ಹ್ಯಾಕರ್ ಶ್ರೀಕಿ ಸೋದರನಿಗೆ ದೇಶ ಬಿಟ್ಟು ತೆರಳದಂತೆ ನಿರ್ಬಂಧ: ತನಿಖೆಗೆ ಸಹಕರಿಸುವಂತೆ ಹೈಕೋರ್ಟ್ ಸೂಚನೆ
ಬೆಂಗಳೂರು, ಜೂ.27: ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (28) ಸಹೋದರನಿಗೆ ದೇಶ ಬಿಟ್ಟು ಹೋಗದಂತೆ ಜಾರಿ ನಿರ್ದೇಶನಾಲಯದ(ಈಡಿ) ಸೂಚನೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಜತೆಗೆ ತನಿಖೆಗೆ ಸಹಕರಿಸುವಂತೆ ನಿರ್ದೇಶನ ನೀಡಿದೆ.
ಈ.ಡಿ ಜಾರಿ ಮಾಡಿರುವ ಲುಕ್ಔಟ್ ನೋಟಿಸ್ ರದ್ದುಪಡಿಸಬೇಕು ಹಾಗೂ ತಮಗೆ ದೇಶ ಬಿಟ್ಟು ತೆರಳಲು ಅವಕಾಶ ನೀಡದ ಜಾರಿ ನಿರ್ದೇಶನಾಲಯದ ಕ್ರಮ ಪ್ರಶ್ನಿಸಿ ಶ್ರೀಕಿ ಸಹೋದರ ಸುದರ್ಶನ ರಮೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ.ಡಿ ಸೂಚನೆ ಎತ್ತಿ ಹಿಡಿದಿದೆ ಹಾಗೂ ತನಿಖೆಗೆ ಸಹಕರಿಸುವಂತೆ ನಿರ್ದೇಶನ ನೀಡಿದೆ.
ನೆದರ್ಲೆಂಡ್ಸ್ನಲ್ಲಿ ಎಂಜಿನಿಯರ್ ಆಗಿರುವ ಸುದರ್ಶನ ರಮೇಶ್(31) 2021ರ ಜನವರಿಯಲ್ಲಿ ದೇಶದಿಂದ ಹೊರಗೆ ಹೋಗಲು ಯತ್ನಿಸಿದ್ದರು. ಆದರೆ, ಈ.ಡಿ ಅವರು ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದರಿಂದ ಇಮಿಗ್ರೇಶನ್ ಅಧಿಕಾರಿಗಳು ಸುದರ್ಶನ್ ಅವರಿಗೆ ದೇಶದಿಂದ ಹೊರಗೆ ಹೋಗಲು ಅನುಮತಿ ನಿರಾಕರಿಸಿದ್ದರು.
ಅಲ್ಲದೆ, ಹ್ಯಾಕಿಂಗ್ ಮೂಲಕ ಗಳಿಸಿದ ಹಣವನ್ನು ಶ್ರೀಕಿಯು ಸುದರ್ಶನ್ಗೆ ರವಾನಿಸಿದ್ದಾರೆ ಎಂದು ಈ.ಡಿ ಹೇಳಿತ್ತು. ಹನಿಶ್ ಪಟೇಲ್ ಅವರ ಮೂಲಕ ಶ್ರೀಕಿಯು 50 ಸಾವಿರ ಬ್ರಿಟಿಷ್ ಪೌಂಡ್ನಷ್ಟು ಹಣ ಪಡೆದುಕೊಂಡಿದ್ದ. ಈ ಬಗ್ಗೆ ಈ.ಡಿಗೆ ಉತ್ತರವನ್ನು ನೀಡಿರಲಿಲ್ಲ.