ರಾಜಸ್ಥಾನದ ಸರಕಾರ ವಜಾಕ್ಕೆ ನಳಿನ್ ಕುಮಾರ್ ಕಟೀಲ್ ಆಗ್ರಹ

Update: 2022-06-29 18:46 GMT

ಬೆಂಗಳೂರು, ಜೂ.29: ರಾಜಸ್ಥಾನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಅಲ್ಲದೆ, ಎಲ್ಲ ರಂಗಗಳಲ್ಲಿ ವಿಫಲವಾಗಿರುವ ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ವಜಾಗೊಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

ರಾಜಸ್ಥಾನದಲ್ಲಿ ಮೂಲಭೂತವಾದಿ ಜಿಹಾದಿ ಮಾನಸಿಕತೆಯ ವ್ಯಕ್ತಿಗಳಿಂದ ಕನ್ಹಯ್ಯಾ ಲಾಲ್ ಅವರ ಹತ್ಯೆ ನಡೆದಿದೆ. ಇದು ಖಂಡನೀಯ. ತಮಗೆ ಜೀವ ಬೆದರಿಕೆ ಇರುವ ಕುರಿತು ಕನ್ಹಯ್ಯಾಲಾಲ್ ಫೋಲೀಸರಿಗೆ ತಿಳಿಸಿದ್ದರು. ಆದರೂ ಅವರಿಗೆ ಫೋಲೀಸರು ರಕ್ಷಣೆ ನೀಡಿಲ್ಲ. ಈ ಹತ್ಯೆಗೆ ಫೋಲೀಸ್ ವೈಫಲ್ಯ ಮತ್ತು ಅಲ್ಲಿನ ರಾಜ್ಯದ ಕಾಂಗ್ರೆಸ್ ಸರಕಾರದ ವಿಫಲತೆಯೇ ಕಾರಣವಾಗಿದೆ ಎಂದು ಅವರು ದೂರಿದ್ದಾರೆ.

ಕಾಂಗ್ರೆಸ್ ಸರಕಾರವು ಕರ್ನಾಟಕದಲ್ಲೂ ಹಿಂದೆ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯನ್ನೇ ತನ್ನದಾಗಿಸಿಕೊಂಡಿತ್ತು. 24ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರ ಕೊಲೆಗೆ ಪರೋಕ್ಷವಾಗಿ ಕಾಂಗ್ರೆಸ್ ಕಾರಣವಾಗಿತ್ತು. ಮತಬ್ಯಾಂಕ್ ರಾಜಕೀಯವನ್ನೇ ಬೆಂಬಲಿಸುವ ಸಿದ್ದರಾಮಯ್ಯ ಈ ಕೊಲೆಗಳಿಗೆ ಬೆಂಬಲವಾಗಿ ನಿಂತು ದೇಶವಿರೋಧಿ ಸಂಘಟನೆಗಳ ಮುಖಂಡರ ಮೇಲಿನ ಪ್ರಕರಣಗಳನ್ನು ರದ್ದುಪಡಿಸಿದ್ದರು ಎಂದು ಅವರು ವಿವರಿಸಿದ್ದಾರೆ.

ರಾಜಸ್ಥಾನದ ಕಾಂಗ್ರೆಸ್ ಸರಕಾರವು ತುಷ್ಟೀಕರಣ ನೀತಿಯನ್ನು ಬೆಂಬಲಿಸುವ ಕಾಂಗ್ರೆಸ್ಸಿಗರ ಡಿಎನ್‍ಎಯನ್ನು ತನ್ನದಾಗಿಸಿಕೊಂಡಿದೆ. ದೇಶದಲ್ಲಿ ಹೆಚ್ಚುತ್ತಿರುವ ಜಿಹಾದಿ ಮಾನಸಿಕತೆಯೇ ಇಂಥ ಘಟನೆಗಳಿಗೆ ಕಾರಣ. ಇದನ್ನು ಕೂಡಲೇ ನಿಯಂತ್ರಣಕ್ಕೆ ತರುವಂತೆ ನಳಿನ್ ಕುಮಾರ್ ಕಟೀಲ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News