ನನ್ನ ಸರಕಾರ ತೆಗೆದಂತೆ ಮಹಾರಾಷ್ಟ್ರ ಸರಕಾರ ತೆಗೆಯಲು ಹೊರಟಿದ್ದಾರೆ: ಕುಮಾರಸ್ವಾಮಿ

Update: 2022-06-24 15:01 GMT

ಬೆಂಗಳೂರು, ಜೂ. 24: ‘ಕಾಂಗ್ರೆಸ್ ಬಗ್ಗೆ ಆಗಲಿ ಅಥವಾ ರಾಹುಲ್ ಗಾಂಧಿ ಅವರ ಬಗ್ಗೆ ಆಗಲಿ ನನಗೆ ಸಾಫ್ಟ್ ಕಾರ್ನರ್ ಇಲ್ಲ. ನಾನು ಇದ್ದ ವಿಷಯವನ್ನೇ ಹೇಳಿದ್ದೇನೆ. ಕಾಂಗ್ರೆಸ್ ನಾಯಕರ ರೀತಿ ನಾನು ಬೀದಿಯಲ್ಲಿ ಬ್ಯಾರಿಕೇಡ್ ಹತ್ತಿ ಡಾನ್ಸ್ ಮಾಡುವುದಕ್ಕೆ ಹೋಗಬೇಕೇ?' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಚನ್ನಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಇರುವ ವಾಸ್ತವಾಂಶ ಹೇಳಿದ್ದೇನೆ. ಯಾವುದೇ ರೀತಿ ಯಾರ ಜತೆ ರಾಜಿಯಾಗಲಿ ಅಥವಾ ಅನುಕಂಪದ ಪ್ರಶ್ನೆ ಇಲ್ಲ. ಈ ವ್ಯವಸ್ಥೆಯನ್ನು ಬಿಜೆಪಿ ಸರಕಾರ ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸ್ವಾಯುತ್ತ ಸಂಸ್ಥೆಗಳು ಯಾವ ರೀತಿ ಕೆಲಸ ಮಾಡ್ತಿವೆ ಎಂಬುದನ್ನು ಚರ್ಚೆ ಮಾಡಿದ್ದೇನೆ. ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ನಾಯಕರನ್ನು ಒಲೈಸಿಕೊಳ್ಳಲು ಹೇಳಿಲ್ಲ' ಎಂದು ಸ್ಪಷ್ಟಪಡಿಸಿದರು.

‘ನಾನು ಈ ಹೇಳಿಕೆ ಕೊಟ್ಟಾಗ ಒಬ್ಬ ಬಿಜೆಪಿ ಸಂಸದರೆ ನನಗೆ ಫೋನ್ ಮಾಡಿ ಶಹಬ್ಬಾಸ್ ಗಿರಿ ಹೇಳಿದರು. ಈ ವ್ಯವಸ್ಥೆ ಬಗ್ಗೆ ಸರಿಯಾಗಿ ಮಾತನಾಡಿದ್ದೀರಿ ಎಂದು ಹೇಳಿದರು. ನಮ್ಮ ಕುತ್ತಿಗೆ ಕುಯ್ದಿದ್ದೆ ಕಾಂಗ್ರೆಸ್‍ನವರು. ನಾನು ಯಾಕೆ ಅವರ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸಲಿ. ಕಾಂಗ್ರೆಸ್ ಹಾಗೂ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಆಗುವ ಪ್ರಶ್ನೆಯೆ ಇಲ್ಲ ಎಂದು ಕುಮಾರಸ್ವಾಮಿ ಗುಡುಗಿದರು.

‘ರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡವಳಿಕೆ ನೋಡಿದ್ದೇನೆ. ಇದನ್ನೇ ಮುಂದಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಜನರಿಗೆ ಮನದಟ್ಟು ಮಾಡುವ ಕೆಲಸ ಮಾಡುತ್ತೇವೆ. ಎರಡು ರಾಷ್ಟ್ರೀಯ ಪಕ್ಷಗಳ ಕುತಂತ್ರದ ಬಗ್ಗೆ ಅರಿವು ಮೂಡಿಸುತ್ತೇವೆ. ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿ ಎಂದು ಜನರ ಮುಂದೆ ಹೋಗುತ್ತೇವೆ' ಎಂದು ಅವರು ಹೇಳಿದರು.

