ನಕಲಿ ಬಿತ್ತನೆ ಬೀಜ, ಗೊಬ್ಬರ ಜಾಲದ ಬುಡವನ್ನೇ ಕತ್ತರಿಸಿ: ಸಚಿವ ಬಿ.ಸಿ.ಪಾಟೀಲ್ ಸೂಚನೆ

Update: 2022-06-28 15:23 GMT
(ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿರುವುದು)

ಬೆಂಗಳೂರು, ಜೂ.28: ರೈತರಿಗೆ ಯಾವುದೇ ಕಾರಣಕ್ಕೂ ನಕಲಿ ಬಿತ್ತನೆ ಬೀಜ, ನಕಲಿ ಗೊಬ್ಬರ ಪೂರೈಕೆಯಾಗಲೇಬಾರದು. ಇಲಿ ಹಿಡಿಯುವುದಕ್ಕಿಂತ ಹುಲಿಯನ್ನು ಹಿಡಿಯಬೇಕು. ನಕಲಿ ಜಾಲದ ಬುಡವನ್ನೇ ಕತ್ತರಿಸಿ ಹಾಕಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚನೆ ನೀಡಿದ್ದಾರೆ.

ಮಂಗಳವಾರ ವಿಕಾಸಸೌಧದ ಕಚೇರಿಯಲ್ಲಿ ಕೃಷಿ ವಿಚಕ್ಷಣಾ ದಳ(ಜಾಗೃತ ಕೋಶ)ವನ್ನು ಇನ್ನಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿ ಅವರು ಮಾತನಾಡಿದರು.

ಬಿತ್ತನೆ ಚುರುಕುಗೊಳ್ಳುತ್ತಿದ್ದು, ಕಾಳಸಂತೆ ಮಾರಾಟಗಾರರು ರೈತರಿಗೆ ಮೋಸ ಮಾಡಲೆಂದೇ ನಕಲಿ ಬೀಜ, ನಕಲಿ ಗೊಬ್ಬರ ಮಾರಾಟ ಮಾಡಲು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಇಂತವರ ಮೇಲೆ ಕೃಷಿ ವಿಚಕ್ಷಣಾ ದಳ ಹದ್ದಿನ ಕಣ್ಣು ಸದಾ ಜಾಗೃತಗೊಳಿಸಿರಬೇಕು ಎಂದು ಅವರು ಹೇಳಿದರು.

ಜಾಗೃತ ಕೋಶ ಸದಾ ಎಚ್ಚರಿಕೆಯಿಂದಿರಬೇಕು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎನ್ನುವಂತಾಗದೇ ನಕಲಿ ಜಾಲದ ಮೂಲವನ್ನೇ ನಾಶಪಡಿಸಬೇಕು. ಬರೀ ಚಾರ್ಜ್ ಶೀಟ್ ಹಾಕಿ ಸುಮ್ಮನಾದರೆ ಸಾಲದು. ನಕಲಿಕೋರರಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಬಿ.ಸಿ.ಪಾಟೀಲ್ ಸೂಚಿಸಿದರು.

ಯಾವುದೇ ಕಂಪೆನಿ ಇರಲಿ ಅದು ಎಷ್ಟೇ ಹೆಸರು ಮಾಡಿರಲಿ, ಆ ಕಂಪೆನಿ ರೈತರಿಗೆ ಮಾರುವ ಉತ್ಪನ್ನ, ಬೀಜ, ಗೊಬ್ಬರ ಅಧಿಕೃತವಾಗಿರಲೇಬೇಕು. ಎಲ್ಲ್ಲ ಉತ್ಪನ್ನಗಳ ಮಾರಾಟಕ್ಕೆ ಪರವಾನಿಗೆ ಹೊಂದಿರಲೇಬೇಕು. ಯಾವುದೋ ಒಂದಕ್ಕೆ ಪರವಾನಿಗೆ ಪಡೆದು ಅದರ ಹೆಸರಿನಲ್ಲಿ ಮತ್ತೊಂದು ಉತ್ಪನ್ನ ಮಾರಾಟ ಮಾಡಿದರಾಯಿತು ಎನ್ನುವುದನ್ನು ತಪ್ಪಿಸಬೇಕು. ಇಂತಹ ಕಂಪೆನಿಗಳು ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೇ ನೋಟಿಸ್ ನೀಡಿ, ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಅವರು ಹೇಳಿದರು.

ನಿಗದಿತ ಸೂಚಿತ ಪ್ರದೇಶಗಳಲ್ಲಿ ಸೂಚಿಸಿದ ಕಂಪೆನಿ ಮಾರಾಟಗಾರರು ಮಾತ್ರ ಕೃಷಿ ಉತ್ಪನ್ನ, ಬೀಜ, ಗೊಬ್ಬರ ಪರವಾನಿಗೆಯುತವಾಗಿ ಮಾರಾಟ ಮಾಡಬೇಕು. ರೈತರಿಗೆ ಇಂತವರಿಂದ ಮೋಸವಾದ ಮೇಲೆ ಎಚ್ಚೆತ್ತುಕೊಂಡು ಪರಿಹಾರ ನೀಡುವುದಕ್ಕಿಂತ `ಪ್ರಿವೆನ್ಷನ್ ಈಸ್ ಬೆಟರ್ ದೆನ್ ಕ್ಯೂರ್’ ಎಂಬ ಮಾತಿನಂತೆ ರೈತರಿಗೆ ಅನ್ಯಾಯವಾಗುವ ಮೊದಲೇ ಕೃಷಿ ವಿಚಕ್ಷಣಾ ದಳ ಸನ್ನದ್ಧವಾಗಿರಬೇಕು ಎಂದು ಅವರು ಹೇಳಿದರು.

ಕೃಷಿ ವಿಚಕ್ಷಣಾ ದಳವನ್ನು ಇನ್ನಷ್ಟು ಬಲಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಿಚಕ್ಷಣಾ ದಳದ ಕಚೇರಿಯನ್ನು ವಿಸ್ತರಿಸಲಾಗಿದ್ದು, ಹೊಸದಾಗಿ ಮೈಸೂರು ಹಾಗೂ ಕಲಬುರಗಿಯಲ್ಲಿ ಕೃಷಿ ವಿಚಕ್ಷಣಾ ದಳದ ನೂತನ ಕಚೇರಿಯನ್ನು ಆರಂಭಿಸಲಾಗುವುದು. ಮುಂದಿನ ಜು.5ರಂದು ಮೈಸೂರಿನಲ್ಲಿ ಕೃಷಿ ವಿಚಕ್ಷಣಾ ದಳದ ನೂತನ ಕಚೇರಿ ಉದ್ಘಾಟನೆಗೊಳ್ಳಲಿದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

ಸಭೆಯಲ್ಲಿ ಕೃಷಿ ಇಲಾಖೆ ಆಯುಕ್ತ ಶರತ್ ಪಿ, ವಿಚಕ್ಷಣಾ ದಳದ ಅನೂಪ್ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News