ಸುಲಲಿತ ವ್ಯವಹಾರಗಳ ಶ್ರೇಯಾಂಕ: ಕರ್ನಾಟಕಕ್ಕೆ ಅಗ್ರಸ್ಥಾನ

Update: 2022-06-30 15:29 GMT

ಬೆಂಗಳೂರು, ಜೂ.30: ಸುಲಲಿತ ವ್ಯವಹಾರ(ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್)ಕ್ಕೆ ಸಂಬಂಧಿಸಿದಂತೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದುಕೊಂಡಿದೆ. 

2020ರ ಸೆಪ್ಟಂಬರ್‍ನಲ್ಲಿ ಬಿಡುಗಡೆಯಾಗಿದ್ದ ಕಳೆದ ಸಾಲಿನ ಶ್ರೇಯಾಂಕ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ, ‘ಟಾಪ್ ಅಚೀವರ್’ ಆಗಿ ಹೊರಹೊಮ್ಮಿರುವುದು ವಿಶೇಷ. 2020ರ ವಹಿವಾಟು ಸುಧಾರಣೆ ಕ್ರಿಯಾ ಯೋಜನೆಯಲ್ಲಿ (ಎಸ್‍ಬಿಆರ್‍ಎಪಿ) ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಾರ್ಷಿಕ ಸುಧಾರಣಾ ಕ್ರಮಗಳ ಪರಿಶೀಲನಾ ವರದಿ ಇಂದು ಬಿಡುಗಡೆಯಾಗಿದೆ.

ಕಳೆದ ವರ್ಷ, ಡಿಪಿಐಐಟಿ ಸೂಚಿಸಿದ್ದ 187 ಸುಧಾರಣಾ ಕ್ರಮಗಳಲ್ಲಿ ಶೇ.100ರಷ್ಟು ಅನುಷ್ಠಾನಗೊಳಿಸಿದ್ದರೂ, ಕರ್ನಾಟಕ 2019ರಲ್ಲಿ 17ನೇ ಸ್ಥಾನಕ್ಕೆ ಕುಸಿದಿತ್ತು. ಹಲವು ಸುಧಾರಣಾ ಕ್ರಮಗಳ ಅನುಷ್ಠಾನದ ಜತೆಗೆ, ರಾಜ್ಯದ 30ಕ್ಕೂ ಹೆಚ್ಚು ಇಲಾಖೆಗಳ ನಡುವಿನ ಸಮನ್ವಯತೆ ಮತ್ತು ಪೂರಕ ಪ್ರಯತ್ನಗಳಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯ, ಈ ಶ್ರೇಣಿಗೆ ಏರಲು ಸಾಧ್ಯವಾಗಿದೆ. ಆಂಧ್ರ ಪ್ರದೇಶ, ಗುಜರಾತ್, ಹರಿಯಾಣ, ಪಂಜಾಬ್, ತಮಿಳುನಾಡು, ತೆಲಂಗಾಣ ಸಹ ‘ಅಗ್ರ ಸಾಧಕ’ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. 

ರ್ಯಾಂಕಿಂಗ್ ಹೇಗೆ?: ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಮಿಕರ ನಿಯಂತ್ರಣ ಕಾಯ್ದೆ, ಪರಿಸರ ಪರವಾನಗಿ, ಪ್ರಕ್ರಿಯೆಗಳ ಸರಳೀಕರಣ,  ಬಳಕೆದಾರರ ಸಂಪರ್ಕ, ಪ್ರತಿಕ್ರಿಯೆ, ಕುಂದುಕೊರತೆಗಳ ನಿವಾರಣೆ ಸೇರಿದಂತೆ ವಿವಿಧ ಅಂಶಗಳ ಸಮೀಕ್ಷೆ ನಡೆಸಿದ ಡಿಪಿಐಐಟಿ ಶ್ರೇಯಾಂಕ ನಿರ್ಧರಿಸುತ್ತದೆ.  

---------------------------------
ಸುಲಲಿತ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಕೈಗಾರಿಕಾ ಸೌಲಭ್ಯ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ಇದ್ದ ತೊಡಕು ನಿವಾರಿಸಲಾಗಿದೆ. ನಮ್ಮ ಸರಕಾರ ಸುಲಲಿತ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಿರುವುದರಿಂದ ಹೂಡಿಕೆದಾರರು ನಮ್ಮ ರಾಜ್ಯದಲ್ಲಿ ಹೆಚ್ಚು ಬಂಡವಾಳ ಹೂಡುತ್ತಿದ್ದಾರೆ.

ಮುರುಗೇಶ್ ನಿರಾಣಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ 

----------------------------------------
ರಾಜ್ಯದಲ್ಲಿ ಸುಲಲಿತ ವ್ಯವಹಾರಕ್ಕೆ ಪೂರಕವಾದ ಸುಧಾರಣಾ ಕ್ರಮಗಳ ಅನುಷ್ಠಾನವನ್ನು ಖಾತ್ರಿಪಡಿಸುವ ನೋಡಲ್ ಏಜೆನ್ಸಿ ‘ಕರ್ನಾಟಕ ಉದ್ಯೋಗ ಮಿತ್ರ' ಡಿಪಿಐಐಟಿ ಮಾಡಿದ ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಫಲವಾಗಿ ರಾಜ್ಯ ಇಂದು ಅಗ್ರ ಶ್ರೇಯಾಂಕ ಪಡೆಯಲು ಸಾಧ್ಯವಾಗಿದೆ. 

ಡಾ.ಇ.ವಿ.ರಮಣರೆಡ್ಡಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕೈಗಾರಿಕೆ ಇಲಾಖೆ

----------------------------------------------
ಕೊವಿಡ್ ಸಾಂಕ್ರಾಮಿಕದ ನಡುವೆಯೂ ರಾಜ್ಯದಲ್ಲಿ ಉದ್ಯಮ ಸ್ನೇಹಿ ಕ್ರಮಗಳ ಜಾರಿ ಮತ್ತು ಕೈಗಾರಿಕಾ ಪೂರಕ ಸೌಲಭ್ಯ ಒದಗಿಸುವಲ್ಲಿ ‘ಕರ್ನಾಟಕ ಉದ್ಯೋಗ ಮಿತ್ರ' ಸಫಲವಾಗಿದೆ. ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸುವ ಮೂಲಕ ರಾಜ್ಯ ಅಗ್ರ ಶ್ರೇಯಾಂಕ ಪಡೆಯುವಂತಾಗಿದೆ. 

- ಗುಂಜನ್ ಕೃಷ್ಣ, ಕೈಗಾರಿಕಾಭಿವೃದ್ಧಿ ಆಯುಕ್ತರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News