ಮಹಾರಾಷ್ಟ್ರದ ಎಂವಿಎ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ: ಯೆಚೂರಿ ಖಂಡನೆ

Update: 2022-06-24 14:32 GMT

ಹೊಸದಿಲ್ಲಿ, ಜೂ.24: ಮಹಾರಾಷ್ಟ್ರದ ‘ಮಹಾ ವಿಕಾಸ್ ಅಘಾಡಿ(ಎಂವಿಎ)’ ಸರಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರಕಾರಿ ಏಜೆನ್ಸಿಗಳು ಮತ್ತು ಬಿಜೆಪಿ ರಾಜ್ಯ ಸರಕಾರಿ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಖಂಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಸಿಪಿಎಂ ಪೊಲಿಟ್ ಬ್ಯೂರೊ, ಶಿವಸೇನಾ ಪಕ್ಷಕ್ಕೆ ಸೇರಿದ ಶಾಸಕರನ್ನು ಮೊದಲಿಗೆ ಸೂರತ್, ನಂತರ ಗುವಹಾಟಿಗೆ ಹಾರಿಸಿಕೊಂಡು ಹೋಗಿರುವ ರೀತಿ ಅತ್ಯಂತ ಖಂಡನೀಯ. ಇವೆರಡೂ ಬಿಜೆಪಿ ಆಳ್ವಿಕೆಯ ರಾಜ್ಯಗಳು. ಇದನ್ನು ಬಿಜೆಪಿ ಎರಡೂ ರಾಜ್ಯಗಳಲ್ಲಿ ಪ್ರಭುತ್ವ ಆಡಳಿತ ಯಂತ್ರವನ್ನು ಉಪಯೋಗಿಸಿಕೊಂಡು ಮಾಡಲಾಗಿದೆ. ಮಂತ್ರಿಗಳು ಮತ್ತು ಶಾಸಕರ ಮೇಲೆ ಗುರಿಯಿಡಲು ಕೇಂದ್ರೀಯ ಏಜೆನ್ಸಿಗಳನ್ನು ಬಳಸಿಕೊಳ್ಳಲಾಗಿದೆ. ಈ ಸರಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಇದನ್ನು ಮಾಡಲಾಗುತ್ತಿದೆ ಎಂದು ಹೇಳಿದೆ.

ಪ್ರಭುತ್ವ ಅಧಿಕಾರದ ಈ ನಾಚಿಕೆಗೆಟ್ಟ ಬಳಕೆಯು ವಿಪಕ್ಷಗಳ ಆಳ್ವಿಕೆಯ ರಾಜ್ಯ ಸರಕಾರಗಳನ್ನು ಬೀಳಿಸುವುದಕ್ಕಾಗಿ ನಡೆಸಿದ ಈ ಹಿಂದಿನ ಪ್ರಯತ್ನಗಳಿಗೆ ಅನುಗುಣವಾಗಿದೆ ಎಂದಿರುವ ಸಿಪಿಎಂ ಪೊಲಿಟ್ ಬ್ಯುರೊ, ಈ ರೀತಿಯ ದುರುಪಯೋಗದ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದರ ವಿರುದ್ಧ ಪ್ರತಿಭಟಿಸುವಂತೆ ಎಲ್ಲ ಪ್ರಜಾಪ್ರಭುತ್ವವಾದಿ ವಿಭಾಗಗಳಿಗೆ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News