×
Ad

ಜಿಎಸ್‍ಟಿ ಪರಿಹಾರ ಐದು ವರ್ಷ ಮುಂದುವರಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ

Update: 2022-06-30 19:06 IST

ಹೊಸದಿಲ್ಲಿ, ಜೂ.30: ರಾಜ್ಯಗಳು ಆರ್ಥಿಕವಾಗಿ ಕಷ್ಟದಲ್ಲಿವೆ. ಜಿಎಸ್‍ಟಿ ಬರುವ ಮೊದಲು ರಾಜ್ಯದ ತೆರಿಗೆ ಬೆಳವಣಿಗೆ ದರ ಶೇ.14ರಷ್ಟು ಇತ್ತು, ಈಗ ಪರಿಹಾರ ಕೊಡುವುದನ್ನು ನಿಲ್ಲಿಸಿದರೆ ನಮ್ಮ ರಾಜ್ಯವೊಂದಕ್ಕೆ ವರ್ಷಕ್ಕೆ 20 ಸಾವಿರ ಕೋಟಿ ರೂ.ನಷ್ಟವಾಗುತ್ತದೆ. ನನ್ನ ಪ್ರಕಾರ ಜಿಎಸ್‍ಟಿ ಪರಿಹಾರ 5 ವರ್ಷ ಮುಂದುವರಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಗುರುವಾರ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಂಡೀಘಡದಲ್ಲಿ ಜೂ.28, 29ರಂದು ನಡೆದ ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ಸರಕಾರದ ಪ್ರತಿನಿಧಿಗಳು ಜಿಎಸ್‍ಟಿ ಮುಂದುವರಿಸುವಂತೆ ಒತ್ತಾಯ ಮಾಡಿಲ್ಲ. ಇಂದಿನ ದಿನಾಂಕಕ್ಕೆ ಜಿಎಸ್‍ಟಿ ಪರಿಹಾರ ನೀಡುತ್ತಿದ್ದದ್ದು ಕೊನೆಯಾಗುತ್ತಿದೆ ಎಂದರು. 

ಜಿಎಸ್‍ಟಿ ಜಾರಿಯಾದ ಮೇಲೆ ರಾಜ್ಯಗಳಿಗೆ ನಷ್ಟವಾಗುತ್ತದೆ ಎಂದು ಆ ನಷ್ಟ ಭರಿಸಿ ಕೊಡಲು ಶೇ.14ರಷ್ಟು ಪರಿಹಾರ ನೀಡಬೇಕು ಎಂದು ತೀರ್ಮಾನವಾಗಿತ್ತು. ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರು ಕೇಂದ್ರ ಸರಕಾರದ ತೀರ್ಮಾನ ತಲೆಬಾಗಿ ಒಪ್ಪಿಕೊಳ್ಳುತ್ತಾರೆ. ರಾಜ್ಯಗಳಿಗೆ ಅನ್ಯಾಯವಾದರೂ ಅದನ್ನು ಕೇಂದ್ರದ ಮುಂದೆ ಹೇಳುವ ಶಕ್ತಿ ಅವರಿಗೆ ಇಲ್ಲ ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ಬಿಜೆಪಿಯೇತರ ರಾಜ್ಯಗಳು ಇದನ್ನು ಮುಂದುವರೆಸಬೇಕು ಎಂದು ಹೆಚ್ಚು ಒತ್ತಾಯ ಮಾಡಿವೆ. ಜಿಎಸ್‍ಟಿ ಪರಿಹಾರ ನೀಡಲು ಸೆಸ್ ಹಾಕುತ್ತಿದ್ದಾರೆ. ಇದನ್ನು ಕೊಡೋದು ರಾಜ್ಯಗಳೇ. ಐಷಾರಾಮಿ ವಸ್ತುಗಳು ಮತ್ತು ಹಾನಿಕಾರಕ ವಸ್ತುಗಳ ಮೇಲೆ ಸೆಸ್ ಹಾಕಿ ಕೇಂದ್ರ ಸರಕಾರವೇ ಹಣ ಸಂಗ್ರಹಿಸಿಕೊಳ್ಳುತ್ತದೆ. ಈ ಹಣದಲ್ಲಿ ಇಷ್ಟು ದಿನ ಪರಿಹಾರ ನೀಡುತ್ತಿದ್ದರು ಎಂದು ಅವರು ಹೇಳಿದರು.