ಇದು ಬಿಜೆಪಿಯದ್ದೇ ಆಟ: ‘ಮಹಾರಾಷ್ಟ್ರದಲ್ಲಿ ಸರಕಾರ ತೆಗೆಯಲು ಬಿಜೆಪಿ ಹೊರಟಿದೆ. ನಮಗೆ ಏನು ಗೊತ್ತಿಲ್ಲ ಎಂಬಂತೆ ಬಿಜೆಪಿಯವರು ಇದ್ದಾರೆ. ಆದರೆ, ಇಡೀ ದೇಶಕ್ಕೆ ಇದು ಬಿಜೆಪಿಯ ಆಟವೆಂದು ಗೊತ್ತು. ಬಿಜೆಪಿ ಸರಕಾರವಿರುವ ರಾಜ್ಯಗಳಿಗೆ ಶಾಸಕರನ್ನು ಕರೆದೊಯ್ದಿದ್ದಾರೆ. ಶಾಸಕರನ್ನ ಹೈಜಾಕ್ ಮಾಡಿಕೊಂಡು ಅಲ್ಲಿಟ್ಟುಕೊಂಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ, ನಮ್ಮ ಶಾಸಕರನ್ನು ಮುಂಬೈಗೆ ಕರೆದೊಯ್ದಿದ್ದರು. ಇದು ನನ್ನ ಸರಕಾರ ತೆಗೆದಂತೆ ಅಲ್ಲಿನ ಸರಕಾರ ತೆಗೆಯುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

‘ಶಾಸಕರು ಒಂದು ಪಕ್ಷ ಬಿಟ್ಟು ಇನ್ನೊಂದು ಪಕ್ಷಕ್ಕೆ ಹೋಗಬೇಕಾದರೆ ಯಾವ ಆಮಿಷಗಳು ಇರುತ್ತವೆ. ಈ ವಿಷಯ ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ಕಾರಣಗಳು ಬೇರೆ ಬೇರೆ ಕೊಡುತ್ತಾರೆ. ಚುನಾಯಿತ ಸರಕಾರ ಅಸ್ಥಿರಗೊಳಿಸುವಂತದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಯಾರ ಸರಕಾರ ಇರಬಾರದೆಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ. ಕೇಂದ್ರ ಸರಕಾರ ಒಳಗೊಂಡಂತೆ ಎಲ್ಲ ರಾಜ್ಯದಲ್ಲಿ ಬಿಜೆಪಿ ಸರಕಾರಗಳೇ ಇರಬೇಕು. ಅವರ ಈ ರೀತಿಯ ಕುತಂತ್ರದ ಬೆಳವಣಿಗೆಗಳು ಏನಿದೆ. ಮುಂದಿನ ದಿನಗಳಲ್ಲಿ ಅವರಿಗೆ ಇದೇ ತಿರುಗುಬಾಣ ಆಗಲಿದೆ' ಎಂದು ಎಚ್‍ಡಿಕೆ ಅಭಿಪ್ರಾಯಪಟ್ಟರು.

‘ಶಿವಸೇನೆಯ ನಾಯಕ ಏನೇ ಹೇಳಲಿ, ಏಕನಾಥ್ ಶಿಂಧೆ ಶಿವಸೇನೆ ನಮ್ಮದೆಂದು ಕ್ಲೈಮ್ ಮಾಡಬಹುದು. ಸಂಖ್ಯಾಬಲದ ಆಧಾರದ ಮೇಲೆ ಅವರು ಕ್ಲೈಮ್ ಮಾಡಬಹುದು. ಚುನಾವಣೆಗೆ ಹೋದಾಗ ಬೇರೆಯದ್ದೇ ನಡೆಯುತ್ತದೆ. ಶಿವಸೇನೆಯ ಸಂಸ್ಥಾಪಕರು ಯಾರು? ಯಾರು ಪಕ್ಷಕ್ಕೆ ದುಡಿದಿದ್ದಾರೆ? ಯಾರು ಪಕ್ಷವನ್ನು ಕಟ್ಟಿದ್ದಾರೆ. ಕಾರ್ಯಕರ್ತರು ಯಾರ ಜೊತೆಗೆ ನಿಲ್ಲುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಇವೆಲ್ಲದರ ಮೇಲೆ ಮುಂದಿನ ಬೆಳವಣಿಗೆ ತೀರ್ಮಾನವಾಗುತ್ತದೆ' ಎಂದು ಕುಮಾರಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News