ಮಡಿಕೇರಿ: ಚೆಂಬು ಗ್ರಾಮದಲ್ಲಿ ತಾತ್ಕಾಲಿಕ ‘ಭೂಕಂಪನ ಮಾಪನ ಉಪಕೇಂದ್ರ’ ಸ್ಥಾಪನೆ

Update: 2022-06-30 17:04 GMT

ಮಡಿಕೇರಿ ಜೂ.30 : ಕೊಡಗು ಜಿಲ್ಲೆಯ ಚೆಂಬು ಗ್ರಾಮದ ಸರ್ಕಾರಿ ಪ್ರೌಢಶಾಲೆ ಬಳಿ ತಾತ್ಕಾಲಿಕವಾಗಿ ‘ಭೂಕಂಪನ ಮಾಪನ ಉಪಕೇಂದ್ರ’ ಸ್ಥಾಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಡಾ.ರಮೇಶ್ ಅವರು ತಿಳಿಸಿದ್ದಾರೆ.  

ಇತ್ತೀಚೆಗೆ ಕರಿಕೆ ಮತ್ತು ಚೆಂಬು ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕಂಪನ ಸಂಭವಿಸಿತ್ತು. ಈ ಹಿನ್ನೆಲೆ ಕರಿಕೆ ಮತ್ತು ಚೆಂಬು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಲಾಗಿದ್ದು, ಚೆಂಬು ಗ್ರಾಮದಲ್ಲಿ ಸೂಕ್ತ ವ್ಯವಸ್ಥೆ ಇರುವುದರಿಂದ ಭೂಕಂಪನ ಮಾಪನಉಪಕರಣಗಳನ್ನು(Broadband Seismometer, Accelerometer) ಅಳವಡಿಸಲಾಗಿದೆ ಎಂದು ಡಾ.ರಮೇಶ್ ಅವರು ಮಾಹಿತಿ ನೀಡಿದ್ದಾರೆ. 

ಭೂಕಂಪನ ಸಂಭವಿಸಿದ್ದಲ್ಲಿ ಭೂಕಂಪನ ಮಾಪನ ಉಪಕರಣ ರಿಕ್ಟರ್ ಮಾಪಕದಲ್ಲಿ ದಾಖಲಾಗುತ್ತದೆ. ತಾತ್ಕಾಲಿಕವಾಗಿ ಅಳವಡಿಸಿರುವ ಭೂಕಂಪನ ಮಾಪನ ಉಪಕರಣದಿಂದ ಭೂಕಂಪನ ಸಂಬಂಧಿಸಿದಂತೆ ಸವಿಸ್ತಾರವಾಗಿ ಕಾಲ ಕಾಲಕ್ಕೆ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. 

ಕರಿಕೆ ಮತ್ತು ಚೆಂಬು ಸುತ್ತಮುತ್ತ ಜೂನ್, 25 ರಂದು ಬೆಳಗ್ಗೆ 9 ಗಂಟೆ ವೇಳೆಯಲ್ಲಿ 2.3, ಜೂನ್, 28 ರಂದು ಬೆಳಗ್ಗೆ 7.45 ಗಂಟೆಗೆ 3.0, ಹಾಗೆಯೇ ಅಂದು ಸಂಜೆ 4.32 ಗಂಟೆ ವೇಳೆಯಲ್ಲಿ 1.8 ರಿಕ್ಟರ್ ಮಾಪಕದಲ್ಲಿ ಹಾರಂಗಿ ಜಲಾಶಯದಲ್ಲಿರುವ ಶಾಶ್ವತ ಭೂಕಂಪನ ಮಾಪನ ಕೇಂದ್ರದಲ್ಲಿ ಭೂಕಂಪನ ದಾಖಲಾಗಿತ್ತು ಎಂದು ರಮೇಶ್ ಅವರು ಹೇಳಿದ್ದಾರೆ. 

2018 ರಲ್ಲಿ ಭೂಮಿ ಬಿರುಕು ಬಿಟ್ಟಿದ್ದ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಲಾಗಿದ್ದು, ಈ ಭಾಗದಲ್ಲಿ ಈ ಬಾರಿ ಭೂಮಿ ಬಿರುಕು ಬಿಟ್ಟಿರುವುದಿಲ್ಲ ಎಂದು ವಿಜ್ಞಾನಿ ಡಾ.ರಮೇಶ್ ಅವರು ಹೇಳಿದ್ದಾರೆ.  

‘ಭೂಕಂಪನ ಸಂಭವಿಸಿದ್ದಲ್ಲಿ ಸಾರ್ವಜನಿಕರು ಗಾಬರಿಯಾಗದೆ ಮನೆಯಿಂದ ಹೊರಬರುವುದು, ವಿದ್ಯುತ್ ಮತ್ತು ಅಡುಗೆ ಅನಿಲ ಕಡಿತಗೊಳಿಸುವುದು (ಆಫ್ ಮಾಡುವುದು), ಕಟ್ಟಡದ ಮೇಲ್ಛಾವಣಿಯಲ್ಲಿ ಹೆಚ್ಚಿನ ಭಾರ ಇರದಂತೆ ಗಮನಹರಿಸುವುದು, ಇಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಲ್ಲಿ ಅನಾಹುತವನ್ನು ಕಡಿಮೆ ಮಾಡಬಹುದು ಎಂದು ಡಾ.ರಮೇಶ್ ಅವರು ಸಲಹೆ ಮಾಡಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಡಾ.ಜಗದೀಶ್, ಜಿಲ್ಲಾ ವಿಪತ್ತು ಪರಿಣತರಾದ ಅನನ್ಯ ವಾಸುದೇವ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಿರಿಯ ಭೂವಿಜ್ಞಾನಿ ಲಾಯಲ್ ಇತರರು ಭೂ ವೀಕ್ಷಣಾ ತಂಡದಲ್ಲಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News