2026ರ ವರೆಗೆ ಸೆಸ್ ಸಂಗ್ರಹ ಮಾಡಿದರೂ ತೊಂದರೆಯಲ್ಲಿರುವ ರಾಜ್ಯಗಳಿಗೆ ಪರಿಹಾರ ನೀಡುತ್ತಿಲ್ಲ. ರಾಜ್ಯಗಳಿಗೆ ತೆರಿಗೆ ಸಂಗ್ರಹ ಕಡಿಮೆ ಆಗಿರುವುದರಿಂದ ಈ ನಷ್ಟ ತುಂಬಿಕೊಡಬೇಕಾದವರು ಕೇಂದ್ರ ಸರಕಾರ ಅಲ್ಲವೇ? ಬಸವರಾಜ ಬೊಮ್ಮಾಯಿ ಜಿಎಸ್‍ಟಿ ಸಭೆಗೆ ಹೋಗಿದ್ದರೂ ಬೇಡಿಕೆಯನ್ನು ಇಟ್ಟಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 

ಹೊಲ ಗದ್ದೆಗಳಲ್ಲಿ ಬಳಸುವ ಸಬ್ ಮೆರಿನ್ ಪಂಪ್‍ಗಳ ಮೇಲೆ ಇದ್ದ ತೆರಿಗೆಯನ್ನು ಶೇ.12 ರಿಂದ 15ಕ್ಕೆ, ಹಣ್ಣು, ತರಕಾರಿ ಮತ್ತು ಮೊಟ್ಟೆಗಳನ್ನು ಪ್ರತ್ಯೇಕಗೊಳಿಸುವ, ಗ್ರೇಡಿಂಗ್ ಹಾಗೂ ಹಾಲು ಕರೆಯುವ ಯಂತ್ರಗಳ ಮೇಲೆ ಇದ್ದ ತೆರಿಗೆಯನ್ನು ಶೇ.12ರಿಂದ 18ಕ್ಕೆ ಏರಿಕೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಗಾರಿದರು. 

ಪೆಟ್ರೋಲ್, ಡೀಸೆಲ್, ಗ್ಯಾಸ್, ಸಿಮೆಂಟ್, ಕಬ್ಬಿಣ, ಅಡುಗೆ ಎಣ್ಣೆ ದುಬಾರಿಯಾಗಿರುವಾಗ ತೆರಿಗೆ ಏರಿಕೆ ಮಾಡಿದ್ದಾರೆ. ಸೋಲಾರ್ ಸಿಸ್ಟಂಗಳು ಮತ್ತು ಸೋಲಾರ್ ವಾಟರ್ ಹೀಟರ್ ಗಳ ಮೇಲೆ ಶೇ.5ರಿಂದ 12ಕ್ಕೆ, ಧಾನ್ಯಗಳನ್ನು ಸ್ವಚ್ಛ ಮಾಡುವ, ಹಿಟ್ಟು ಮಾಡುವ ಯಂತ್ರಗಳ ಮೇಲೆ ಇದ್ದ ತೆರಿಗೆಯನ್ನು ಶೇ.12ರಿಂದ 18ಕ್ಕೆ, ಇಟ್ಟಿಗೆ ಮಾಡುವ ಜಾಗ್ ವರ್ಕ್‍ಗಳ ಮೇಲಿನ ತೆರಿಗೆಯನ್ನು ಶೇ.5ರಿಂದ 12ಕ್ಕೆ ಹೆಚ್ಚಿಸಿದ್ದಾರೆ ಎಂದು ಅವರು ವಿವರಿಸಿದರು.

ಎಲ್‍ಇಡಿ ಬಲ್ಬ್ ಮತ್ತು ಸಂಬಂಧಿತ ವಸ್ತುಗಳ ಮೇಲೆ ಶೇ.12ರಿಂದ 18ಕ್ಕೆ, ಬರೆಯುವ ಮತ್ತು ಮುದ್ರಿಸುವ ಇಂಕ್‍ಗಳ ಮೇಲಿನ ತೆರಿಗೆಯನ್ನು ಶೇ.12ರಿಂದ 18ಕ್ಕೆ ಹೆಚ್ಚಿಸಲಾಗಿದೆ. ಮ್ಯಾಪ್‍ಗಳು ಹಾಗೂ ಶಿಕ್ಷಣದ ಉದ್ದೇಶಕ್ಕೆ ಬಳಸುವ ಚಾರ್ಟ್‍ಗಳು, ಗ್ಲೋಬ್ ಮಾದರಿಗಳಿಗೆ ಈವರೆಗೆ ತೆರಿಗೆ ವಿನಾಯಿತಿ ಇತ್ತು, ಅದನ್ನು ಶೇ.12ರಷ್ಟು ಮಾಡಿದ್ದಾರೆ. ಬ್ಯಾಂಕುಗಳ ಚೆಕ್ ಬುಕ್ ಮೇಲೆ ಶೇ.18ರಷ್ಟು ತೆರಿಗೆ ಹಾಕಿದ್ದಾರೆ ಸಿದ್ದರಾಮಯ್ಯ ತಿಳಿಸಿದರು. 

