎಕರೆ 26 ಗುಂಟೆ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಒತ್ತುವರಿ ಮಾಡಿ, ಅಕ್ರಮ ಕಟ್ಟಡಗಳನ್ನು ನಿರ್ಮಿಸಿ ಮಾರಾಟ ಮಾಡಲಾಗಿದೆ ಎಂದು ಆರ್‍ಟಿಐ ಕಾರ್ಯಕರ್ತ ಬೆಳತ್ತೂರು ಪರಮೇಶ್ ಆರೊಪಿಸಿ ಕೋರ್ಟ್ ಮೆಟ್ಟಿಲೇರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News