ಎನ್ಇಪಿ ವಿರುದ್ಧದ ಶಕ್ತಿಗಳೇ ಪಠ್ಯ ಪರಿಷ್ಕರಣೆ ಗಲಾಟೆ ಮಾಡಿಸುತ್ತಿವೆ: ಸಚಿವ ಅಶ್ವತ್ಥನಾರಾಯಣ

Update: 2022-06-23 18:10 GMT

ಹಾಸನ: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಾಗ ಯಾವ ಶಕ್ತಿಗಳು ವಿನಾ ಕಾರಣ ಹುಯಿಲೆಬ್ಬಿಸಿದವೋ ಅಂತಹ ವಿಚ್ಛಿದ್ರಕಾರಿ ಶಕ್ತಿಗಳೇ ಈಗಲೂ ಪಠ್ಯ ಪುಸ್ತಕ ಪರಿಷ್ಕರಣೆಯ ವಿಚಾರದಲ್ಲಿ ಅನಗತ್ಯವಾಗಿ ಗಲಾಟೆ ಮಾಡುತ್ತಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

`ಮಂಥನ’ ಬಳಗವು ಗುರುವಾರ ಇಲ್ಲಿ ಏರ್ಪಡಿಸಿದ್ದ `ಪಠ್ಯ ಪುಸ್ತಕ ಪರಿಷ್ಕರಣೆ- ಒಂದು ವಿಶ್ಲೇಷಣೆ’ ಸಂವಾದದಲ್ಲಿ ಮಾತನಾಡಿದ ಅವರು, `ಪಠ್ಯವನ್ನು ಮರುಪರಿಷ್ಕರಣೆ ಮಾಡಿದ ಕೂಡಲೇ ಅದನ್ನು ಸಾರ್ವಜನಿಕವಾಗಿ ಮುಕ್ತಗೊಳಿಸಲಾಗಿತ್ತು. ಈಗ ಕೂಗೆಬ್ಬಿಸುತ್ತಿರುವವರು ಆಗ ಏನು ಮಾಡುತ್ತಿದ್ದರು?’ ಎಂದು ಪ್ರಶ್ನಿಸಿದರು.

`ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ ನಮ್ಮತನವನ್ನು ಕಲಿಸುವಂತಹ ಶಿಕ್ಷಣ ಕ್ರಮವನ್ನು ರೂಪಿಸಬೇಕಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷದ ದೆಸೆಯಿಂದಾಗಿ ನಮ್ಮ ಮೇಲೆ ಸಾವಿರಾರು ವರ್ಷ ದೌರ್ಜನ್ಯ ಎಸಗಿದ ಮೊಘಲರು ಮತ್ತು ಬ್ರಿಟಿಷರ ಬಗ್ಗೆಯೇ ಗುಣಗಾನವಿರುವಂತಹ ಪಠ್ಯಕ್ರಮಗಳನ್ನು ಓದಬೇಕಾಗಿ ಬಂದಿದ್ದು ದುರಂತ’ ಎಂದು ಅವರು ಪ್ರತಿಪಾದಿಸಿದರು.

`ಎನ್ಇಪಿ ಘೋಷಿಸಿದಾಗ ಕೆಲವು ವಿಧ್ವಂಸಕ ಮನೋಭಾವದ ಗುಂಪುಗಳು, ಇದು ದಲಿತರಿಗೆ ವಿರುದ್ಧವಾಗಿದೆ, ಅಲ್ಪಸಂಖ್ಯಾತರಿಗೆ ವಿರುದ್ಧವಾಗಿದೆ ಎಂದೆಲ್ಲ ಪುಕಾರು ಹಬ್ಬಿಸಿದರು. ಈಗ ಅಂಥವೇ ಶಕ್ತಿಗಳು ಜಾತಿ, ಸಮುದಾಯ, ಭಾಷೆ ಇತ್ಯಾದಿಗಳ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸ ಮಾಡುತ್ತಿವೆ. ಎಲ್ಲಕ್ಕಿಂತ ದೇಶ ಮೊದಲು ಎನ್ನುವ ಸತ್ಯವನ್ನು ಇವರೆಲ್ಲ ಅರಿಯಬೇಕು’ ಎಂದು ಅವರು ಒತ್ತಿ ಹೇಳಿದರು.

`ರಾಜ್ಯದ ಮತದಾರರು ಬಿಜೆಪಿಗೆ ಜನಾದೇಶ ಕೊಟ್ಟಿದ್ದಾರೆ. ನಮ್ಮತನವನ್ನು ಕಲಿಸುವಂತಹ ಪಠ್ಯಕ್ರಮವನ್ನು ರೂಪಿಸುವುದು ಕೂಡ ಈ ಜನಾದೇಶಕ್ಕೆ ಬೆಲೆ ಕೊಟ್ಟೇ ಮಾಡಿರುವ ಕೆಲಸವಾಗಿದೆ. ಭಾರತದ ವಿರುದ್ಧ ಕ್ರೌರ್ಯವನ್ನೆಸಗಿದವರ ಬಗ್ಗೆ ವೀರಾವೇಶದ ಬರಹಗಳನ್ನು ಓದುವುದು ಇನ್ನಾದರೂ ನಿಲ್ಲಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

`ಯಾವುದೇ ಒಂದು ದೇಶದ ಆರ್ಥಿಕ ಪ್ರಗತಿಗಿಂತ ಅಲ್ಲಿನ ಶಿಕ್ಷಣ ಕ್ರಮ ಹೇಗಿದೆ ಎನ್ನುವುದು ಮುಖ್ಯ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ನಮಗಿರುವ ಅಸ್ಮಿತೆ ನಿರ್ಣಾಯಕವಾಗಿರುತ್ತದೆ. ಆದ್ದರಿಂದ, ಭಾರತದ ನೈಜ ಇತಿಹಾಸವನ್ನು ಮಕ್ಕಳಿಗೆ ಕಲಿಸುವ ಕೆಲಸಕ್ಕೆ ಬಿಜೆಪಿ ಬದ್ಧವಾಗಿದೆ ಎಂದು ಸಚಿವರು ನುಡಿದರು.

ಪಠ್ಯ ಮರು ಪರಿಷ್ಕರಣೆಯಲ್ಲಿ ಅಂಬೇಡ್ಕರ್ ಅವರಿಗಾಗಿ, ಇತರ ಮಹಾನ್ ವ್ಯಕ್ತಿಗಳಿಗಾಗಲಿ ಯಾವುದೇ ಅಪಮಾನವಾಗಿಲ್ಲ. ಮರು ಪರಿಷ್ಕರಣೆ ಸಮಿತಿ ತನ್ನ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿ, ಅದನ್ನು ಸರಕಾರಕ್ಕೆ ಕೊಟ್ಟಿದ್ದರಿಂದಷ್ಟೆ ಆ ಸಮಿತಿಯನ್ನು ವಿಸರ್ಜಿಸಲಾಗಿದೆ ಅಷ್ಟೆ ಎಂದು ಅವರು ವಿವರಣೆ ನೀಡಿದರು.

ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮದನ್ ಗೌಡ, ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News