ಜಿಎಸ್‍ಟಿ ಮಾಡಿರುವುದೇ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುವ ಕೆಲಸ. ತೆರಿಗೆ ಹಾಕುವುದು ರಾಜ್ಯ ಸರಕಾರದ ಕೆಲಸ, ಈಗ ಜಿಎಸ್‍ಟಿ ಮಾಡಿ ಯದ್ವಾತದ್ವಾ ತೆರಿಗೆ ಏರಿಸಿದರೆ ಹೇಗೆ? ಜಿಎಸ್‍ಟಿ ಕೌನ್ಸಿಲ್‍ನಲ್ಲಿ ನಿರ್ಣಯಗಳು ಬಹುಮತದ ಮೇಲೆ ತೀರ್ಮಾನವಾಗುತ್ತೆ, ಹೆಚ್ಚಿನ ಕಡೆ ಬಿಜೆಪಿ ಸರಕಾರಗಳೆ ಇವೆ, ಜಿಎಸ್‍ಟಿ ಕಮಿಟಿ ಅಧ್ಯಕ್ಷರು ಕೇಂದ್ರದ ಹಣಕಾಸು ಸಚಿವರೇ ಇರುವುದರಿಂದ ತಮಗೆ ಬೇಕಾದಂತೆ ನಿರ್ಣಯ ಮಾಡುತ್ತಾರೆ ಎಂದು ಅವರು ಟೀಕಿಸಿದರು. 

ಬೆಲೆಯೇರಿಕೆ ಹೆಚ್ಚಿರುವ ಸಂದರ್ಭದಲ್ಲಿ ತೆರಿಗೆಗಳನ್ನು ಕಡಿಮೆ ಮಾಡುವ ಬದಲು ಪರೋಕ್ಷ ತೆರಿಗೆಯನ್ನು ಹೆಚ್ಚು ಮಾಡಿದ್ದಾರೆ, ರಾಜ್ಯಗಳಿಗೆ ಜಿಎಸ್‍ಟಿ ಪರಿಹಾರವನ್ನು ಮುಂದುವರೆಸಿಲ್ಲ. ಕಾರ್ಪೊರೇಟ್ ಕಂಪೆನಿಗಳ ಮೇಲಿನ ತೆರಿಗೆಯನ್ನು ಶೇ.30 ರಿಂದ 22ಕ್ಕೆ ಇಳಿಕೆ ಮಾಡಿದ್ದಾರೆ. ಬಡವರು, ಸಾಮಾನ್ಯ ಜನರ ಮೇಲಿನ ತೆರಿಗೆಯನ್ನು ಹೆಚ್ಚು ಮಾಡಿದ್ದಾರೆ. ಇದು ಮೋದಿ ಅವರ ಸರಕಾರ ಮಾಡಿರುವ ಘೋರ ಅಪರಾಧ ಎಂದು ಸಿದ್ದರಾಮಯ್ಯ ಕಿಡಿಗಾರಿದರು. 

ಈಗ ಹೆಚ್ಚು ಮಾಡಿರುವ ತೆರಿಗೆಯನ್ನು ಕಡಿಮೆ ಮಾಡಬೇಕು ಮತ್ತು ರಾಜ್ಯಗಳಿಗೆ ಜಿಎಸ್‍ಟಿ ಪರಿಹಾರವನ್ನು ಮುಂದುವರಿಸಬೇಕು. ಕೊರೋನ ಬಂದಾಗ ಕಾರ್ಪೊರೇಟ್ ಬಾಡಿಗಳ ಆದಾಯ 33 ಲಕ್ಷ ಕೋಟಿ ಹೆಚ್ಚಾಗಿದೆ. ಇವರ ಮೇಲೆ ತೆರಿಗೆ ಹೆಚ್ಚು ಹಾಕೋದು ಬಿಟ್ಟು ಬಡವರ ಜೀವನ ಯಾಕೆ ಹಾಳು ಮಾಡುತ್ತೀರಾ? ಈಗಾಗಲೇ ವಸ್ತುಗಳ ಬೆಲೆ ಹೆಚ್ಚಾಗಿ ಜನರಿಗೆ ಬದುಕೋದು ಕಷ್ಟವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News