ಜು.25ಕ್ಕೆ ವಸತಿ ಇಲಾಖೆಯ 1967 ಮನೆಗಳ ಹಂಚಿಕೆ: ಸಚಿವ ವಿ.ಸೋಮಣ್ಣ

Update: 2022-06-24 17:40 GMT

ಬೆಂಗಳೂರು, ಜೂ.24: ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಲಾಗುತ್ತಿರುವ 1967 ಮನೆಗಳನ್ನು ಜು.25ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಿದ್ದಾರೆ ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. 

ಶುಕ್ರವಾರ ನಗರದ ದಾಸರಹಳ್ಳಿ, ಯಲಹಂಕ, ಬ್ಯಾಟರಾಯನಪುರ, ಮಹದೇವಪುರ ಮತ್ತು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಮಿಸಲಾಗುತ್ತಿರುವ ಬಹುಮಹಡಿ ಕಟ್ಟಡಗಳ ಕಾಮಗಾರಿ  ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಸೂರಿಲ್ಲದವರಿಗೆ ಸೂರು’ ಎಂಬ ಧ್ಯೇಯದಡಿ 2016-17 ಮತ್ತು 2017-18ರಲ್ಲಿ ‘ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ಗೆ ಕೇಂದ್ರ ಸರಕಾರವು ಪ್ರತಿ ಮನೆಯ ನಿರ್ಮಾಣಕ್ಕೆ 1.50 ಲಕ್ಷ ರೂ.ಗಳನ್ನು ನೀಡಲಿದ್ದು, ಅದರಂತೆ 1 ಲಕ್ಷ ಮನೆಗಳ ನಿರ್ಮಾಣಕ್ಕೆ 1500 ಕೋಟಿ ರೂ.ಅನುದಾನ ನಿಗದಿಯಾಗಿದೆ. ಈ ಪೈಕಿ ಮೊದಲನೇ ಕಂತಿನ 600 ಕೋಟಿ ರೂ.ಅನುದಾನ ಬಿಡುಗಡೆಯಾಗಿ, ಕಂದಾಯ ಇಲಾಖೆಯಿಂದ 553 ಎಕರೆ ಜಮೀನನ್ನು ನಿಗಮಕ್ಕೆ ಹಸ್ತಾಂತರಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ವಸತಿ ಇಲಾಖೆ ನಿರ್ಮಿಸುತ್ತಿರುವ ಮನೆಗಳನ್ನು ಕೂಲಿ ಕಾರ್ಮಿಕರು, ಆಟೋ ಚಾಲಕರು, ಗಾಮೆರ್ಂಟ್ಸ್ ನೌಕರರು, ಬೀಡಿ ಕಟ್ಟುವವರು, ಬೀದಿ ಬದಿ ವ್ಯಾಪಾರಿಗಳು ಸೇರಿ ಅರ್ಹ ಬಡವರಿಗೆ ನೀಡಲಾಗುತ್ತಿದೆ. ಸಾಮಾನ್ಯ ವರ್ಗದ ಜನರು 5.50 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು 5 ಲಕ್ಷ ರೂ.ಪಾವತಿಸಬೇಕಾಗಿದ್ದು, ಮಧ್ಯಮ ವರ್ಗದವರು ಯಾವ ರೀತಿಯಲ್ಲಿ ಜೀವನ ನಡೆಸುತ್ತಾರೋ ಅದೇ ರೀತಿಯಲ್ಲಿ ಬಡವರು ಬದುಕಬೇಕು ಎಂಬುದು ನನ್ನ ಆಶಯವಾಗಿದೆ ಎಂದು ಸೋಮಣ್ಣ ತಿಳಿಸಿದರು.

ಒಂದು ತಿಂಗಳೊಳಗೆ ಫಲಾನುಭವಿಗಳಿಗೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಿಸಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡಲಾಗುವುದು. 1 ಲಕ್ಷ ರೂ.ನೀಡಿರುವ ಫಲಾನುಭವಿಗಳಿಗೆ ಮನೆಗಳನ್ನು ನೀಡಿ ತಕ್ಷಣವೇ ಬ್ಯಾಂಕ್ ಲೋನ್ ಮಾಡಿಸಿಕೊಡಲಾಗುವುದು, ಯಾವುದೇ ಕಾರಣಕ್ಕೂ ಗುತ್ತಿಗೆದಾರರಿಗೆ ಹಾಗೂ ಫಲಾನುಭವಿಗಳಿಗೆ ತೊಂದರೆಯಾಗದಂತೆ ಮುಖ್ಯಮಂತ್ರಿ ಹಣವನ್ನು ಒದಗಿಸಿದ್ದಾರೆ  ಎಂದು ಅವರು ಹೇಳಿದರು.

7-8 ಸಾವಿರ ಮನೆಗಳನ್ನು ಅಕ್ಟೋಬರ್ ಅವಧಿಗೆ ಹಾಗೂ ಮಾರ್ಚ್ ಒಳಗಡೆ ಸುಮಾರು 25 ಸಾವಿರ (1 ಬಿಎಚ್‍ಕೆ) ಮನೆಗಳನ್ನು ಲೋಕಾರ್ಪಣೆ ಮಾಡಲಾಗುವುದು. ನವೆಂಬರ್ ತಿಂಗಳೊಳಗೆ 46 ಸಾವಿರ ಮನೆಗಳಿಗೆ ಹೆಚ್ಚುವರಿ 7 ಸಾವಿರ ಮನೆಗಳನ್ನು ಸೇರಿಸಿ 53 ಸಾವಿರ ಮನೆಗಳ ನಿರ್ಮಾಣ ಮಾಡುವುದರ ಜೊತೆಗೆ ಶೇ.60ರಷ್ಟು ಮನೆಗಳನ್ನು ವಾಸಕ್ಕೆ ಯೋಗ್ಯವಾಗಿ ಮಾಡಿ ಫಲಾನುಭವಿಗಳಿಗೆ ನೀಡುವಂತ ಕೆಲಸ ಮಾಡಲಾಗುವುದು ಎಂದು ಸೋಮಣ್ಣ ತಿಳಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಗೃಹ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್.ಬಸವರಾಜು, ವಸತಿ ಇಲಾಖೆಯ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News